ನಂಜನಗೂಡು: ನದಿ ಮೂಲದ ನೀರಿಗೆ ಅವಲಂಬಿತರಾಗದೆ ಮಳೆ ನೀರಿನಿಂದ ರೈತರು ಭತ್ತದ ಬೆಳೆ ಬೆಳೆದು ಮಾದರಿಯಾಗಿದ್ದಾರೆ. ನಂಜನಗೂಡು ತಾಲ್ಲೂಕಿನ ವರುಣ ವಿಧಾನಸಭಾ ಕ್ಷೇತ್ರದ ಬೊಕ್ಕಹಳ್ಳಿ ಗ್ರಾಮದಲ್ಲಿ ರಾಂಪುರ ನಾಲಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ಸುರಿದ ಧಾರಾಕಾರ ಮಳೆಯಿಂದ ರೈತರು ನೈಸರ್ಗಿಕವಾಗಿ ಉತ್ತಮ ಭತ್ತದ ಫಸಲು ಕಂಡುಕೊಂಡಿದ್ದಾರೆ.
ಭತ್ತದ ಬೆಳೆಗೆ ಹೆಚ್ಚಾಗಿ ನೀರು ಬೇಕಾಗಿರುವುದರಿಂದ, ನಾಲೆಯಿಂದ ನೀರನ್ನು ತೆಗೆದುಕೊಳ್ಳದೆ ಮಳೆ ನೀರಿನಿಂದ ಬೆಳೆ ಬೆಳೆಯಲಾಗಿದೆ. ಉತ್ತಮ ಮಳೆಯಾದರೆ ನಮಗೆ ಯಾವುದೇ ನದಿ ಮೂಲದ ನೀರು ಬೇಕಾಗಿಲ್ಲ. ಈಗಾಗಲೇ ಭತ್ತದ ಫಸಲನ್ನು ಸಂರಕ್ಷಿಣೆ ಮಾಡಿಕೊಂಡಿದ್ದೇವೆ. ಸುಮಾರು 50 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಮಳೆಯ ನೀರಿನಿಂದ ಭತ್ತವನ್ನು ಬೆಳೆದಿದ್ದೇವೆ. ಕಡಿಮೆ ಖರ್ಚಿನಲ್ಲಿ ಬೆಳೆದು ಹೆಚ್ಚು ಲಾಭವನ್ನು ಪಡೆದುಕೊಳ್ಳಬಹುದು ಎಂದು ರೈತರು ತಿಳಿಸಿದ್ದಾರೆ.
ರೈತ ಮುಖಂಡರಾದ ಬೊಕ್ಕಹಳ್ಳಿ ನಂಜುಂಡಸ್ವಾಮಿ, ಪುಟ್ಟಸ್ವಾಮಿ ನಾಯಕ, ಬಸವರಾಜು, ಗ್ರಾಮ ಪಂಚಾಯತಿಯ ಸದಸ್ಯ ಶ್ರೀಧರ, ಗೋವಿಂದ ನಾಯಕ, ಮಹೇಶ್ ಸೇರಿದಂತೆ ಹಲವು ರೈತರು ನೈಸರ್ಗಿಕ ಕೃಷಿಯಲ್ಲಿ ಭತ್ತವನ್ನು ಬೆಳೆಯುತ್ತಿದ್ದಾರೆ.

