ಇಂಗ್ಲೆಂಡ್:ಟೀಮ್ ಇಂಡಿಯಾ ಟೆಸ್ಟ್ ಕ್ರಿಕೆಟ್ನ ಪ್ರಮುಖ ಬ್ಯಾಟ್ಸ್ಮನ್ ಹನುಮ ವಿಹಾರಿ ಸದ್ಯ ಇಂಗ್ಲೆಂಡ್ನಲ್ಲಿದ್ದುಕೊಂಡು ಕೌಂಟಿ ಕ್ರಿಕೆಟ್ನಲ್ಲಿ ಭಾಗಿಯಾಗಿದ್ದಾರೆ. ಈ ಸಂದರ್ಭದಲ್ಲಿ ಭಾರತದಲ್ಲಿ ಕೊರೊನಾ ವೈರಸ್ ಪ್ರಕರಣಗಳು ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದೆ. ಆದರೆ ದೂರದ ಇಂಗ್ಲೆಂಡ್ನಲ್ಲಿ ತಾನು ಸುರಕ್ಷಿತವಾಗಿದ್ದೇನೆಂದು ಸುಮ್ಮನಿರದ ಹನುಮ ವಿಹಾರಿ ಅಲ್ಲಿದ್ದುಕೊಂಡೇ ಭಾರತೀಯರಿಗೆ ನೆರವಾಗುತ್ತಿದ್ದಾರೆ.
ಕಳೆದ ಒಂದು ತಿಂಗಳಿನಿಂದ ಹನುಮ ವಿಹಾರಿ ವಾರ್ವಿಕ್ಶೈರ್ ಪರವಾಗಿ ಇಂಗ್ಲೆಂಡ್ನಲ್ಲಿ ಕ್ರಿಕೆಟ್ನಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ಟ್ವಿಟ್ಟರ್ಅನ್ನು ಬಳಸಿಕೊಂಡು ಹನುಮವಿಹಾರಿ ಅಗತ್ಯವಿರುವ ಕೊರೊನಾ ರೋಗಿಗಳು ವೈದ್ಯಕೀಯ ನೆರವು ಕೇಳುತ್ತಿರುವವಾಗ ಅಲ್ಲಿಂದಲೇ ಸಹಾಯವನ್ನು ಮಾಡುತ್ತಿದ್ದಾರೆ.
ಮೂಲತಃ ಸಿಕಂದರಾಬಾದ್ನವರಾದ ವಿಹಾರಿ ಕಳೆದ ಒಂದು ವಾರದಿಂದೀಚೆಗೆ ಆಂದ್ರ ಪ್ರದೇಶ ಹಾಗೂ ತೆಲಂಗಾಣದ ಹಲವು ಕೊರೊನಾ ಸೋಂಕಿತರಿಗೆ ವೈದ್ಯಕೀಯ ಅಗತ್ಯಗಳನ್ನು ಪೂರೈಸುವಲ್ಲಿ ನೆರವಾಗಿದ್ದಾರೆ.
ಕೆಲವು ಬಾರಿ ಮನವಿಗಳನ್ನು ಹಂಚಿಕೊಂಡರೆ ಇನ್ನೂ ಕೆಲ ಸಂದರ್ಭಗಳಲ್ಲಿ ತಾವೇ ಅಗತ್ಯ ಸೇವೆಗಳನ್ನು ಪೂರೈಕೆ ಮಾಡುವಲ್ಲಿಯೂ ಯಶಸ್ವಿಯಾಗಿದ್ದಾರೆ.
ಕರ್ನೂಲ್ನಿಂದ ಪ್ರತಾಚ್ ಆಚಾರಿ ಎಂಬವರು ಪ್ಲಾಸ್ಮಾಗಾಗಿ ಮನವಿಯನ್ನು ಟ್ವಿಟ್ಟರ್ನಲ್ಲಿ ಮಾಡುದ್ದರು. ಈ ಮನವಿಗೆ ಸ್ಪಂದಿಸಿದ ಹನುಮ ವಿಹಾರಿ ತಮ್ಮ ಸಂಪರ್ಕವನ್ನು ಬಳಸಿಕೊಂಡು ವ್ಯವಸ್ಥೆ ಮಾಡುವಲ್ಲಿ ಯಶಸ್ವಿಯಾಗಿದ್ದರು. “ನಾಳೆ ಮುಂಜಾನೆಯೊಳಗೆ ವ್ಯವಸ್ಥೆಗಳು ಆಗುತ್ತದೆ” ಎಂದು ಟ್ವೀಟ್ನಲ್ಲಿ ಪ್ರತಿಕ್ರಿಯಿಸಿದ್ದಾರೆ.
ಹೀಗೆ ಬೆಡ್, ವೆಂಟಿಲೇಟರ್, ಔಷಧಿಗಳ ಬೇಡಿಕೆಗಳು ಕೂಡ ಬಂದ ಸಂದರ್ಭದಲ್ಲಿ ಹನುವ ವಿಹಾರಿ ನೆರವಾಗಿರುವುದು ಅವರ ಟ್ವೀಟ್ಟರ್ ಅಪ್ಡೇಟ್ ಗಳನ್ನು ಗಮನಿಸಿದಾಗ ತಿಳಿಯುತ್ತದೆ.