ನಂಜನಗೂಡು: ತಾಲ್ಲೂಕಿನ ಹಳೇಪುರ ಗ್ರಾಮದಲ್ಲಿ ಸಾಲದ ಕಂತು ಪಾವತಿ ಮಾಡಿಲ್ಲ ಎಂದು ಖಾಸಗಿ ಮೈಕ್ರೋ ಫೈನಾನ್ಸ್ ಸಿಬ್ಬಂದಿ ಮನೆಗೆ ಬೀಗ ಜಡಿದಿರುವ ಘಟನೆ ನಡೆದಿದೆ.

ಗ್ರಾಮದ ಹೆಚ್.ಎಂ ಮಹೇಶ ಎಂಬ ರೈತ ಮನೆ ನಿರ್ಮಿಸಿಕೊಳ್ಳಲು ಚಾಮರಾಜನಗರದ ಜನ ಸ್ಮಾಲ್ ಫೈನಾನ್ಸ್ ಅವರಿಂದ 825,000 ಸಾಲವನ್ನು 120 ಕಂತುಗಳಲ್ಲಿ ಕಟ್ಟುವುದಾಗಿ ಪಡೆದಿರುತ್ತಾರೆ. ಈಗಾಗಲೇ ಪ್ರತಿ ಕಂತಿಗೆ 15400 ರೂ ನಂತೆ 13 ಕಂತುಗಳನ್ನು ಪಾವತಿ ಮಾಡಿದ್ದಾರೆ.

ಆರ್ಥಿಕ ಸಮಸ್ಯೆಯಿಂದ ಸುಮಾರು ಆರು ಕಂತುಗಳನ್ನು ಕಟ್ಟಲು ತಡವಾಗಿರುವ ಹಿನ್ನೆಲೆ ಖಾಸಗಿ ಫೈನಾನ್ಸ್ ನವರು ಮನೆ ಬಳಿಗೆ ಬಂದ ಸಂದರ್ಭದಲ್ಲಿ 30000 ರೂ.ಗಳನ್ನು ಹೊಂದಿಸಿ ಕಟ್ಟಲು ಹೋದಾಗ ಸಿಬ್ಬಂದಿಗಳು ನಿರಕರಿಸಿ, ಮನೆಯ ಮುಂದೆ ನೋಟಿಸ್ ಅಂಟಿಸಿ ಮನೆ ಖಾಲಿ ಮಾಡಿಸಿ ಬೀಗ ಜಡಿದಿದ್ದು, ಪ್ರಸ್ತುತ ಮನೆಯ ಮುಂದಿನ ರಸ್ತೆಯಲ್ಲಿ ಜೀವನ ಸಾಗಿಸುತ್ತಿರುವುದು ಕಂಡುಬಂದಿದೆ. ಈ ಬಗ್ಗೆ ರೈತ ಸಂಘಟನೆಯಿಂದ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದ್ದಾರೆ.