ಮೈಸೂರು: ಅಸಲಿ ವ್ಯಕ್ತಿ ಇದ್ದರೂ ನಕಲಿ ವ್ಯಕ್ತಿಗಳು ಆಸ್ತಿಯನ್ನ ಕಬಳಿಸಲು ಯತ್ನಿಸಿ ಸಿಕ್ಕಿಬಿದ್ದ ಘಟನೆ ಮೈಸೂರು ಪೂರ್ವ ಉಪನೊಂದಣಾಧಿಕಾರಿ ಕಚೇರಿಯಲ್ಲಿ ನಡೆದಿದೆ.

ಸಂಚು ರೂಪಿಸಿ ಸಿಕ್ಕಿಬಿದ್ದ ಐದು ಭೂಗಳ್ಳರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಹಿರಿಯ ಉಪನೊಂದಣಾಧಿಕಾರಿ ಹೆಚ್.ಎಲ್.ನಾಗರಾಜು ರವರು ಮೈಸೂರು ದಕ್ಷಿಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಮೈಸೂರಿನ ನೆಹರೂ ನಗರದ ನಿವಾಸಿಗಳಾದ ಉಮೇರಾಖಾನಂ,ಸೈಯದ್ ಇರ್ಫಾನ್,ಸಲ್ಮಾ ಸುಲ್ತಾನ,ಅಕ್ರಮ್ ಹಾಗೂ ಜೋಹರ್ ಆಲಮ್ ವಿರುದ್ದ ಪ್ರಕರಣ ದಾಖಲಾಗಿದೆ.ಗಾಯಿತ್ರಿಪುರಂ ನಿವಾಸ ಉಮೇರಾಖಾನಂ ಎಂಬುವರ ಹೆಸರಿನಲ್ಲಿದ್ದ ಆಸ್ತಿ ಲಪಟಾಯಿಸಲು ಸಂಚು ರೂಪಿಸಿ ಸಿಕ್ಕಿಬಿದ್ದಿದ್ದಾರೆ.

ಮೈಸೂರು ತಾಲ್ಲೂಕು ಕಸಬಾ ಹೋಬಳಿ ರಮ್ಮನಹಳ್ಳಿ ಗ್ರಾಮ ಸರ್ವೆ ನಂ.201/1 ರ 1 ಎಕ್ರೆ 7 ಗುಂಟೆ ಹಾಗೂ ರಮ್ಮನಹಳ್ಳಿ ಗ್ರಾಮ ಸರ್ವೆ ನಂ.210/4 ರ 1 ಎಕ್ರೆ 5 ಗುಂಟೆ ಜಮೀನಿನ ಮಾಲೀಕರು ಗಾಯಿತ್ರಿಪುರಂ ನ ಉಮೇರಾಖಾನಂ ರವರು.ಸದರಿ ಆಸ್ತಿಯನ್ನ ತಮ್ಮದೆಂದು ದಾಖಲೆ ಸೃಷ್ಟಿಸಿದ್ದ ನೆಹರೂ ನಗರದ ನಕಲಿ ಉಮೇರಾಖಾನಂ ರವರು ನಕಲಿ ಆಧಾರ್ ಕಾರ್ಡ್, ಪಾನ್ ಕಾರ್ಡ್ ಗಳನ್ನ ಸಲ್ಲಿಸಿ ಉಪನೊಂದಣಾಧಿಕಾರಿಗಳ ಕಚೇರಿಯಲ್ಲಿ ನಿಗದಿತ ಮುದ್ರಾಂಕ ಶುಲ್ಕ ಹಾಗೂ ನೊಂದಣಿ ಶುಲ್ಕ ಪಾವತಿಸಿ ತಮ್ಮ ಮಗಳ ಹೆಸರಿನಲ್ಲಿ ಎರಡು ಪ್ರತ್ಯೇಕ ದಾನಪತ್ರ ಮಾಡಿ ನೊಂದಣಿ ಮಾಡಿಸಿದ್ದಾರೆ.

ಈ ಬಗ್ಗೆ ದೂರು ಬಂದ ಆಧಾರದ ಮೇಲೆ ಹಿರಿಯ ಉಪನೊಂದಣಾಧಿಕಾರಿಗಳಾದ ನಾಗರಾಜು ರವರು ದಾಖಲೆಗಳನ್ನ ಪರಿಶೀಲಿಸಿದ್ದು ನಕಲಿ ಎಂದು ಖಚಿತವಾದ ಮೇಲೆ ಖುದ್ದಾಗಿ ಮೈಸೂರು ದಕ್ಷಿಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಕಲಿ ವ್ಯಕ್ತಿ ಹಾಗೂ ಇದಕ್ಕೆ ಸಹಕರಿಸಿದವರು ಸೇರಿದಂತೆ 5 ಮಂದಿ ವಿರುದ್ದ ಪ್ರಕರಣ ದಾಖಲಿಸಿದ್ದಾರೆ.