ಮುಂಬಯಿ: ಇಂಗ್ಲೆಂಡಿನಲ್ಲಿ ಮುಂದಿನ ತಿಂಗಳು ನಡೆಯಲಿರುವ ವಿಶ್ವಕಪ್ ಕ್ರಿಕೆಟಿಗೆ ಟೀಂ ಇಂಡಿಯಾವನ್ನು ಆಯ್ಕೆ ಮಾಡಲಾಗಿದ್ದು, ದಿನೇಶ್ ಕಾರ್ತಿಕ್ ಅಂತಿಮ 15ರ ಬಳಗದಲ್ಲಿ ಸ್ಥಾನ ಪಡೆದಿದ್ದಾರೆ.
ಮೇ 30ರಿಂದ ಜುಲೈ 14ರ ತನಕ ಇಂಗ್ಲೆಂಡಿನಲ್ಲಿ ವಿಶ್ವಕಪ್ ನಡೆಯಲಿದ್ದು, ಯುವ ವಿಕೆಟ್ ಕೀಪರ್ ರಿಷಬ್ ಪಂತ್ ಬದಲಿಗೆ ಕಾರ್ತಿಕ್ ಆಯ್ಕೆ ಮಾಡಲಾಗಿದೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಆಯ್ಕೆ ಸಮಿತಿ, ತಂಡದ ಕೋಚ್ ರವಿಶಾಸ್ತ್ರಿ ಮತ್ತು ನಾಯಕ ವಿರಾಟ್ ಕೊಹ್ಲಿ ಜತೆಗೆ ಚರ್ಚೆ ನಡೆಸಿದ ಬಳಿಕ ತಂಡವನ್ನು ಘೋಷಿಸಲಾಗಿದೆ.
ಮಹೇಂದ್ರ ಸಿಂಗ್ ಧೋನಿ ಅವರು ಒಂದು ವೇಳೆ ಗಾಯಾಳುವಾದರೆ ಮಾತ್ರ ದಿನೇಶ್ ಕಾರ್ತಿಕ್ ತಂಡದಲ್ಲಿ ಸ್ಥಾನ ಪಡೆಯುವರು ಎಂದು ಆಯ್ಕೆ ಸಮಿತಿ ಅಧ್ಯಕ್ಷ ಎಂಎಸ್ ಕೆ ಪ್ರಸಾದ್ ತಿಳಿಸಿದರು.
ವಿಜಯ್ ಶಂಕರ್ ನಾಲ್ಕನೇ ಕ್ರಮಾಂಕದ ಆಟಗಾರನಾಗಿ ಆಯ್ಕೆಯಾಗಿದ್ದರೆ, ಕೆಎಲ್ ರಾಹುಲ್ ಹೆಚ್ಚುವರಿ ಆರಂಭಿಕನಾಗಿ ತಂಡದಲ್ಲಿ ಸ್ಥಾನ ಪಡೆದಿರುವರು. ಅಂಬಾಟಿ ರಾಯುಡು ಅವಕಾಶ ವಂಚಿತರಾದರು.
ವಿಶ್ವಕಪ್ ಗೆ ಟೀಂ ಇಂಡಿಯಾ
ವಿರಾಟ್ ಕೊಹ್ಲಿ(ನಾಯಕ), ಶಿಖರ್ ಧವನ್, ರೋಹಿತ್ ಶರ್ಮಾ, ಎಂಎಸ್ ಧೋನಿ, ರವೀಂದ್ರ ಜಡೇಜಾ, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ, ಕೇದಾರ್ ಜಾಧವ್, ಜಸ್ಪ್ರೀತ್ ಬುಮ್ರಾ, ಹಾರ್ದಿಕ್ ಪಾಂಡ್ಯ, ಕುಲದೀಪ್ ಯಾದವ್, ಯಜುವೇಂದ್ರ ಚಾಹಲ್, ದಿನೇಶ್ ಕಾರ್ತಿಕ್, ಕೆಎಲ್ ರಾಹುಲ್ ಮತ್ತು ವಿಜಯ್ ಶಂಕರ್.