ಅರಬ್ ಸಂಯುಕ್ತ ಸಂಸ್ಥಾನ ಯಕ್ಷಗಾನ ಅಭ್ಯಾಸ ಕೇಂದ್ರ ಯು.ಎ.ಇ., ಯು.ಎ.ಇ.ಯ ಸರ್ವಪ್ರಥಮ ಮತ್ತು ಏಕೈಕ ಸಮಗ್ರ ಯಕ್ಷಗಾನ ಅಭ್ಯಾಸ ಕೇಂದ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ೨೦೧೫ ರಲ್ಲಿ ದುಬಾಯಿಯಲ್ಲಿ ಪ್ರಾರಂಭವಾಗಿರುವ ಈ ಸಂಸ್ಥೆಯ ದಶಮಾನೋತ್ಸವ – ೨೦೨೫ ಸಂಭ್ರಮ ಇಂಡಿಯನ್ ಹೈಸ್ಕೂಲ್ ಶೇಖ್ ರಾಶೀದ್ ಆಡಿಟೋರಿಯಂ ದುಬಾಯಿಯಲ್ಲಿ ನಡೆಯಿತು.

ಯಕ್ಷಗಾನ ಚೌಕಿ ಪೂಜೆ ಮಹಾ ಮಂಗಳಾರತಿ ನಂತರ ಭವ್ಯ ಮೆರವಣಿಗೆಯ ಮೂಲಕ ದಶಮಾನೋತ್ಸವ ಯಕ್ಷಗಾನದ ಭಾಗವತರು ಹಾಗೂ ಹಿಮ್ಮೇಳ ಮುಮ್ಮೇಳದ ಕಲಾವಿದರು, ಯಕ್ಷಶ್ರೀರಕ್ಷ ಪ್ರಶಸ್ತಿ ಪುರಸ್ಕೃತರು ಹಾಗೂ ದಶಮಾನೋತ್ಸವದ ಹತ್ತು ಮಂದಿ ಸಾಧಕರನ್ನು ವೇದಿಕೆಗೆ ಬರಮಾಡಿ ಕೊಳ್ಳಲಾಯಿತು ಹತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರುಗಳಲ್ಲಿ ಕೊಡಗಿನ ಚಿತ್ರಶಿಲ್ಪ ಕಲಾವಿದ ಶ್ರೀ ಬಿ. ಕೆ. ಗಣೇಶ್ ರೈ ಯವರ ಶಿಲ್ಪಕಲೆ,

ಚಿತ್ರಕಲೆ, ಲೇಖಕ ಮತ್ತು ಬರಹಗಾರರಾಗಿ, ಕಳೆದ ನಾಲ್ಕು ದಶಕಗಳಿಂದ ಮಾಧ್ಯಮ ಕ್ಷೇತ್ರದಲ್ಲಿ ಸಾಧನೆ ಮಾಡಿರುವುದನ್ನು ಗುರುತ್ತಿಸಿ “ಕಲಾಮಾಧ್ಯಮ” ಗೌರವ ಪುರಸ್ಕಾರ ನೀಡಿ ಗೌರವಿಸಲಾಯಿತು. ಸನ್ಮಾನ ಸಮಾರಂಭದಲ್ಲಿ ಯಕ್ಷಧ್ರುವ ಫೌಂಡೆಶನ್ ಅಧ್ಯಕ್ಷರು ಶ್ರೀ ಸತೀಶ್ ಶೆಟ್ಟಿ ಪಟ್ಲ, ಯಕ್ಷಗಾನ ಅಭ್ಯಾಸ ತರಗತಿ ಯು.ಎ.ಇ. ಅಧ್ಯಕ್ಷರು ಶ್ರೀ ಕೊಟ್ಟಿಂಜ ದಿನೇಶ್ ಶೆಟ್ಟ್, ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷರು ಶ್ರೀ ಸರ್ವೋತ್ತಮ ಶೆಟ್ಟಿ, ಇಂಡಿಯಾ ಸೊಶಿಯಲ್ ಅಂಡ ಕಲ್ಚರಲ್ ಸೆಂಟರ್ ಅಬುಧಾಬಿ ೨೦೨೪ – ೨೫ನೇ ಸಾಲಿನ ಅಧ್ಯಕ್ಷರು ಶ್ರೀ ಜಯರಾಮ್ ರೈ ಹಾಗೂ ಇನ್ನಿತರ ಗಣ್ಯರು ಪಾಲ್ಗೊಂಡಿದ್ದರು.


ಇತ್ತಿಚೆಗಷ್ಟೆ ಕಳೆದ ಕೆಲವು ದಿನಗಳ ಹಿಂದೆ ಅಬುಧಾಬಿ ಹಿಂದೂ ಮಂದಿರದಲ್ಲಿ ನಡೆದ ಸಂಸ್ಕೃತಿ ಸಿಂಚನ ಗುರುವಂದನೆ ಕಾರ್ಯಕ್ರಮದಲ್ಲಿ ಬಿ. ಕೆ. ಗಣೇಶ್ ರೈ ಯವರು “ಸಂಸ್ಕೃತಿ ಶಿಲ್ಪಕಲಾ ರತ್ನ” ಪ್ರಶಸ್ತಿಯನ್ನು ಸ್ವೀಕರಿಸಿರುವುದನ್ನು ಸ್ಮರಿಸಬಹುದು.

