ಮೈಸೂರು: ಜಮೀನಿನಲ್ಲಿ ಹತ್ತಿ ಬೆಳೆ ಬಿಡಿಸುತ್ತಿದ್ದ ವೇಳೆ ಹುಲಿ ರೈತನ ಮೇಲೆ ದಾಳಿ ನಡೆಸಿದ್ದು, ರೈತನಿಗೆ ಗಂಭೀರ ಗಾಯಗಳಾಗಿ ಸಾವು ಬದುಕಿನ ನಡುವೆ ಹೋರಾಡುತ್ತಿರುವ ಘಟನೆ ಮೈಸೂರು ಜಿಲ್ಲೆಯ ಸರಗೂರು ತಾಲ್ಲೂಕಿನ ಬಡಗಲಪುರ ಗ್ರಾಮದಲ್ಲಿ ನಡೆದಿದೆ.

ಬಡಗಲಪುರ ಗ್ರಾಮದ ರೈತ ಮಹದೇವಾ ಎಂಬ ವ್ಯಕ್ತಿಗೆ ಹುಲಿ ದಾಳಿ ನಡೆಸಿದೆ. ಗ್ರಾಮದ ಬಳಿ ಹುಲಿ ಕಾರ್ಯಾಚರಣೆ ವೇಳೆ ಈ ಘಟನೆ ನಡೆದಿದ್ದು, ಜಮೀನಿನಲ್ಲಿ ಹತ್ತಿ ಬೆಳೆ ಬಿಡಿಸುತ್ತಿದ್ದ ಮಹದೇವನಿಗೆ ಹುಲಿ ದಾಳಿ ನಡೆಸಿದೆ ಎನ್ನಲಾಗಿದೆ. ರೈತನ ಮುಖದ ಮೇಲೆ ಗಂಭೀರ ಗಾಯಗಳಾಗಿವೆ.

ಗ್ರಾಮದಲ್ಲಿ ಎರಡು ತಿಂಗಳಿಂದ ನಿರಂತರವಾಗಿ ಹುಲಿ ಕಾಣಿಸಿಕೊಂಡು ಹಲವು ಜಾನುವಾರುಗಳ ಮೇಲೆ ದಾಳಿ ಮಾಡಿದೆ. ಹುಲಿ ಇರುವಿಕೆಯನ್ನು ಖಾತ್ರಿ ಮಾಡಿಕೊಂಡು ಇಂದು ಅರಣ್ಯ ಇಲಾಖೆ ಸಿಬ್ಬಂದಿಗಳು ಸಾಕಾನೆಗಳ ಮೂಲಕ ಕೊಂಬಿಂಗ್ ಕಾರ್ಯಚರಣೆ ನಡೆಸುತ್ತಿದ್ದರು.

ಕೊಂಬಿಂಗ್ ನಡೆಸುತ್ತಿದ್ದ ಅಣತಿ ದೂರದಲ್ಲೇ ಹುಲಿ ದಾಳಿ ನಡೆಸಿದೆ. ರೊಚ್ಚಿಗೆದ್ದ ಗ್ರಾಮಸ್ಥರು ಅರಣ್ಯ ಇಲಾಖೆಯ ಅಧಿಕಾರಿಗಳ ವಾಹನಕ್ಕೆ ಕಲ್ಲು ತೂರಾಟ ಮಾಡಿ ಜಖಂಗೊಳಿಸಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯವೇ ಈ ಘಟನೆಗೆ ಕಾರಣ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.