ಕೋಲ್ಕತ್ತಾ: ಕ್ರಿಕೆಟ್ ಲೋಕದಲ್ಲಿ ಜೀವಮಾನ ಸಾಧನೆಯನ್ನು ತೋರಿದ ಖ್ಯಾತ ಆರಂಭಿಕ ಆಟಗಾರ ಸುನೀಲ್ ಗವಾಸ್ಕರ್ ಅವರಿಗೆ ಧ್ಯಾನ್ ಚಂದ್ ಪುರಸ್ಕಾರ ನೀಡುವಂತೆ ಬಿಸಿಸಿಐ ಶಿಫಾರಸು ಮಾಡಿದೆ.
ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರಿಗೆ ದ್ರೋಣಾಚಾರ್ಯ ಪ್ರಶಸ್ತಿ, ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅವರಿಗೆ ರಾಜೀವ್ ಗಾಂಧಿ ಖೇಲ್ ರತ್ನ ಪುರಸ್ಕಾರ ನೀಡಲು ಸರ್ಕಾರಕ್ಕೆ ಬಿಸಿಸಿಐ ಶಿಫಾರಸು ಮಾಡಿದೆ. ನಾಯಕ ವಿರಾಟ್ ಕೊಯ್ಲಿ ಅವರ ಹೆಸರನ್ನು ಖೇಲ್ ರತ್ನ ಪ್ರಶಸ್ತಿಗೆ ಬಿಸಿಸಿಐ ಎರಡನೇ ಬಾರಿಗೆ ಶಿಫಾರಸು ಮಾಡಿದೆ.
ಇನ್ನು ವಿಶೇಷವಾಗಿ 19 ವರ್ಷದೊಳಗಿನ ಭಾರತ ತಂಡ ವಿಶ್ವಕಪ್ ಗೆದ್ದು, ಭಾರತಕ್ಕೆ ಗೌರವ ತಂದುಕೊಟ್ಟಿತ್ತು. ಈ ತಂಡಕ್ಕೆ ರಾಹುಲ್ ದ್ರಾವಿಡ್ ಅವರು ತರಬೇತಿ ನೀಡಿ ಯಶಸ್ವಿಯಾಗಿ ಮುನ್ನಡೆಸಿದ್ದರು. ಈ ಕಾರಣಕ್ಕಾಗಿ ರಾಹುಲ್ ದ್ರಾವಿಡ್ ಅವರ ಹೆಸರನ್ನು ಶಿಫಾರಸು ಮಾಡಲಾಗಿದೆ ಎಂದು ಬಿಸಿಸಿಐ ಆಡಳಿತಾಧಿಕಾರಿಗಳ ಮುಖ್ಯಸ್ಥ ವಿನೋದ್ ರಾಯ್ ತಿಳಿಸಿದ್ದಾರೆ.