ವೆಸ್ಟ್ ಇಂಡೀಸ್: ಟ್ರಿನಿಡಾಡ್ನಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 200 ರನ್ಗಳ ಭರ್ಜರಿ ಜಯ ಸಾಧಿಸುವ ಮೂಲಕ ಏಕದಿನ ಸರಣಿಯನ್ನು ವಶಪಡಿಸಿಕೊಂಡಿದೆ. ಈ ಸಂತಸದ ನಡುವೆ ತಂಡದ ನಾಯಕ ಹಾರ್ದಿಕ್ ಪಾಂಡ್ಯ, ವಿಂಡೀಸ್ ಮಂಡಳಿಯ ವಿರುದ್ಧ ಹರಿಹಾಯ್ದಿದ್ದಾರೆ.
ವಾಸ್ತವವಾಗಿ 3ನೇ ಏಕದಿನ ಪಂದ್ಯ ಮುಗಿದ ಬಳಿಕ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಬಳಿ ಬ್ರಿಯಾನ್ ಲಾರಾ ಕ್ರಿಕೆಟ್ ಸ್ಟೇಡಿಯಂನಲ್ಲಿನ ಸೌಲಭ್ಯಗಳ ಬಗ್ಗೆ ಪ್ರಶ್ನೆ ಕೇಳಲಾಯಿತು. ಇದಕ್ಕೆ ಉತ್ತರಿಸಿದ ಹಾರ್ದಿಕ್, ಇದು ಅತ್ಯುತ್ತಮವಾದ ಸ್ಥಳಗಳಲ್ಲಿ ಒಂದಾಗಿದೆ ಎಂದರು.
ಆದರೆ ಆ ಬಳಿಕ ವಿಂಡೀಸ್ ಮಂಡಳಿಯ ವೈಫಲ್ಯಗಳ ಮಾತನಾಡಲಾರಂಭಿಸಿದ ಪಾಂಡ್ಯ, ‘ನಾವು ಕಳೆದ ವರ್ಷ ವಿಂಡೀಸ್ ಪ್ರವಾಸ ಮಾಡಿದ್ದಾಗಲೂ ನಮಗೆ ವಿಂಡೀಸ್ ಕ್ರಿಕೆಟ್ ಮಂಡಳಿ ಉತ್ತಮ ವ್ಯವಸ್ಥೆ ಕಲ್ಪಿಸುವಲ್ಲಿ ವಿಫಲವಾಗಿತ್ತು. ಇದೀಗ ಈ ಸರಣಿಯಲ್ಲೂ ಆ ವೈಫಲ್ಯ ಮುಂದುವರೆದಿದೆ. ವೆಸ್ಟ್ ಇಂಡೀಸ್ ಬೋರ್ಡ್ ಈ ಬಗ್ಗೆ ಕಾಳಜಿ ವಹಿಸಬೇಕಿದೆ. ನಮಗೆ ಯಾವುದೇ ಐಷಾರಾಮಿ ಸೌಕರ್ಯ ಬೇಡ. ಆದರೆ ಕನಿಷ್ಠ ಪಕ್ಷ ಮೂಲ ಸೌಕರ್ಯಗಳನ್ನಾದರೂ ಸರಿಯಾಗಿ ಕಲ್ಪಿಸಬೇಕು’ ಎಂದು ಪಾಂಡ್ಯ ಹೇಳಿದ್ದಾರೆ.
ಏಕದಿನ ಸರಣಿ ಆರಂಭಕ್ಕೂ ಮುನ್ನ ಟೀಂ ಇಂಡಿಯಾ ಟ್ರಿನಿಡಾಡ್ನಿಂದ ಬಾರ್ಬಡೋಸ್ಗೆ ತಡರಾತ್ರಿ ವಿಮಾನ ಪ್ರಯಾಣ ಮಾಡಬೇಕಿತ್ತು. ಆದರೆ ವಿಮಾನ ನಿಗದಿತ ಸಮಯಕ್ಕೆ ಹಾರದೆ, ಸುಮಾರು ನಾಲ್ಕು ಗಂಟೆಗಳಷ್ಟು ವಿಳಂಬವಾಯಿತು. ಇದರಿಂದ ಅಸಮಾಧಾನಗೊಂಡಿದ್ದ ಭಾರತೀಯ ಕ್ರಿಕೆಟಿಗರು ಈ ಬಗ್ಗೆ ಬಿಸಿಸಿಐ ಬಳಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು.