ಮೈಸೂರು: ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮ ಒಮ್ಮೆಗೆ ಎರಡೆರಡು ಗಿನ್ನಿಸ್ ವಿಶ್ವ ದಾಖಲೆ ಮಾಡಿದೆ. ಹನುಮಾನ್‌ ಚಾಲೀಸ ಪಾರಾಯಣ ಹಾಗೂ ವಿಶೇಷ ಅಂಚೆ ಚೀಟಿಗಾಗಿ ಎರಡು ದಾಖಲೆ ತನ್ನದಾಗಿಸಿಕೊಂಡಿದೆ.

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜೀಯವರ ಸಾನಿಧ್ಯದಲ್ಲಿ ಅವಧೂತ ದತ್ತ ಪೀಠದ ನಾದಮಂಟಪದಲ್ಲಿ 650ಕ್ಕೂ ಹೆಚ್ಚು ಮಂದಿ ಸತತವಾಗಿ ಅಹೋರಾತ್ರಿ 33 ಗಂಟೆ 33 ನಿಮಿಷ 33 ಸೆಕೆಂಡ್ ಹನುಮಾನ್ ಚಾಲೀಸ ಪಾರಾಯಣ ಮಾಡಿದ್ದು ವಿಶ್ವ ದಾಖಲೆಗೆ ಸೇರ್ಪಡೆಯಾಗಿದೆ.

ಈ ಪ್ರಯತ್ನಕ್ಕಾಗಿ ಗಿನ್ನಿಸ್ ವಿಶ್ವ ದಾಖಲೆ ಸಂಸ್ಥೆ ಅವರ ಪ್ರತಿನಿಧಿ ಸ್ವಪ್ನಿಲ್ ಡಂಗರಿಕರ್ ಅವರನ್ನು ಕಳುಹಿಸಿತ್ತು, ಈ ಸತತ ಪಾರಾಯಣವನ್ನು ಗಿನ್ನಿಸ್ ವಿಶ್ವ ದಾಖಲೆಗೆ ಸೇರ್ಪಡೆ ಮಾಡಿದ್ದಾರೆ. ವಡೋದರದ ಸ್ವಾಮಿ ನಾರಾಯಣ ಭಜನ್ ಯಾಗ, ಪರಮ ಪೂಜ್ಯ ಸದ್ಗುರು ಶ್ರೀ ಜ್ಞಾನಿವಂದಸ್ಜಿ ಸ್ವಾಮಿ – ಕುಂಡಲಧಾಮ ಅವರು 2022ರ ಜುಲೈ 23ರಂದು 27 ಗಂಟೆ 27 ನಿಮಿಷ 27 ಸೆಕೆಂಡ್ ಪಾರಾಯಣ ಮಾಡಿ ದಾಖಲೆ ನಿರ್ಮಿಸಿದ್ದರು.

ನಿನ್ನೆ ನಾದಮಂಟಪದಲ್ಲಿ ಸಂಪನ್ನಗೊಂಡ ಹನುಮಾನ್‌ ಚಾಲೀಸಾ ಪಾರಾಯಣ‌ ಹಿಂದಿನ ಈ ದಾಖಲೆಯನ್ನು ಮೀರಿ ನೂತನ ಗಿನ್ನಿಸ್ ದಾಖಲೆ ಬರೆಯಿತು. ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮ ಮತ್ತೊಂದು ದಾಖಲೆಯನ್ನೂ ಇದೇ ವೇಳೆ ಬರೆದಿದೆ.

ನಾದಮಂಟಪದ ಬೆಳ್ಳಿ ಮಹೋತ್ಸವದ ಅಂಗವಾಗಿ ಅಂಚೆ ಇಲಾಖೆ ವತಿಯಿಂದ ಹೊರತಂದಿರುವ ಅಂಚೆ ಚೀಟಿ ಪ್ರಪಂಚದ ಅತಿ ದೊಡ್ಡ ಅಂಚೆ ಚೀಟಿ (3.12ಮೀ–4.2ಮೀ) ಆಗಿದ್ದು ಇದೂ ಕೂಡ ಗಿನ್ನೆಸ್ ವಿಶ್ವ ದಾಖಲೆಗೆ ಸೇರ್ಪಡೆಯಾಗಿರುವುದು ವಿಶೇಷವಾಗಿದೆ.