ಮೈಸೂರು: ಇಂಪೋರ್ಟ್ ಎಕ್ಸ್ಪೋರ್ಟ್ ವ್ಯಾಪಾರದಲ್ಲಿ ನಷ್ಟವಾದ ಹಿನ್ನಲೆ ಕೇರಳದ ಉದ್ಯಮಿ ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಜರಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕೇರಳದ ನಿವಾಸಿ ಅಗಸ್ತೀನ್ ಜೋಸೆಫ್ (26) ಮೃತ ದುರ್ದೈವಿ. ತರಕಾರಿ ಮತ್ತು ಹಣ್ಣುಗಳ ವ್ಯಾಪಾರ ಮಾಡುತ್ತಿದ್ದ ಅಗಸ್ತೀನ್ ಜೋಸೆಫ್ ಭಾರಿ ನಷ್ಟ ಅನುಭವಿಸಿದ್ದರೆಂದು ಹೇಳಲಾಗಿದೆ. ಆಗಸ್ಟ್ 19 ರಂದು ಮೈಸೂರಿನ ಗ್ರಾಮಾಂತರ ಬಸ್ ನಿಲ್ದಾಣದ ಬಳಿ ಇರುವ ಹೋಟೆಲ್ ಒಂದರ ಕೊಠಡಿಯಲ್ಲಿ ತಂಗಿದ್ದರು.
20 ರಂದು ಸಹೋದರನ ಜೊತೆ ಮೊಬೈಲ್ ನಲ್ಲಿ ಮಾತನಾಡಿ ವ್ಯಾಪಾರದಲ್ಲಿ ನಷ್ಟವಾದ ಬಗ್ಗೆ ಹೇಳಿಕೊಂಡಿದ್ದರೆಂದು ಹೇಳಲಾಗಿದೆ. ಮೊಬೈಲ್ ನಲ್ಲಿ ಮಾತನಾಡಿದ ನಂತರ ಸ್ವಿಚ್ ಆಫ್ ಮಾಡಿದ್ದಾರೆ. ನಂತರ ಸಹೋದರನ ಸಂಪರ್ಕಕ್ಕೆ ಸಿಕ್ಕಿಲ್ಲ. ಕೊಠಡಿ ಬಾಗಿಲು ತೆರೆಯದ ಕಾರಣ ಹೋಟೆಲ್ ಸಿಬ್ಬಂದಿಗಳು ನಜರಬಾದ್ ಠಾಣೆಗೆ ಮಾಹಿತಿ ನೀಡಿದ್ದಾರೆ.
ಪೊಲೀಸರು ಹೋಟೆಲ್ ಗೆ ಬಂದು ಪರಿಶೀಲನೆ ಮಾಡಿದಾಗ ಅಗಸ್ತೀನ್ ಜೋಸೆಫ್ ನೇಣುಬಿಗಿದ ಸ್ಥಿತಿಯಲ್ಲಿ ಕಂಡು ಬಂದಿದ್ದಾರೆ. ವ್ಯಾಪಾರದಲ್ಲಿ ನಷ್ಟವೇ ಅಗಸ್ತೀನ್ ಜೋಸೆಫ್ ಆತ್ಮಹತ್ಯೆಗೆ ಕಾರಣ ಎಂದು ಹೇಳಲಾಗಿದೆ. ನಜರಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

