ಮುಂಬೈ: ಮುಂಬೈ ಕ್ರಿಕೆಟ್ ತಂಡ ಕೋವಿಡ್-19 ಸುಳಿಗೆ ಸಿಲುಕಿದೆ. ನಾಲ್ವರು ಆಟಗಾರರ ಫಲಿತಾಂಶ ಪಾಸಿಟಿವ್ ಬಂದಿದೆ. ಅಜಿಂಕ್ಯ ರಹಾನೆ ನೇತೃತ್ವದ ಮುಂಬೈ ತಂಡ ಸೈಯದ್ ಮುಷ್ತಾಖ್ ಅಲಿ ಟ್ರೋಫಿ ಟಿ20 ಸರಣಿಗಾಗಿ ಗುವಾಹಟಿಗೆ ತೆರಳಲು ಅಣಿಯಾಗಿತ್ತು. ಆಗ ಮುಂಬೈ ವಿಮಾನ ನಿಲ್ದಾಣದಲ್ಲಿ ನಡೆಸಲಾದ ಕೋವಿಡ್ ಪರೀಕ್ಷೆಯಲ್ಲಿ ನಾಲ್ವರ ಫಲಿತಾಂಶ ಪಾಸಿಟಿವ್ ಬಂದಿದೆ. ಇವರನ್ನು ಅಲ್ಲಿಂದಲೇ ಮನೆಗೆ ಕಳುಹಿಸಲಾಯಿತು.
ಋಣಾತ್ಮಕ ಫಲಿತಾಂಶ ಪಡೆದವರು ಗುವಾಹಟಿಗೆ ಪ್ರಯಾಣ ಬೆಳೆಸಿದರು. ಆಲ್ರೌಂಡರ್ ಶಮ್ಸ್ ಮುಲಾನಿ, ಮಧ್ಯಮ ಕ್ರಮಾಂಕದ ಬ್ಯಾಟರ್ ಸರ್ಫರಾಜ್ ಖಾನ್, ಲೆಗ್ಸ್ಪಿನ್ನರ್ ಪ್ರಶಾಂತ್ ಸೋಲಂಕಿ ಮತ್ತು ಆಲ್ರೌಂಡರ್ ಸಾಯಿರಾಜ್ ಪಾಟೀಲ್ ಅವರದು ಪಾಸಿಟಿವ್ ಫಲಿತಾಂಶವಾಗಿತ್ತು. ನೆಗೆಟಿವ್ ಫಲಿತಾಂಶ ಬಂದೊಡನೆ ಇವರೆಲ್ಲ ತಂಡವನ್ನು ಸೇರಿಕೊಳ್ಳಬಹುದಾಗಿದೆ. ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಪಂದ್ಯಾವಳಿ ನ.4ರಿಂದ ನ.22ರವರೆಗೆ ನಡೆಯಲಿದೆ.