ಮೈಸೂರು: ಮೊದಲ ಆಷಾಡದಲ್ಲಿ ಚಾಮುಂಡಿ ಬೆಟ್ಟದ ತಾಯಿಗೆ ವಿಜೃಂಭಣೆಯಿಂದಾಗಿ ಪೂಜೆ ಸಲ್ಲಿಸಿಲಾಗುತ್ತದೆ. ತಾಯಿಗೆ ವಿಷೇಶವಾಗಿ ಅಲಂಕಾರ ಮಾಡಲಾಗಿತ್ತು ಇದನ್ನು ಕಣ್ತಂಬಿಕೊಳ್ಳಲು ಜನಸಾಗರವೇ ಹರಿದು ಬಂದಿತ್ತು. ಭಕ್ತರು ಆಷಾಡ ಶುಕ್ರವಾರ ಪೂಜೆಯಲ್ಲಿ ಭಾಗವಹಿಸಿ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದು ಪುನೀತರಾದರು.
ಆಷಾಢಮಾಸ ಶುಕ್ರವಾರ ಹಿನ್ನೆಲೆ ಇಂದು ಮೈಸೂರಿನ ಚಾಮುಂಡಿಬೆಟ್ಟದಲ್ಲಿರುವ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಗಿದೆ. ಬೆಟ್ಟದಲ್ಲಿ ಇಂದು ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.

ಆಷಾಡ ಶುಕ್ರವಾರದ ಪ್ರಯುಕ್ತ ಬೆಳಗಿನ ಜಾವ 3.30ಕ್ಕೆ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಪೂಜಾ ವಿಧಿ ವಿಧಾನಗಳು ಆರಂಭವಾದವು. ನಾಡ ದೇವತೆ ಚಾಮುಂಡಿಗೆ ಅಭಿಷೇಕ ಅರ್ಚನೆ, ಅಷ್ಟೋತ್ತರ ಪೂಜೆಗಳನ್ನು ದೇವಸ್ಥಾನದ ಅರ್ಚಕರು ನೆರವೇರಿಸಿದರು. ಭಕ್ತರು ಸರತಿ ಸಾಲಿನಲ್ಲಿ ನಿಂತು ಅಧಿದೇವತೆಯ ದರ್ಶನ ಪಡೆದರು.

ಆಷಾಡ ಮಾಸದ ಮೊದಲನೇ ಶುಕ್ರವಾರದಂದು ತಾಯಿ ಚಾಮುಂಡಿ ದೇವಿಯ ದರ್ಶನ ಪಡೆದರೆ ಒಳಿತಾಗುವುದು ಎಂಬ ನಂಬಿಕೆ ಭಕ್ತರದು. ಹೀಗಾಗಿ ಚಾಮುಂಡಿ ಬೆಟ್ಟಕ್ಕೆ ಜನಸಾಗರವೇ ಹರಿದು ಬಂದಿತ್ತು. ಆ ಮೂಲಕ ದೇವಿಯ ದರ್ಶನ ಪಡೆದು ಪುನೀತರಾದರು.

ಪುಷ್ಪಾಲಂಕಾರದಿಂದ ಕಂಗೊಳಿಸುತ್ತಿದ್ದ ಚಾಮುಂಡೇಶ್ವರಿಯನ್ನು ಕಣ್ತುಂಬಿಕೊಂಡ ಭಕ್ತರ ಮೊಗದಲ್ಲಿ ಧನ್ಯತಾ ಭಾವ ಮನೆ ಮಾಡಿತ್ತು. ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸಹಾ ತಾಯಿ ಚಾಮುಂಡೇಶ್ವರಿ ದರ್ಶನ ಪಡೆದು ಪ್ರಾರ್ಥನೆ ಸಲ್ಲಿಸಿದ್ದಾರೆ.

