ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿವೆ. ಇತ್ತೀಚೆಗೆ ನಡೆದ ಕೋಲ್ಕತ್ತಾ ಆರ್​ಜಿ ಕಾರ್​ ಮೆಡಿಕಲ್​ ಕಾಲೇಜಿನಲ್ಲಿ ನಡೆದ ಮಹಿಳಾ ವೈದ್ಯೆಯ ಅತ್ಯಾಚಾರ ಪ್ರಕರಣ ದೇಶವನ್ನೇ ತಲ್ಲಣಗೊಳಿಸಿದೆ.

ಆರೋಪಿಗೆ ಕಠಿಣ ಶಿಕ್ಷೆಯಾಗಬೇಕು ಎಂಬ ಒಕ್ಕೊರಳಿನ ಒತ್ತಾಯ ಜೋರಾಗಿ ಕೇಳಿಬರುತ್ತಿದೆ. ಕ್ರೀಡಾ ಜಗತ್ತು ಕೂಡ ಒತ್ತಾಯಿಸಿದೆ. ಟೀಂ ಇಂಡಿಯಾದ ಆಟಗಾರ ಯುಜ್ವೇಂದ್ರ ಚಹಾಲ್ ಕೂಡ ಈ ಘೋರ ಅಪರಾಧದಲ್ಲಿ ಭಾಗಿಯಾದವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಹೇಳಿದ್ದಾರೆ

ಇನ್​​ಸ್ಟಾಗ್ರಾಂನಲ್ಲಿ ಬರೆದುಕೊಂಡಿರುವ ಯುಜ್ವೇಂದ್ರ ಚಹಾಲ್, ‘ಸಾಯುವ ತನಕ ನೇಣು ಹಾಕ್ತೀರಾ? ಇಲ್ಲ. 90 ಡಿಗ್ರಿಗಳಲ್ಲಿ ಆತನ ಕಾಲು ಮುರಿಯಿರಿ. ಕಾಲರ್​ ಬೋನ್ಸ್​​ ​ಮುರಿಯಿರಿ. ಖಾಸಗಿ ಭಾಗಗಳಿಗೆ ಗಾಯ ಮಾಡಿ. ಎಲ್ಲಾ ಭಯಾನಕ ಚಿತ್ರಹಿಂಸೆಗಳನ್ನು ಅನುಭವಿಸಲು ಅತ್ಯಾಚಾರಿಯನ್ನು ಜೀವಂತವಾಗಿಡಿ. ನಂತರ ಗಲ್ಲಿಗೇರಿಸಿ’ ಎಂದು ಬರೆದುಕೊಂಡಿದ್ದಾರೆ.

ಭಾರತದ ಮಾಜಿ ನಾಯಕ ಸೌರವ್​ ಗಂಗೂಲಿ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದರು, ‘ಇದೊಂದು ಹೇಯ ಘಟನೆ, ಇಂತಹ ಅಪರಾಧಗಳಿಗೆ ಕ್ಷಮೆ ಕೇಳಲು ಸಾಧ್ಯವಿಲ್ಲ’ ಎಂದು ಹೇಳಿದ್ದರು. ‘ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು. ಇಂತಹ ಘಟನೆ ಎಲ್ಲಬೇಕಾದರೂ ನಡೆಯಬಹುದು. ಆದರೆ ಆಸ್ಪತ್ರೆಯೊಳಗೆ ನಡೆದಿರುವುದು ದುರದೃಷ್ಟಕರ’ ಎಂದು ಗಂಗೂಲಿ ಹೇಳಿದ್ದಾರೆ.