ನವದೆಹಲಿ: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ಅಧ್ಯಕ್ಷನಾಗಿ ಮಾಡಬೇಕಿರುವ ಕೆಲಸಗಳನ್ನು ತಾವು ಅಚ್ಚುಕಟ್ಟಾಗಿ ಮಾಡುತ್ತಿರುವುದಾಗಿ ಸೌರವ್ ಗಂಗೂಲಿ ಹೇಳಿದ್ದಾರೆ.
ಮಂಡಳಿಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡು 26 ತಿಂಗಳುಗಳು ಪೂರೈಸಿರುವ ಸಂದರ್ಭದಲ್ಲಿ ಸುದ್ದಿಸಂಸ್ಥೆಗೆ ಅವರು ಶುಕ್ರವಾರ ಸಂದರ್ಶನ ನೀಡಿದ್ದಾರೆ.
‘ಅಧ್ಯಕ್ಷನಾಗುವ ಮುನ್ನ ಭಾರತ ತಂಡದ ಆಟಗಾರನಾಗಿ, ನಾಯಕನಾಗಿ ಆಡಿದ್ದೇನೆ. 424 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದೇನೆ ಎಂಬುದನ್ನು ಇಲ್ಲಿ ಎಲ್ಲರಿಗೂ ನೆನಪಿಸಲು ಇಚ್ಛಿಸುತ್ತೇನೆ. ನಾಯಕತ್ವದ ಹೊಣೆಗಾರಿಗೆ ಅರಿತಿರುವೆ’ಎಂದು ಟೀಕಾಕಾರರಿಗೆ ತಿರುಗೇಟು ನೀಡಿದ್ದಾರೆ.
‘ಮಂಡಳಿಯ ಕಾರ್ಯದರ್ಶಿ ಜಯ್ ಶಾ, ಜಂಟಿ ಕಾರ್ಯದರ್ಶಿ ಜಯೇಶ್ ಜಾರ್ಜ್ ಮತ್ತು ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರೊಂದಿಗೆ ಇರುವ ಚಿತ್ರವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ನೋಡಿದೆ.
ಅದರಲ್ಲಿ ನಾನು ಆಯ್ಕೆ ಸಮಿತಿ ಸಭೆಯಲ್ಲಿ ಭಾಗವಹಿಸಿದ್ದ ಚಿತ್ರ ಎಂದು ಹೇಳಲಾಗಿದೆ. ಆದರೆ ಅದು ತಪ್ಪು. ಆಯ್ಕೆ ಸಭೆ ಅದಾಗಿರಲಿಲ್ಲ. ಜಾರ್ಜ್ ಸಮಿತಿಯ ಸದಸ್ಯನೂ ಅಲ್ಲ’ ಎಂದು ಗಂಗೂಲಿ ಸ್ಪಷ್ಟಪಡಿಸಿದ್ದಾರೆ.
‘ಜಯ್ ಶಾ, ಅರುಣ್ ಧುಮಾಲ್ ಮತ್ತು ಜಯೇಶ್ ಅವರು ವಿಶ್ವಾಸಾರ್ಹರು. ಅವರೊಂದಿಗೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವೆ. ಅದರಲ್ಲೂ ಎರಡು ವರ್ಷ ಕೋವಿಡ್ ಸಂಕಷ್ಟದ ಕಾಲದಲ್ಲಿಯೂ ಕ್ರಿಕೆಟ್ ಆಡಳಿತ ಕುಸಿಯದಂತೆ ನೋಡಿಕೊಂಡಿದ್ದು ಹೆಗ್ಗಳಿಕೆ’ ಎಂದು ವಿವರಿಸಿದರು.
‘ಭಾರತ ಟೆಸ್ಟ್ ತಂಡಕ್ಕೆ ಹೊಸ ನಾಯಕನ ಆಯ್ಕೆಯಲ್ಲಿ ಕೆಲವು ಮಾನದಂಡಗಳನ್ನು ನೋಡಲಾಗುತ್ತಿದೆ. ಆಯ್ಕೆ ಸಮಿತಿಯ ಸದಸ್ಯರ ಮನದಲ್ಲಿ ಸಂಭವನೀಯ ಆಟಗಾರನ ಬಗ್ಗೆ ಕಲ್ಪನೆ ಇರಬಹುದೆಂಬ ವಿಶ್ವಾಸವಿದೆ. ಅವರು ಮಂಡಳಿಯ ಪದಾಧಿಕಾರಿಗಳೊಂದಿಗೆ ಈ ಕುರಿತು ಚರ್ಚೆ ಮಾಡಬಹುದು’ ಎಂದರು.
‘ಶ್ರೀಲಂಕಾ ಎದುರಿನ ಟೆಸ್ಟ್ ಸರಣಿ ಆರಂಭಕ್ಕೂ ಮುನ್ನವೇ ರಣಜಿ ಟ್ರೋಫಿ ಟೂರ್ನಿ ಆರಂಭವಾಗಲಿದೆ. ಅದರಲ್ಲಿ ಆಡಲು ಅಜಿಂಕ್ಯ ರಹಾನೆ ಮತ್ತು ಚೇತೇಶ್ವರ್ ಪೂಜಾರ ಅವರಿಗೆ ರಣಜಿಯಲ್ಲಿ ಆಡಲು ಸಲಹೆ ನೀಡಿದ್ದೇನೆ. ಅದರಿಂದ ಅವರು ತಮ್ಮ ಲಯವನ್ನು ಕಂಡುಕೊಳ್ಳಲು ಅನುಕೂಲವಾಗಬಹುದು’ ಎಂದರು.