ನವದೆಹಲಿ: ಟೋಕಿಯೊ ಒಲಂಪಿಕ್ಸ್ ಕ್ರೀಡಾಕೂಟದ ಜಾವೆಲಿನ್ ಥ್ರೋ ವಿಭಾಗದಲ್ಲಿ ಚಿನ್ನದ ಪದಕಗಳನ್ನು ಗೆದ್ದ ನೀರಜ್ ಚೋಪ್ರಾ ಹಾಗೂ ಕುಸ್ತಿ ವಿಭಾಗದಲ್ಲಿ ಕಂಚಿನ ಪದಕ ಗೆದ್ದ ಬಜರಂಗ್ ಪುನಿಯಾ ಅವರಿಗೆ ಹರಿಯಾಣ ಸರ್ಕಾರ ನಗದು ಬಹುಮಾನ ಘೋಷಣೆ ಮಾಡಿದೆ.
ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ಮಾಹಿತಿ ನೀಡಿದ್ದು, ನೀರಜ್ ಚೋಪ್ರಾ ಅವರಿಗೆ ₹ 6 ಕೋಟಿ ನಗದು ಹಾಗೂ ಬಜರಂಗ್ ಪುನಿಯಾ ಅವರಿಗೆ 2.5 ಕೋಟಿ ನಗದು ಬಹುಮಾನ ಘೋಷಣೆ ಮಾಡಿದ್ದಾರೆ.
ಜಾವೆಲಿನ್ ಥ್ರೋ ವಿಭಾಗದ ಫೈನಲ್ ಪಂದ್ಯದಲ್ಲಿ ಜೆಕ್ ಗಣರಾಜ್ಯದ ಜಾಕೂಬ್ ವಾಡ್ಲೆಜ್ಚ್ ಮತ್ತು ವಿಟೆಜ್ಸ್ಲಾವ್ ವೆಸೆಲಿ ಅವರನ್ನು ಹಿಂದಿಕ್ಕಿ ಚಿನ್ನದ ಪದಕವನ್ನು ಗೆದ್ದರು. 23 ವರ್ಷದ ನೀರಜ್ 87.58 ಮೀಟರ್ ಜಾವೆಲಿನ್ ಎಸೆದು ಇತಿಹಾಸ ಸೃಷ್ಟಿಸಿದರು. ಈ ಪದಕ, ಹಾಲಿ ಟೋಕಿಯೊ ಒಲಿಂಪಿಕ್ಸ್ನಲ್ಲಿ ಭಾರತದ ಮೊದಲ ಚಿನ್ನದ ಪದಕವಾಗಿದೆ.
ಭಾರತದ ಕುಸ್ತಿ ಪಟು ಬಜರಂಗ್ ಪುನಿಯಾ, 65 ಕೆಜಿ ವಿಭಾಗದ ಫ್ರೀಸ್ಟೈಲ್ ಪಂದ್ಯದಲ್ಲಿ ಕಜಕಿಸ್ತಾನದ ದೌಲತ್ ನಿಯಾಜ್ಬೆಕೋವ್ ವಿರುದ್ಧ 8-0 ಅಂತರದ ಭರ್ಜರಿ ಗೆಲುವು ಸಾಧಿಸಿದರು. ಆ ಮೂಲಕ ಭಾರತಕ್ಕೆ ಮತ್ತೊಂದು ಕಂಚಿನ ಪದಕ ತಂದುಕೊಟ್ಟಿದ್ದಾರೆ.
ಹೀಗಾಗಿ ಬಜರಂಗ್ ಪುನಿಯಾಗೆ ಹರ್ಯಾಣ ಸರ್ಕಾರ ಬಂಪರ್ ಉಡುಗೊರೆ ನೀಡಿದ್ದು, ನಗದು ಬಹುಮಾನದ ಜೊತೆಗೆ ಸರ್ಕಾರಿ ಉದ್ಯೋಗ, ಶೇ 50ರಷ್ಟು ರಿಯಾಯಿತಿ ದರದಲ್ಲಿ ನಿವೇಶನ ನೀಡುವುದಾಗಿ ಮನೋಹರ್ ಲಾಲ್ ಖಟ್ಟರ್ ಘೋಷಿಸಿದ್ದಾರೆ.