ನವದೆಹಲಿ: ಕೇಂದ್ರ ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರವು ಇಂದು ಸಿಹಿ ಸುದ್ದಿ ನೀಡಿದೆ. ಸಾಮಾನ್ಯ ಭವಿಷ್ಯ ನಿಧಿ ಸೇರಿ ಹಲವು ಭವಿಷ್ಯ ನಿಧಿಗಳಿಗೆ ಕೇಂದ್ರ ಸರ್ಕಾರವು ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಶೇ.7.1ರಷ್ಟು ಬಡ್ಡಿದರವನ್ನು ಘೋಷಣೆ ಮಾಡಿದೆ.
ಕೇಂದ್ರ ಹಣಕಾಸು ಸಚಿವಾಲಯವು ಈ ಕುರಿತು ಪ್ರಕಟಣೆ ಹೊರಡಿಸಿದ್ದು, ಪ್ರಸಕ್ತ ಹಣಕಾಸು ವರ್ಷದ ಜುಲೈ 1ರಿಂದ ಸೆಪ್ಟೆಂಬರ್ 30ರವರೆಗಿನ ತ್ರೈಮಾಸಿಕದಲ್ಲಿ ಜಿಪಿಎಫ್ ಸೇರಿ ಹಲವು ಭವಿಷ್ಯ ನಿಧಿಗಳ ಮೇಲಿನ ಬಡ್ಡಿದರವನ್ನು ಶೇ.7.1ರಷ್ಟು ಘೋಷಿಸಲಾಗಿದೆ. ಇದೊಂದು ಔಪಚಾರಿಕ ಮಾಹಿತಿಯಾಗಿದೆ. ನೂತನ ಬಡ್ಡಿದರವು ಜುಲೈ 1ರಿಂದ ಪೂರ್ವಾನ್ವಯವಾಗುವಂತೆ ಜಾರಿಗೆ ಬಂದಿದೆ ಎಂಬುದಾಗಿ ಮಾಹಿತಿ ನೀಡಿದೆ.
ಇದೇ ತ್ರೈಮಾಸಿಕದಲ್ಲಿ ಹಿರಿಯ ನಾಗರಿಕರ ಉಳಿತಾಯ ಯೋಜನೆಗಳ ಬಡ್ಡಿದರವನ್ನು ಶೇ.8.2ರಷ್ಟು ಹಾಗೂ ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ ಯೋಜನೆಯ ಬಡ್ಡಿದರವನ್ನು ಶೇ.7.7ರಷ್ಟೇ ಮುಂದುವರಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ.
ಸಾಮಾನ್ಯ ಭವಿಷ್ಯ ನಿಧಿ, ಕೊಡುಗೆ ಭವಿಷ್ಯ ನಿಧಿ, ಅಖಿಲ ಭಾರತ ಸೇವೆಗಳ ಭವಿಷ್ಯ ನಿಧಿ, ರಾಜ್ಯ ರೈಲ್ವೆ ಭವಿಷ್ಯ ನಿಧಿ, ಭಾರತೀಯ ಶಸ್ತ್ರಾಸ್ತ್ರ ಇಲಾಖೆ ಭವಿಷ್ಯ ನಿಧಿಗೆ ಶೇ.7.1ರಷ್ಟು ಬಡ್ಡಿದರ ನಿಗದಿ ಪಡಿಸಲಾಗಿದೆ.

