ಮೈಸೂರು: ನಗರದ ದೇವರಾಜ ಮಾರ್ಕೆಟ್ ಮುಂಭಾಗ ಚಿಕ್ಕ ಗಡಿಯಾರ ಮುಂಭಾಗ ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕದ ವತಿಯಿಂದ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಅಂಗವಾಗಿ ಗ್ರಾಹಕರಿಗೆ ಗ್ರಾಹಕರ ಕಾಯ್ದೆಗಳ ಬಗ್ಗೆ ಭಿತ್ತಿಪತ್ರ ಹಿಡಿದು, ಕರಪತ್ರ ನೀಡಿ ಜಾಗೃತಿ ಮೂಡಿಸಲಾಯಿತು.

ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕ ಅಧ್ಯಕ್ಷ ಸಿ ಎಸ್ ಚಂದ್ರಶೇಖರ್ ಮಾತನಾಡಿ ಗ್ರಾಹಕರು ಯಾವುದೇ ವಸ್ತು ಖರೀದಿ ಮಾಡುವಾಗ ರಶೀದಿಯನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕು ಹಾಗೂ ಅದರ ಸೀಮಿತ ಅವಧಿಯನ್ನು ಪರಿಶೀಲಿಸಬೇಕು, ಪ್ರತಿಯೊಬ್ಬರು ಗ್ರಾಹಕರ ಹಕ್ಕುಗಳ ಬಗ್ಗೆ ತಿಳಿದುಕೊಳ್ಳಬೇಕು.

ಅದೇ ರೀತಿ ಎಲ್ಲ ಮಕ್ಕಳಿಗೆ ಗ್ರಾಹಕ ಹಕ್ಕುಗಳ ಬಗ್ಗೆ ತಿಳುವಳಿಕೆಯನ್ನು ನೀಡಬೇಕು. ಗ್ರಾಹಕರ ಹಿತಕ್ಕಾಗಿ ಕೆಲಸ ಮಾಡುವ ಸಂಸ್ಥೆಗಳು ರಾಜ್ಯ ಮತ್ತು ಕೇಂದ್ರ ಸರಕಾರಗಳ ಯೋಜನೆ ಕುರಿತು ಗ್ರಾಹಕರಿಗೆ ಅರಿವು ಮೂಡಿಸಬೇಕು. ಗೃಹ ಬಳಕೆ ವಸ್ತುಗಳನ್ನು ಖರೀದಿಸುವಾಗ ಅಥವಾ ಪಡೆದ ಸೇವೆಗಳಿಗಾಗಿ ತಪ್ಪದೇ ರಸೀದಿ ಪಡೆದುಕೊಳ್ಳಬೇಕು ಎಂದು ಅವರು ಹೇಳಿದರು.

ಈ ಜಾಗೃತಿ ಕಾರ್ಯಕ್ರಮದಲ್ಲಿ ಹಿರಿಯ ಗ್ರಾಹಕ ಪಂಚಾಯತ್ ಸದಸ್ಯರಾದ ಟಿಸಿ ರಂಗನಾಥ್, ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕದ ಅಧ್ಯಕ್ಷರಾದ ಸಿ ಎಸ್ ಚಂದ್ರಶೇಖರ್, ಮಹಿಳಾ ಪ್ರಮುಖ್ ನಾಗಮಣಿ ಜೆ, ಕಾರ್ಯದರ್ಶಿ ವಿಕ್ರಮ ಅಯ್ಯಂಗಾರ್, ದರ್ಶನ್ ಮೂರ್ತಿ ಕೆ, ಸುಚಿಂದ್ರ,ಆಲನಹಳ್ಳಿ ಎಂ ಎನ್ ಚೇತನ್ ಗೌಡ, ಸಚಿನ್ ನಾಯಕ್, ಆನಂದ್ ದಯಾನಂದ್, ಮಹಾನ್ ಶ್ರೇಯಸ್ ಹಾಗೂ ಇನ್ನಿತರರು ಹಾಜರಿದ್ದರು.