ಮೈಸೂರು: ಸಾಲಬಾಧೆಗೆ ಹೆದರಿ ಯುವಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಬೆಟ್ಟದಲ್ಲಿ ಘಟನೆ ನಡೆದಿದೆ.

ಯತೀಕ್ (25) ಮೃತ ದುರ್ದೈವಿ.ಕೆಆರ್‌ ತಾಲೂಕಿನ ಹೆಬ್ಬಾಳು ಕೊಪ್ಪಲು ಗ್ರಾಮದ ನಿವಾಸಿಯಾದ ಯತೀಕ್‌ ಡೆತ್ ನೋಟ್ ಬರೆದಿಟ್ಟು ಮರಕ್ಕೆ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾನೆ. ಮನೆಯಲ್ಲಿ ಹಣಕಾಸಿನ ಸಮಸ್ಯೆ ಎಂದು ಕ್ರೆಡಿಟ್ ಕಾರ್ಡ್ ಜತೆಗೆ ಸಾಲ ಪಡೆದಿದ್ದನು.

ಸಾಲ ತೀರಿಸಲು ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿದ್ದ ಯತೀಕ್‌, ಬೆಂಗಳೂರಿನಲ್ಲಿ ಫುಡ್‌ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದನು. ಷೇರು ಮಾರ್ಕೆಟ್‌ನಲ್ಲೂ ಹಣ ಹೂಡಿಕೆ ಮಾಡಿದ್ದನು. ಆದರೆ ಮಾಡಿದ್ದ ಸಾಲಕ್ಕೆ ಇಎಂಐ ಕಟ್ಟಲು ಸಾಧ್ಯವಾಗದೆ ಮನನೊಂದಿದ್ದನು. ನನ್ನ ಸಾವಿಗೆ ಕಾರಣರಾದವರಿಗೆ ಶಿಕ್ಷೆ ನೀಡುವಂತೆ ಡೆತ್ ನೋಟ್‌ ಬರೆದಿದ್ದಾನೆ.

ಮಗನ ಸಾವಿಗೆ ನ್ಯಾಯ ಕೊಡಿಸುವಂತೆ ತಂದೆ ಎಚ್ ಟಿ ರಮೇಶ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಬೆಟ್ಟದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.