ನವದೆಹಲಿ: ಬಜೆಟ್ನಲ್ಲಿ ಚಿನ್ನ ಮತ್ತು ಬೆಳ್ಳಿಯ ಮೇಲೆ ಆಮದು ಸುಂಕವನ್ನು ಕಡಿತ ಮಾಡಿದ್ದರಿಂದ ಆಭರಣಗಳ ದರ ಇಳಿಕೆಯಾಗಲಿದೆ.
ಈ ಮೊದಲು ಚಿನ್ನ ಮತ್ತು ಬೆಳ್ಳಿಗೆ 15% ಆಮದು ಸುಂಕ ವಿಧಿಸಲಾಗುತ್ತಿತ್ತು. ಆದರೆ ಈಗ ಆಮದು ಸುಂಕವನ್ನು 6% ಇಳಿಕೆ ಮಾಡಲಾಗಿದೆ.
ದೇಶದಲ್ಲಿ ಚಿನ್ನ ಮತ್ತು ಬೆಲೆಬಾಳುವ ಲೋಹದ ಆಭರಣಗಳಲ್ಲಿ ದೇಶೀಯ ಮೌಲ್ಯವರ್ಧನೆ ಹೆಚ್ಚಿಸಲು, ಚಿನ್ನ ಮತ್ತು ಬೆಳ್ಳಿಯ ಮೇಲಿನ ಕಸ್ಟಮ್ಸ್ ಸುಂಕವನ್ನು 6% ಕ್ಕೆ ಮತ್ತು ಪ್ಲಾಟಿನಂ ಮೇಲೆ 6.4% ಕ್ಕೆ ಇಳಿಸಲು ನಾನು ಪ್ರಸ್ತಾಪಿಸುತ್ತೇನೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ ಭಾಷಣದಲ್ಲಿ ಹೇಳಿದರು.
ವಿಘ್ನಹರ್ತಾ ಗೋಲ್ಡ್ನ ಅಧ್ಯಕ್ಷ ಮತ್ತು ಸಂಸ್ಥಾಪಕ ಮಹೇಂದ್ರ ಲುನಿಯಾ ಪ್ರತಿಕ್ರಿಯಿಸಿ, 2023 ಹಣಕಾಸು ವರ್ಷದಲ್ಲಿ ಭಾರತ ಅಂದಾಜು 2.8 ಲಕ್ಷ ಕೋಟಿ ರೂ. ಮೌಲ್ಯದ ಚಿನ್ನವನ್ನು ಆಮದು ಮಾಡಿಕೊಂಡಿದೆ. 15% ಆಮದು ಸುಂಕ ಇರುವ ಕಾರಣ ಅಂದಾಜು 42,000 ಕೋಟಿ ರೂ. ಪಾವತಿಸಲಾಗಿದೆ ಎಂದು ತಿಳಿಸಿದರು.
ವರ್ಷದಿಂದ ವರ್ಷಕ್ಕೆ ಚಿನ್ನದ ಬೇಡಿಕೆ ಹೆಚ್ಚಾಗುತ್ತಿದ್ದಂತೆ ಚಿನ್ನದ ದರವೂ ಭಾರತದಲ್ಲಿ ಏರಿಕೆಯಾಗುತ್ತಿದೆ. ಆಮದು ಸುಂಕವು ಹೆಚ್ಚಿದ್ದರಿಂದ ಚಿನ್ನದ ಕಳ್ಳಸಾಗಾಣೆ ಹೆಚ್ಚಾಗುತ್ತಿದೆ. ಈ ಕಳ್ಳ ಸಾಗಾಣೆಯನ್ನು ನಿಯಂತ್ರಿಸಲು ಸರ್ಕಾರ ಈಗ ಆಮದು ಸುಂಕವನ್ನು ಇಳಿಸಿದೆ.

