ನಂಜನಗೂಡು: ಮೀನು ಸಾಕಣಿಕೆಗೆ ಮೀಸಲಾದ ಹೊಂಡಗಳು ಅಪಾಯಕ್ಕೆ ಆಹ್ವಾನ ನೀಡುತ್ತಿವೆ. ಅಧಿಕಾರಿಗಳ ದಿವ್ಯಾ ನಿರ್ಲಕ್ಷ್ಯಕ್ಕೆ ಒಳಗಾದ ನೀರು ತುಂಬಿದ ಹೊಂಡಗಳಲ್ಲಿ ಶಾಲಾ ಮಕ್ಕಳು ಆಟವಾಡಲು ಇಳಿಯುತ್ತಿದ್ದಾರೆ.
ಯಾವುದೇ ಸುರಕ್ಷತಾ ಕ್ರಮ ಕೈಗೊಳ್ಳದ ಹಿನ್ನಲೆ ಮಕ್ಕಳು ಲೀಲಾಜಾಲವಾಗಿ ನೀರಿಗೆ ಇಳಿದು ಜಲಕ್ರೀಡೆಯಲ್ಲಿ ತೊಡಗಿದ್ದಾರೆ. ಯಾವುದೇ ಅನಾಹುತ ಸಂಭವಿಸಿದರೂ ಯಾರು ಹೊಣೆ ಎಂಬುದು ಪ್ರಶ್ನೆಯಾಗಿದೆ.
ನಂಜನಗೂಡಿನ ಹೃದಯಭಾಗದಲ್ಲಿರುವ ಮೀನುಗಾರಿಕೆ ಸಹಾಯ ನಿರ್ದೇಶಕರ ಕಛೇರಿಯಲ್ಲಿ ಕಾಣುವ ದೃಶ್ಯಗಳು ಇವು. ಸರ್ಕಾರಿ ಕಛೇರಿಯಲ್ಲಿ ಮೀನು ಸಾಕಾಣಿಕೆಗಾಗಿ ಆವರಣದಲ್ಲೇ ಹೊಂಡಗಳನ್ನ ನಿರ್ಮಿಸಲಾಗಿದೆ. ಸುಮಾರು ನಾಲ್ಕು ಅಡಿ ಆಳದ ಹೊಂಡಗಳು ನಿರ್ಮಾಣವಾಗಿ ವರ್ಷಗಳೇ ಕಳೆದಿದೆ.

ಮೀನು ಸಾಕಾಣಿಕೆ ಕೇವಲ ದಾಖಲೆಗಳಲ್ಲಿ ಮಾತ್ರ ಉಳಿದಿದೆ. ಪ್ರಾಕ್ಟಿಕಲ್ ಆಗಿ ಇಲ್ಲಿ ಯಾವುದೇ ಸಾಕಾಣಿಕೆ ಕಾಣದೆ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ನಿರಂತರ ಮಳೆಯಿಂದಾಗ ಹೊಂಡಗಳು ತುಂಬಿವೆ. ಅಲ್ಲದೆ ಸ್ವಚ್ಛತೆಯೂ ಇಲ್ಲಿ ಮಾಯವಾಗಿದೆ. ಜೊತೆಗೆ ಸುರಕ್ಷತಾ ಕ್ರಮವನ್ನೂ ಸಹ ಇಲ್ಲಿ ಪಾಲಿಸಿಲ್ಲ.
ಇಂತಹ ಹೊಂಡಗಳಲ್ಲಿ ಸಮೀಪದಲ್ಲೇ ಇರುವ ಶಾಲಾ ಮಕ್ಕಳು ಕಾಂಪೌಂಡ್ ಹಾರಿ ಬಂದು ನೀರಿನಲ್ಲಿ ಇಳಿದು ಆಟವಾಡುತ್ತಿದ್ದಾರೆ. ಮಕ್ಕಳು ನೀರಿನಲ್ಲಿ ಇಳಿದಾಗ ಅನಾಹುತ ಸಂಭವಿಸಿದರೆ ಹೊಣೆ ಯಾರು…? ಈ ಹೊಂಡಗಳಲ್ಲಿ ಮೀನು ಸಾಕಾಣಿಕೆಯೂ ಇಲ್ಲ…ಸುರಕ್ಷತೆಯೂ ಇಲ್ಲ…ಹೀಗಿರುವಾಗ ಯಾವ ಪುರುಷಾರ್ಥಕ್ಕೆ ಇದನ್ನ ಉಳಿಸಿಕೊಂಡಿದ್ದಾರೆ ಗೊತ್ತಿಲ್ಲ. ಕೂಡಲೇ ಮೀನುಗಾರಿಕೆ ಸಹಾಯಕ ನಿರ್ದೇಶಕರು ಇತ್ತ ಗಮನ ಹರಿಸಿ ಮುಂದಾಗುವ ಅನಾಹುತಗಳಿಗೆ ಬ್ರೇಕ್ ಹಾಕಬೇಕಿದೆ.

