ನವದೆಹಲಿ: ಪಾಕಿಸ್ತಾನವು ಕ್ರಿಕೆಟ್ ಆಡಲು ಎಲ್ಲಾ ರೀತಿಯಿಂದ ಸುರಕ್ಷಿತವಾಗಿದೆ ಎಂದು ಅಲ್ಲಿನ ಕ್ರಿಕೆಟ್ ಬೋರ್ಡ್ ಘೋಷಿಸುತ್ತಾ ಇದ್ದರೂ ಅಲ್ಲಿಗೆ ಪ್ರವಾಸ ಮಾಡಲು ಯಾವುದೇ ತಂಡಗಳು ಮುಂದೆ ಬರುತ್ತಿಲ್ಲ. ಶ್ರೀಲಂಕಾ ಆಟಗಾರರು ಕೂಡ ಶನಿವಾರ ಪಾಕ್ ಪ್ರವಾಸಗೈಯಲು ನಿರಾಕರಿಸಿದ್ದಾರೆ.
2009ರಲ್ಲಿ ಲಾಹೋರ್ ನ ಗಡಾಫಿ ಸ್ಟೇಡಿಯಂ ಹೊರಗಡೆ ಶ್ರೀಲಂಕಾ ತಂಡದ ಬಸ್ ಮೇಲೆ ಉಗ್ರರು ದಾಳಿ ಮಾಡಿದ್ದರು. ಇದರ ಬಳಿಕ ಪಾಕಿಸ್ತಾನದಲ್ಲಿ ಯಾವುದೇ ಅಂತಾರಾಷ್ಟ್ರೀಯ ಸರಣಿಗಳು ನಡೆದಿಲ್ಲ.
ಲಾಹೋರ್ ಗೆ ಪ್ರಯಾಣಿಸಲು ನಮಗೆ ಇಷ್ಟವಿಲ್ಲ ಎಂದು ಶ್ರೀಲಂಕಾ ಕ್ರಿಕೆಟ್ ಬೋರ್ಡ್ ಗೆ ಒಪ್ಪಂದದಲ್ಲಿರುವ 40 ಮಂದಿ ಆಟಗಾರರು ಪತ್ರ ನೀಡಿದ್ದಾರೆ.
ಶ್ರೀಲಂಕಾ ಕ್ರಿಕೆಟ್ ಬೋರ್ಡ್ ಆದಷ್ಟು ಬೇಗನೆ ಆಟಗಾರರೊಂದಿಗೆ ಮಾತುಕತೆ ನಡೆಸಲಿದೆ. ಸರಣಿ ಮಧ್ಯದಲ್ಲಿ ಅವರಿಗೆ ತೊಂದರೆ ನೀಡಲು ಬಯಸಲ್ಲ. ನಮಗೆ ಬೇರೆ ಯಾವುದೇ ಆಯ್ಕೆಯಿಲ್ಲ. ಮಾತುಕತೆ ನಡೆಸಬೇಕಾಗಿದೆ ಎಂದು ಶ್ರೀಲಂಕಾ ಕ್ರಿಕೆಟ್ ಬೋರ್ಡ್ ನ ಅಧಿಕಾರಿಗಳು ತಿಳಿಸಿದರು.
ಲಾಹೋರ್ ನ ಪರಿಸ್ಥಿತಿ ಬಗ್ಗೆ ಐಸಿಸಿಯ ತಂಡವೊಂದು ಆಟಗಾರರಿಗೆ ಮನವರಿಕೆ ಮಾಡಿಕೊಡಲಿದೆ ಎಂದು ವರದಿಗಳು ಹೇಳಿವೆ.