ಉಡುಪಿ : ಜಿಲ್ಲೆಯ ಬಾರ್ಕೂರಿನ ನೇಷನಲ್ ಐಟಿಐ ಸಂಸ್ಥೆ ತನ್ನ ವಿದ್ಯಾರ್ಥಿಗಳ ಸೃಜನಶೀಲತೆ ಮತ್ತು ತಾಂತ್ರಿಕ ಕೌಶಲ್ಯಗಳ ಮೂಲಕ ಮತ್ತೊಮ್ಮೆ ಗಮನ ಸೆಳೆದಿದೆ. ದುಬಾರಿ ವಿದ್ಯುತ್ ವಾಹನಗಳ (EV) ಯುಗದಲ್ಲಿ, ಹಳೆಯ ಪೆಟ್ರೋಲ್ ವಾಹನಗಳನ್ನು ಅತೀ ಕಡಿಮೆ ವೆಚ್ಚದಲ್ಲಿ ವಿದ್ಯುತ್ ವಾಹನಗಳಾಗಿ ಪರಿವರ್ತಿಸಬಹುದು ಎಂಬುದನ್ನು ಈ ಸಂಸ್ಥೆಯ ಪ್ರತಿಭಾವಂತ ವಿದ್ಯಾರ್ಥಿಗಳು ಸಾಬೀತುಪಡಿಸಿದ್ದಾರೆ.

ಈ ಹಿಂದೆ 2021–2023ರ ಸಾಲಿನ ಎಲೆಕ್ಟ್ರಿಕಲ್ ವಿಭಾಗದ ವಿದ್ಯಾರ್ಥಿಗಳು ಹಿರಿಯ ಉಪನ್ಯಾಸಕ ಭಾಸ್ಕರ ಉಪಾದ್ಯ ಅವರ ಮಾರ್ಗದರ್ಶನದಲ್ಲಿ ಹಳೆಯ ನ್ಯಾನೋ ಕಾರನ್ನು ವಿದ್ಯುತ್ ವಾಹನವಾಗಿ ಪರಿವರ್ತಿಸಿ, ವಿವಿಧ ಸ್ಥಳೀಯ ಕಾಲೇಜುಗಳ ವಸ್ತು ಪ್ರದರ್ಶನಗಳಲ್ಲಿ ಪ್ರದರ್ಶಿಸಿ ಪ್ರಶಂಸೆಗೆ ಪಾತ್ರರಾಗಿದ್ದರು. ಅದೇ ಅವಧಿಯಲ್ಲಿ ಆಟೋಮೊಬೈಲ್ ವಿಭಾಗದ ವಿದ್ಯಾರ್ಥಿ ನಿತೀನ್ ನಾಯ್ಕ, ಉಪನ್ಯಾಸಕರಾದ ಪ್ರವೀಣ್ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಹೋಂಡಾ ಆಕ್ಟಿವಾ ಸ್ಕೂಟರನ್ನು ವಿದ್ಯುತ್ ವಾಹನವಾಗಿ ರೂಪಾಂತರಿಸಿ ತನ್ನ ಕೌಶಲ್ಯವನ್ನು ತೋರಿಸಿದ್ದರು.

ಇದೀಗ 2024–2026ರ ಸಾಲಿನ ಆಟೋಮೊಬೈಲ್ (ಎಂ.ಎಂ.ವಿ) ಹಿರಿಯ ವಿಭಾಗದ ವಿದ್ಯಾರ್ಥಿಗಳು ಮತ್ತೊಂದು ಮಹತ್ವದ ಸಾಧನೆ ಮಾಡಿದ್ದಾರೆ. ಆಟೋಮೊಬೈಲ್ ವಿಭಾಗದ ಹಿರಿಯ ಉಪನ್ಯಾಸಕ ಜಗನ್ನಾಥ ಶೇರಿಗಾರ್ ಹಾಗೂ ಎಲೆಕ್ಟ್ರಿಕಲ್ ವಿಭಾಗದ ಹಿರಿಯ ಉಪನ್ಯಾಸಕ ಭಾಸ್ಕರ ಉಪಾದ್ಯ ಇವರ ಸಹಯೋಗದಲ್ಲಿ ವಿದ್ಯಾರ್ಥಿಗಳು ಸ್ವತಃ ಎಲೆಕ್ಟ್ರಿಕ್ ಕಾರಿನ ಮಾದರಿಯನ್ನು ನಿರ್ಮಿಸಿದ್ದಾರೆ. ಹಳೆಯ ಮಾರುತಿ 800 ಕಾರನ್ನು ಬಳಸಿಕೊಂಡು, ಅಗತ್ಯ ಬಿಡಿಭಾಗಗಳನ್ನು ಸಂಗ್ರಹಿಸಿ ತಯಾರಿಸಿದ ಈ EV ಮಾದರಿ ಎಲ್ಲರ ಗಮನ ಸೆಳೆಯುವಂತಾಗಿದೆ.

ಈ ಕಾರ್ಯಕ್ಕೆ ಉಪನ್ಯಾಸಕರಾದ ಪ್ರವೀಣ್ ಶೆಟ್ಟಿ, ಸುಧಾಕರ ಶೆಟ್ಟಿಗಾರ್ ಹಾಗೂ ಮಧುಸೂದನ ಆಚಾರ್ ಸಹಕಾರ ನೀಡಿದ್ದಾರೆ. ಇದರೊಂದಿಗೆ 2025–2026ನೇ ಸಾಲಿನಲ್ಲಿ ಭಾರತ ಸರ್ಕಾರದ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಇಲಾಖೆ ನಡೆಸಿದ ಐಟಿಐ ಗ್ರೇಡಿಂಗ್‌ನಲ್ಲಿ ಉಡುಪಿ ಜಿಲ್ಲೆಯಲ್ಲೇ ಈ ಸಂಸ್ಥೆ ಪ್ರಥಮ ಸ್ಥಾನವನ್ನು ಪಡೆದಿರುವುದು ಮತ್ತೊಂದು ಹೆಗ್ಗಳಿಕೆಯಾಗಿದೆ. ದಿ ಬಾರ್ಕೂರು ಎಜ್ಯುಕೇಶನಲ್ ಸೊಸೈಟಿ ಆಡಳಿತಕ್ಕೆ ಒಳಪಟ್ಟಿರುವ ಈ ಸಂಸ್ಥೆ, ಆಡಳಿತ ಮಂಡಳಿಯ ಅಧ್ಯಕ್ಷ ಬಿ. ಶಾಂತಾರಾಮ ಶೆಟ್ಟಿ ಅವರ ದಕ್ಷ ನೇತೃತ್ವ ಹಾಗೂ ಸಂಚಾಲಕ ಬಿ. ರಾಮಚಂದ್ರ ಕಾಮತ್ ಅವರ ಸಹಕಾರದಿಂದ ನಿರಂತರವಾಗಿ ಪ್ರಗತಿ ಸಾಧಿಸುತ್ತಿದ್ದು, ವಿದ್ಯಾರ್ಥಿಗಳ ಭವಿಷ್ಯವನ್ನು ಉಜ್ವಲಗೊಳಿಸುವ ದಿಕ್ಕಿನಲ್ಲಿ ಹೆಮ್ಮರದಂತೆ ಬೆಳೆಯುತ್ತಿದೆ.