ಮಡಿಕೇರಿ: ಗೌಡ ಕುಟುಂಬಗಳ ನಡುವಿನ ಕ್ರಿಕೆಟ್ ಪಂದ್ಯಾವಳಿಯಾದ ಕೆದಂಬಾಡಿ ಕ್ರಿಕೆಟ್ ಕಪ್ ನಲ್ಲಿ ದಂಬೆಕೋಡಿ ತಂಡ ಎದುರಾಳಿ ತಳೂರು ತಂಡವನ್ನು 34ರನನ್ ಗಳಿಂದ ಸೋಲಿಸುವ ಮೂಲಕ ಒಡೆತನ ಸಾಧಿಸಿದೆ.
ಕಳೆದ 23 ವರ್ಷಗಳಿಂದ ಕೆದಂಬಾಡಿ ಕ್ರಿಕೆಟ್ ಕ್ಲಬ್ ವತಿಯಿಂದ ಪಂದ್ಯಾವಳಿಯನ್ನು ನಡೆಸಿಕೊಂಡು ಬರಲಾಗುತ್ತಿದ್ದ ಈ ಬಾರಿಯ 24ನೇ ವರ್ಷದ ಪಂದ್ಯಾವಳಿ ಭಾಗಮಂಡಲ ಸಮೀಪದ ಚೆಟ್ಟಿಮಾನಿಯಲ್ಲಿ ಆಯೋಜಿಸಲಾಗಿತ್ತು. ಈ ಪಂದ್ಯಾವಳಿಯಲ್ಲಿ ಗೌಡ ಕುಟುಂಬಗಳ ತಂಡಗಳು ಭಾಗವಹಿಸಿದ್ದು, ಫೈನಲ್ ಪಂದ್ಯದಲ್ಲಿ ದಂಬೆಕೋಡಿ ಮತ್ತು ತಳೂರು ತಂಡಗಳು ಮುಖಾಮುಖಿಯಾಗಿದ್ದವು.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ದಂಬೆಕೋಡಿ ತಂಡವು ಎಂಟು ವಿಕೆಟ್ ನಷ್ಟಕ್ಕೆ 66 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಆಡಿದ ತಳೂರು ತಂಡವು ತನ್ನೆಲ್ಲ ವಿಕೆಟ್ ಕಳೆದುಕೊಂಡು 42 ರನ್ ಗಳಿಸಲಷ್ಟೆ ಶಕ್ತವಾಯಿತಲ್ಲದೆ ರನ್ನರ್ಸ್ ಗೆ ತೃಪ್ತಿಪಟ್ಟುಕೊಂಡಿತು. ಇದಕ್ಕೂ ಮೊದಲು ನಡೆದ ಸೂಪರ್ ಓವರ್ ಪಂದ್ಯದಲ್ಲಿ ಬೇಕಲ್ ತಂಡವು ಮೂರನೇ ಸ್ಥಾನ ಗಳಿಸಿದರೆ ಉಳುವಾರನ ತಂಡವು ನಾಲ್ಕನೇ ಸ್ಥಾನ ಗಳಿಸಿತು. ಸೆಮಿಫೈನಲ್ ಪಂದ್ಯದಲ್ಲಿ ತಳೂರು ಮತ್ತು ಬೇಕಲ್ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಬೇಕಲ್ ತಂಡವು 8 ಓವರ್ ನಲ್ಲಿ 41 ರನ್ ಗಳಿಸಿತು. ಉತ್ತರವಾಗಿ ಆಡಿದ ತಳೂರು ತಂಡವು 6 ವಿಕೆಟ್ ಕಳೆದುಕೊಂಡು ಗುರಿಮುಟ್ಟಿತು. ದಂಬೆಕೋಡಿ ಮತ್ತು ಉಳುವಾರನ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ದಂಬೆಕೋಡಿ ತಂಡವು 5 ವಿಕೆಟ್ ಕಳೆದುಕೊಂಡು 95 ರನ್ ಗಳಿಸಿತು. ಉತ್ತರವಾಗಿ ಆಡಿದ ಉಳುವಾರನ ತಂಡ ತನ್ನ ಎಲ್ಲಾ ವಿಕೆಟ್ ಕಳೆದುಕೊಂಡು 34 ರನ್ ಗಳ ಸೋಲನ್ನು ಅನುಭವಿಸಿತು.
ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಶಾಸಕ ಕೆ.ಜಿ. ಬೋಪಯ್ಯ ಅವರು ಕ್ರೀಡಾಕೂಟಗಳಿಂದ ಗ್ರಾಮೀಣ ಪ್ರದೇಶದ ಪ್ರತಿಭೆಗಳನ್ನು ಹೊರತರುವದರೊಂದಿಗೆ ಉತ್ತಮ ಸಂದೇಶ ಸಾರುವಂತಾಗುತ್ತಿದೆ. ಪ್ರತಿಯೊಬ್ಬರು ಕ್ರೀಡಯೊಂದಿಗೆ ವಿದ್ಯೆಗೆ ಹೆಚ್ಚಿನ ಮಹತ್ವ ನೀಡಿ ಮುಂದೆ ಬರಬೇಕಿದೆ ಎಂದರು.
ಅರೆಭಾಷೆ ಅಕಾಡೆಮಿ ಅಧ್ಯಕ್ಷ ಕೊಲ್ಯದ ಗಿರೀಶ್ ಮಾತನಾಡಿ ಕ್ರೀಡೆ ಪ್ರತಿಯೊಬ್ಬರ ಬದುಕಿಗೂ ಅತಿಮುಖ್ಯವಾಗಿದ್ದು, ದೈಹಿಕ ಆರೋಗ್ಯದೊಂದಿಗೆ ಜನಾಂಗ ಬಾಂಧವರಲ್ಲಿ ಸಾಮರಸ್ಯ ಮೂಡಿಸಲು ಸಾಧ್ಯವಾಗುತ್ತದೆ ಎಂದರು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎ. ಹರೀಶ್ ಮಾತನಾಡಿ ಇಂದಿನ ಯುವಪೀಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಮುಳುಗಿಹೋಗುತ್ತಿದ್ದು ಇದನ್ನು ದೂರವಿಟ್ಟು ಕ್ರೀಡೆಯಲ್ಲಿ ಭಾಗವಹಿಸಿದರೆ ಮನಶಾಂತಿಯೊಂದಿಗೆ ಆರೋಗ್ಯವನ್ನೂ ಕಾಪಾಡಿಕೊಳ್ಳಬಹುದು ಎಂದರು. ಪಟ್ಟಡ ಶಿವಕುಮಾರ್, ತಾಲೂಕು ಪಂಚಾಯಿತಿ ಅಧ್ಯಕ್ಷೆ ತೆಕ್ಕಡೆ ಶೋಭಾಮೋಹನ್, ಕೆದಂಬಾಡಿ ರಾಜು, ಕುಂದಚೇರಿ ಗ್ರಾಮ ಪಂಚಾಯಿತಿ ಸದಸ್ಯ ಹ್ಯಾರೀಸ್, ಟ್ರೋಫಿ ದಾನಿ ಕೆ.ಬಿ. ಮುತ್ತಣ್ಣ, ಠಾಣಾಧಿಕಾರಿ ಸದಾಶಿವ ಇನ್ನಿತರರು ಇದ್ದರು.