ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜು ಪ್ರಕ್ರಿಯೆಗೋಸ್ಕರ ಬೆಂಗಳೂರಿಗೆ ಆಗಮಿಸಿರುವ ಭಾರತೀಯ ಕ್ರಿಕೆಟ್ ಮಂಡಳಿ ಅಧ್ಯಕ್ಷ ಸೌರವ್ ಗಂಗೂಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕಳೆದ ಜನವರಿ ತಿಂಗಳಲ್ಲಿ ಎರಡನೇ ಸಲ ಲಘು ಹೃದಯಾಘಾತಕ್ಕೊಳಗಾಗಿ ಕೋಲ್ಕತ್ತಾದಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದ ಬಿಸಿಸಿಐ ಅಧ್ಯಕ್ಷ ಗಂಗೂಲಿ, ಇದೀಗ ಬೆಂಗಳೂರಿಗೆ ತೆರಳಿದ್ದು, ಇದರ ಬೆನ್ನಲ್ಲೇ ಆಸ್ಪತ್ರೆಗೆ ದಾಖಲಾಗಿದ್ದಾರೆ. ನಾರಾಯಣ ಹೆಲ್ತ್ ಸಿಟಿಯ ಅಧ್ಯಕ್ಷರಾಗಿರುವ ಡಾ. ದೇವಿ ಶೆಟ್ಟಿ ನೇತೃತ್ವದ ತಂಡ ಅವರ ಆರೋಗ್ಯ ತಪಾಸಣೆ ನಡೆಸಲಿದೆ.
ಹೃದಯ ತಪಾಸಣೆಗೋಸ್ಕರ ಅವರು ನಗರದ ನಾರಾಯಣ ಹೃದಯಾಲಯದಲ್ಲಿ ದಾಖಲಾಗಿದ್ದಾರೆಂಬ ಮಾಹಿತಿ ತಿಳಿದು ಬಂದಿದೆ.
ಈಗಾಗಲೇ ಅಂಜಿಯೋಪ್ಲ್ಯಾಸ್ಟಿಗೊಳಗಾಗಿರುವ ಗಂಗೂಲಿ ಎರಡು ಸಲ ಲಘು ಹೃದಯಾಘಾತಕ್ಕೊಳಗಾಗಿದ್ದು, ಎರಡು ಸ್ಟೆಂಟ್ ಅಳವಡಿಕೆ ಮಾಡಲಾಗಿದೆ. ಕಳೆದ ಕೆಲ ವಾರಗಳ ಹಿಂದೆ ಕೋವಿಡ್ ಸೋಂಕಿಗೊಳಗಾಗಿದ್ದ ಗಂಗೂಲಿ ಮನೆಯಲ್ಲೇ ಚಿಕಿತ್ಸೆ ಪಡೆದುಕೊಂಡು ಗುಣಮುಖರಾಗಿದ್ದರು.