ಶಿವಮೊಗ್ಗ : ಚಂಪಕ ಸರಸು ಕಲ್ಯಾಣಿಯಲ್ಲಿ ಈಜಲು ಹೋಗಿದ್ದ ಎಂಜಿನಿಯರ್‌ ಮೃತಪಟ್ಟಿರುವ ಘಟನೆ ಶಿವಮೊಗ್ಗದ ಸಾಗರದ ಆನಂದಪುರ ಬಳಿ ನಡೆದಿದೆ.

ಬೆಂಗಳೂರು ಮೂಲದ ಕುಶಾಲ್ (22) ಎಂಬ ಇಂಜಿನಿಯರ್ ಸಾವನ್ನಪ್ಪಿರುವ ದುರ್ದೈವಿ. ಬೆಂಗಳೂರಿನ ಕುಶಾಲ್‌ ತನ್ನಿಬ್ಬರು ಸ್ನೇಹಿತರೊಡನೆ ಪ್ರವಾಸಕ್ಕೆಂದು ಕಾರಿನಲ್ಲಿ ಆಗಮಿಸಿದ್ದ. ಕುಶಾಲ್, ಸಾಯಿರಾಂ ಹಾಗೂ ಯಶವಂತ ಈ ಮೂವರು ಇತಿಹಾಸ ಹೊಂದಿರುವ ಮಹಂತಿನ ಮಠಕ್ಕೆ ಭೇಟಿ ನೀಡಿದ್ದರು. ಈ ವೇಳೆ ಕುಶಾಲ್‌ ಚಂಪಕ ಸರಸು ಕಲ್ಯಾಣಿಯಲ್ಲಿ ಈಜಲು ಹೋಗಿದ್ದಾನೆ. ಆದರೆ ಉಸಿರುಗಟ್ಟಿ ನೀರಿಲ್ಲಿ ಮುಳುಗಿ ಮೃತಪಟ್ಟಿದ್ದಾನೆ.

ಹಲವಾರು ವರ್ಷಗಳ ಕಾಲ ಪಾಳು ಬಿದ್ದಿದ್ದ ಚಂಪಕ ಸರಸು ಕಲ್ಯಾಣಿಯನ್ನು ಚಲನಚಿತ್ರ ನಟ ಯಶ್ ಅವರ ಯಶೋಮಾರ್ಗ ಸಂಸ್ಥೆ ಕಳೆದೆರೆಡು ವರ್ಷಗಳ ಹಿಂದೆಯಷ್ಟೇ ಸ್ವಚ್ಚಗೊಳಿಸಿದ್ದರು. ಸ್ನೇಹಿತರೊಂದಿಗೆ ಈಜಾಡಲು ಬಂದ ಕುಶಾಲ್‌ ಮೃತಪಟ್ಟಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಕಲ್ಯಾಣಿಯಿಂದ ಶವ ಮೇಲಕ್ಕೇತ್ತಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದೆ.