ಮೈಸೂರು: ನಮಗೆ ಬಹುಮತ ಬರುವುದು ಖಚಿತವಾಗಿದೆ.ಅದನ್ನೇ ಬಹುತೇಕ ಎಲ್ಲಾ ಚುನಾವಣೋತ್ತರ ಸರ್ವೇಗಳೂ ಅದನ್ನೇ ಹೇಳುತ್ತಿದೆ. ನಾನೇನು ಫಲಿತಾಂಶದ ನಿರೀಕ್ಷೆ ಮಾಡಿದ್ದೆನೋ ಅದೇ ಫಲಿತಾಂಶ ಬರಲಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಬುಧವಾರ ಸಂಜೆ ಹೇಳಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ಕರಾವಳಿ ಭಾಗದಲ್ಲಿ ಈ ಬಾರಿ ನಮ್ಮ ಸೀಟು ಹೆಚ್ಚಾಗಲಿದೆ. ಬಜರಂಗದಳ ವಿಚಾರ ಒಂದು ವಿವಾದದ ವಿಚಾರವೇ ಅಲ್ಲ. ನಾವು ನಮ್ಮ ಪ್ರಣಾಳಿಕೆಯಲ್ಲಿ ಸ್ಪಷ್ಟವಾಗಿ ಹೇಳಿದ್ದೇವೆ. ಬಿಜೆಪಿಯವರು ಅದನ್ನು ಅಪಪ್ರಚಾರ ಮಾಡಿದರು ಎಂದರು.
ಲಿಂಗಾಯತ ನಾಯಕರೆಲ್ಲಾ ಭ್ರಷ್ಟಾಚಾರಿಗಳು ಅಂತ ನಾನೆಲ್ಲಿ ಹೇಳಿದ್ದೆ? ನಾನು ಬಸವರಾಜ ಬೊಮ್ಮಾಯಿ ಭ್ರಷ್ಟಾಚಾರಿ ಅಂತ ಹೇಳಿದ್ದೆ, ನನ್ನ ಮಾತನ್ನು ತಿರುಚಿ ಅಪಪ್ರಚಾರ ಮಾಡಿದರು. ವರುಣದಲ್ಲಿ ನಾನು ಬಹಳ ಸುಲಭವಾಗಿ ಗೆಲುವು ದಾಖಲಿಸಿಲಿದ್ದೇನೆ. ಹಳೆ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವಿನ ಪೈಪೋಟಿ. ಇಲ್ಲಿ ಬಿಜೆಪಿ ಎಲ್ಲೂ ಕೂಡ ನೇರವಾಗಿ ನಮ್ಮ ಜೊತೆ ಪೈಪೋಟಿ ಇಲ್ಲ ಎಂದರು.
ಸೋಮಣ್ಣಗೆ ವರುಣಾ ಜನ ಯಾಕೆ ವೋಟ್ ಹಾಕಬೇಕು? ಕ್ಷೇತ್ರಕ್ಕೆ ಅವರ ಕೊಡುಗೆ ಏನು? ಅವರು ಜಾತಿ ಕಾರ್ಡ್ ಪ್ಲೇ ಮಾಡಿದ್ದಾರೆ, ಅದು ಬಿಟ್ಡರೆ ದುಡ್ಡಿನ ರಾಜಕೀಯ ಮಾಡಿದ್ದಾರೆ. ವರುಣಾದಲ್ಲಿ ಜೆಡಿಎಸ್ ಅವರೆಲ್ಲ ಬಿಜೆಪಿಗೆ ಮತ ಹಾಕಿದ್ದಾರೆ. ಆದರೂ ನಾನು ಗೆಲ್ಲುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
”ರೆಸಾರ್ಟ್ ರಾಜಕೀಯದ ಅವಶ್ಯಕತೆ ಇದೇಯಾ? ನಿಮ್ಮ ಶಾಸಕರನ್ನು ಹೇಗೆ ರಕ್ಷಿಸಿಕೊಳ್ಳುತೀರಿ” ಎಂದು ಪ್ರಶ್ನಿಸಿದ ರಾಷ್ಟ್ರೀಯ ಮಾಧ್ಯಮದ ವರದಿಗಾರನ ಪ್ರಶ್ನೆಗೆ ಕೆರಳಿ ಫುಲ್ ಗರಂ ಆದ ಸಿದ್ದರಾಮಯ್ಯ, ”ಎಲ್ಲರೂ ಬಹುಮತ ಕೊಡುತ್ತಿರುವಾಗ ಶಾಸಕರ ರಕ್ಷಣೆ ಎಲ್ಲಿಂದ ಬರುತ್ತದೆ. ಯಾಕೆ ಇಂತಹ ಪ್ರಶ್ನೆ ಕೇಳಿ ಸುದ್ದಿ ಹಬ್ಬಿಸುತ್ತೀರಾ? ನೀನೇನು ಬಿಜೆಪಿ ವ್ಯಕ್ತಿನಾ, ನಿನೇಗೇಕೆ ಇಂತಹ ಅನುಮಾನಗಳು ಬರಬೇಕು. ಎಲ್ಲಾ ಸಮೀಕ್ಷೆಗಳಲ್ಲೂ ಕಾಂಗ್ರೆಸ್ ಗೆ ಬಹುಮತ ಇದೆ. ನಾವು ಬಹುಮತದೊಂದಿಗೆ ಸರ್ಕಾರ ಮಾಡುತ್ತೇವೆ. ಇಂತಹ ಪ್ರಶ್ನೆಗಳನ್ನ ಕೇಳಿ ಗೊಂದಲದ ಸುದ್ದಿಗಳನ್ನ ಹಬ್ಬಿಸಬೇಡ. ನೀನು ಇನ್ಮುಂದೆ ನನ್ನ ಮುಂದೆ ಪ್ರಶ್ನೆ ಕೇಳಲು ಬರಬೇಡ” ಎಂದರು.