ರಾಯಚೂರು: ಗಣೇಶ ಮೆರವಣಿಗೆ ಸಂದರ್ಭದಲ್ಲಿ ವೇಳೆ ಕಲ್ಲು ತೂರಾಟ ನಡೆಸಿದ ಘಟನೆ ರಾಯಚೂರಿನಲ್ಲಿ ನಡೆದಿದೆ. ರಾಯಚೂರು ನಗರದ ಗಂಗಾನಿವಾಸ ರಸ್ತೆಯಲ್ಲಿ ಗಣೇಶ ಮೆರವಣಿಗೆ ವೇಳೆ ಈ ಘಟನೆ ನಡೆದಿದೆ.
ಈ ಘಟನೆಯ ಸಂಬಂಧ ಪ್ರಶಾಂತ್ ಮತ್ತು ಪ್ರವೀಣ್ ಎಂಬ ಯುವಕರನ್ನು ಬಂಧಿಸಲಾಗಿದೆ. ಗಣೇಶ ಮೆರವಣಿಗೆ ಸಾಗುವ ವೇಳೆ ರಸ್ತೆ ಪಕ್ಕದ ಮಳಿಗೆಯೊಂದರ ಟೆರೆಸ್ ಮೇಲೆ ನಿಂತು ಈ ಕಿಡಿಗೇಡಿಗಳು ಕಲ್ಲು ತೂರಿದ್ದಾರೆ.
ಗಂಗಾನಿವಾಸ ಮಾರ್ಗ ಮೂಲಕ ಮೆರವಣಿಗೆ ಬಂದಿದ್ದಕ್ಕೆ ಈ ಯುವಕರು ವಿನಯ್ ಕುಮಾರ್ & ಗಣೇಶ್ ಎಂಬುವವರನ್ನು ಗುರಿಯಾಗಿಸಿಕೊಂಡು ಕಲ್ಲು ತೂರಾಟ ನಡೆಸಿದ್ದಾರೆ ಎನ್ನಲಾಗಿದೆ. ಈ ಕಲ್ಲು ತೂರಾಟದ ಘಟನೆಯಲ್ಲಿ ವಿನಯ್ ಕುಮಾರ್ ಮತ್ತು ಗಣೇಶ್ ಎಂಬ ಯುವಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಮಳಿಗೆ ಮೇಲೆ ಕುಳಿತು ಹೀಗೆ ಕಲ್ಲು ತೂರಿದ ಯುವಕರನ್ನ ಸ್ಥಳೀಯರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಘಟನೆ ಸಂಬಂಧ ಸದರಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

