ಮಂಗಳೂರು : ಪಶ್ಚಿಮ ಬಂಗಾಲದಲ್ಲಿ ಬಿಜೆಪಿ ಅ˜ಕಾರಕ್ಕೆ ಬಂದು ಒಂದು ದಿನದೊಳಗೆ ಬಾಂಗ್ಲಾ ವಲಸಿಗರನ್ನು ಹೊರ ಹಾಕುವುದಾಗಿ ಹೇಳಲಾಗಿತ್ತು. ಅಧಿಕಾರಕ್ಕೆ ಬಂದು 2 ತಿಂಗಳಾಯಿತು. ಪಶ್ಚಿಮ ಬಂಗಾಲ, ಉತ್ತರ ಪ್ರದೇಶ, ಬಿಹಾರ, ಒರಿಸ್ಸಾ, ಅಸ್ಸಾಂನಿಂದ, ಆಗ್ನೇಯ ರಾಜ್ಯಗಳಿಂದ ಎಷ್ಟು ಮಂದಿ ಬಾಂಗ್ಲಾದೇಶಿಯರನ್ನು ಹೊರ ಹಾಕಲಾಗಿದೆ ಎಂಬ ಶ್ವೇತಪತ್ರ ಹೊರಡಿಸುವಂತೆ ವಿಧಾನ ಪರಿಷತ್‌ ಸದಸ್ಯ ಐವನ್‌ ಡಿಸೋಜಾ ಅವರು ರಾಜ್ಯ ಬಿಜೆಪಿ ನಾಯಕರಿಗೆ ಸವಾಲು ಹಾಕಿದ್ದಾರೆ.

ನಗರದ ಲಾಲ್‌ಬಾಗ್‌ನಲ್ಲಿರುವ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಬಾಂಗ್ಲಾದೇಶದ ವಲಸಿಗರಿಗೆ ರಕ್ಷಣೆ ಕಾಂಗ್ರೆಸ್‌ ರಕ್ಷಣೆ ನೀಡಿರುವುದೇ ಅಥವಾ ಬಿಜೆಪಿ ನೀಡಿರುವುದೇ ಎಂಬುದು ಅಂಕಿಅಂಶಗಳಿಂದ ಬಯಲಾಗುತ್ತದೆ. ಈ ಬಗ್ಗೆ ಶ್ವೇತ ಪತ್ರ ಹೊರಡಿಸಲು ಬಿಜೆಪಿ ನಾಯಕರು ಕೇಂದ್ರವನ್ನು ಒತಾಯಿಸಬೇಕು ಎಂದರು.

ಮನಮೋಹನ್‌ ಸಿಂಗ್‌ ಪ್ರಧಾನಿಯಾಗಿದ್ದ 10 ವರ್ಷಗಳ ಅವಧಿಯಲ್ಲಿ 83,000 ಮಂದಿ ಗುರುತಿಸಿ ಬಾಂಗ್ಲಾದೇಶಿಯರನ್ನು ಗುರುತಿಸಿ ಅವರನ್ನು ಹೊರಗಟ್ಟುವ ಕಾರ್ಯ ಮಾಡಿರುವ ಕೀರ್ತಿ ಕಾಂಗ್ರೆಸ್‌ ಪಕ್ಷದ್ದು. ಇದನ್ನು ಬಿಜೆಪಿಯ ನಾಯಕರು ತಿಳಿಯಬೇಕು. ಚರಿತ್ರೆ ತಿಳಿಯಬೇಕು. ಕೇಂದ್ರದಲ್ಲಿ ಕಳೆದ 12 ವರ್ಷಗಳಲ್ಲಿ ಅಧಿಕಾರದಲ್ಲಿರುವ ಪ್ರಧಾನಿ ಮೋದಿಯವರ ಸರಕಾರ ಈವರೆಗೆ ಹೊರಹಾಕಿದ ಬಾಂಗ್ಲಾದೇಶಿಯರ ಸಂಖ್ಯೆ ಕೇವಲ 8000. ಈ ಬಗ್ಗೆ ಬಿಜೆಪಿಯ ನಾಯಕರಾದ ಕ್ಯಾ. ಬ್ರಿಜೇಶ್‌ ಚೌಟ, ವಿಜಯೇಂದ್ರ ಅವರಿಗೆ ತಿಳಿದಿರಬೇಕು ಎಂದವರು ಹೇಳಿದರು.

ವಲಸಿಗರ ಹೆಸರಿನಲ್ಲಿ ಮುಸ್ಲಿಂ ಬಾಂಧವರು, ಅಲ್ಪಸಂಖ್ಯಾತರಿಗೆ ಅವಮಾನ ಮಾಡುವ ಕೆಲಸವಾಗುತ್ತಿದೆ. ನೈಜ ಮತದಾರರನ್ನು ಹೊರಗಿಡುವ ಹುನ್ನಾರ ಬಿಜೆಪಿ ನಡೆಯುತ್ತಿದೆ. ನುಸುಳುಕೋರರನ್ನು ತಡೆಯುವುದು ಕಾಂಗ್ರೆಸ್‌ ಕೆಲಸವೋ, ಬಿಜೆಪಿಯದ್ದೋ, ರಾಜ್ಯ ಸರಕಾರದ ಜವಾಬ್ಧಾರಿಯೇ ಅಥವಾ ಕೇಂದ್ರದ್ದೇ ಎಂಬುದನ್ನು ಬಿಜೆಪಿ ನಾಯಕರು ತಿಳಿಸಬೇಕು. ಅಧಿಕಾರ ನಿಮ್ಮ ಕೈಯ್ಯಲ್ಲಿದ್ದು, ಗಡಿ ಪ್ರದೇಶದಲ್ಲಿ ನುಸುಳುಕೋರನರ್ನು ಯಥೇಚ್ಛವಾಗಿ ಒಳ ಬರಲು ಅವಕಾಶ ನೀಡಿ, ಅವರನ್ನು ದೇಶದೆಲ್ಲೆಡೆ ಸುತ್ತಾಡಲು ಬಿಟ್ಟು ವಿಪಕ್ಷದ ಮೇಲೆ ಗೂಬೆ ಕೂರಿಸುವುದನ್ನು ತೀವ್ರವಾಗಿ ಖಂಡಿಸಲಾಗುತ್ತದೆ ಎಂದವರು ಹೇಳಿದರು.

ಸುರತ್ಕಲ್‌ನಲ್ಲಿ, ಮಂಗಳೂರಿನಲ್ಲಿ ಬಾಂಗ್ಲಾದೇಶಿಯರ ಪತ್ತೆಯಲ್ಲಿ ನಮ್ಮ ಸರಕಾರ ಕೆಲಸ ಮಾಡಿದೆ. ಬಾಂಗ್ಲಾ ದೇಶಿಯರಿಗೆ ನಾವು ರಕ್ಷಣೆ ಮಾಡಿದ್ದೇವೆಂಬ ಆರೋಪದ ಬಗ್ಗೆ ಒಂದು ಉದಾಹರಣೆ ತೋರಿಸಿ ಎಂದು ಅವರು ಬಿಜೆಪಿ ನಾಯಕರಿಗೆ ಸವಾಲು ಹಾಕಿದರು.

ಬಾಂಗ್ಲಾದೇಶಿಯರನ್ನು ನಮ್ಮ ದೇಶಕ್ಕೆ ತಂದು ಅವರನ್ನು ಎಸ್‌ಐಆರ್‌ನಲ್ಲಿ ಸೇರಿಸಿ ಅವರಿಗೆ ಮತದಾನದ ಹಕ್ಕು ನೀಡಲು ಕಾಂಗ್ರೆಸ್‌ ಪ್ರಯತ್ನಿಸುತ್ತಿದೆ ಎಂಬ ಬಿಜೆಪಿ ಆರೋಪ ಸುಳ್ಳಾಗಿದ್ದು, ಅಂತಹ ಯಾವುದೇ ಪ್ರಕ್ರಿಯೆಯನ್ನು ಕಾಂಗ್ರೆಸ್‌ ಮಾಡುವುದಿಲ್ಲ. ಇಂತಹ ಆರೋಪಗಳು ಕೇವಲ ರಾಜಕೀಯ ಪ್ರೇರಿತ. ಕಾಂಗ್ರೆಸ್‌ ಬಾಂಗ್ಲಾದೇಶಿಯರಿಗೆ ರಕ್ಷಣೆ ನೀಡುತ್ತದೆ ಎಂಬ ಷಡ್ಯಂತ್ರದ ಮೂಲಕವೇ ಐದು ರಾಜ್ಯಗಳಲ್ಲಿ ನಡೆದ ಚುನಾವಣೆಗಳಲ್ಲಿ ಮೂರು ರಾಜ್ಯಗಳಲ್ಲಿ ಎಸ್‌ಐಆರ್‌ನಲ್ಲಿ ಅವ್ಯವಹಾರ ನಡೆಸಿ ಬಿಜೆಪಿ ಗೆದ್ದಿದೆ ಎಂದವರು ಆರೋಪಿಸಿದರು.

ಎಸ್‌ಐಆರ್‌ನ್ನು ಕೆಲವು ಕಾರಣಗಳಿಂದ ನಾವು ವಿರೋ˜ಸುತ್ತೇವೆ. ಆದರೆ ಜನರ ಹಿತಾದೃಷ್ಟಿಯಿಂದ ನೈಜ ಮತದಾರರು ಪಟ್ಟಿಯಿಂದ ಹೊರಗುಳಿಯಬಾರದು ಎಂಬ ಉದ್ದೇಶದಿಂದ 54,000 ಬೂತ್‌ಗಳಲ್ಲಿಯೂ ಬಿಎಲ್‌ಎ 2ಗಳನ್ನು ನೇಮಕ ಮಾಡಿ ಅವರ ಮೂಲಕ ಬಿಎಲ್‌ಒಗಳಿಗೆ ಸಹಕಾರ ನೀಡುವ ಮೂಲಕ ಎಸ್‌ಐಆರ್‌ ಯಶಸ್ಸಿಗೆ ಪ್ರಯತ್ನಿಸಲಾಗುತ್ತಿದೆ. ಕಾಂಗ್ರೆಸ್‌ ರಾಜ್ಯದಲ್ಲಿ ಎಸ್‌ಐಆರ್‌ಗೆ ಸಹಕರಿಸುವುದಿಲ್ಲ.

ಜನರಿಗೆ ಸಹಕಾರ ನೀಡಿ ನೈಜ ಮತದಾರರ ಹೆಸರು ಪಟ್ಟಿಯಲ್ಲಿ ಸೇರ್ಪಡೆಗೆ ಮುಂದಾಗದು. ಅದರ ಲಾಭ ಪಡೆಯಬಹುದು ಎಂದು ಬಿಜೆಪಿ ಅನಿಸಿತ್ತು. ಅದಕ್ಕಾಗಿ ಬಿಜೆಪಿ ಚುನಾವಣಾ ಆಯುಕ್ತರನ್ನು ಭೇಟಿ ಮಾಡುತ್ತಿದೆ. ಅಕ್ರಮ ನಡೆಯುತ್ತಿದೆ ಎಂದು ಆರೋಪಿಸುತ್ತಿದೆ. ಕೇಂದ್ರ ಸರಕಾರದ ಮಂತ್ರಿಗಳು ನ್ಯೂನ್ಯತೆ ಎಂದು ಆರೋಪಿಸಿದರೆ ಎಸ್‌ಐಆರ್‌ನ್ನು ನಡೆಸುತ್ತಿರುವ ಚುನಾವಣಾ ಆಯೋಗದ ಮೇಲೆ ಆರೋಪ ಮಾಡಿದಂತೆ. ಚುನಾವಣಾ ಆಯೋಗಕ್ಕೆ ರಾಜ್ಯ ಸರಕಾರ ಅಗತ್ಯ ಅಧಿಕಾರಿ, ಸಿಬ್ಬಂದಿ ಬಲವನ್ನು ನೀಡಿ ಸಹಕಾರ ನೀಡಿದೆ. ಬಿಜೆಪಿಯವರಿಗೆ ಅಧಿಕಾರಿಗಳ ಮೇಲೆಯೇ ಸಂಶಯದ ವಾತಾರವಣ ಸೃಷ್ಟಿಸಲಾಗಿದೆ ಎಂದವರು ಆಕ್ಷೇಪಿಸಿದರು.

ಖಾಯಂ ವಾಸಸ್ಥಳ ಪ್ರಮಾಣ ಪತ್ರ (ಪಿಆರ್‌ಸಿ)ವನ್ನು ಸಿಕ್ಕ ಸಿಕ್ಕವರಿಗೆ ನೀಡಲಾಗುತ್ತಿದೆ ಎಂದು ಆರೋಪಿಸಿ ಬಿಜೆಪಿಯವರು ಪ್ರತಿಭಟನೆಗೆ ಮುಂದಾಗಿದ್ದಾರೆ. ಪಿಆರ್‌ಸಿ ಹೊಸತಾಗಿ ನೀಡುತ್ತಿರುವುದು ಅಥವಾ ಹೊಸ ಕಾಯಿದೆ ಏನೂ ತರಲಾಗಿಲ್ಲ. ಯಾರಿಗೆ ಆಧಾರ್‌ ಕಾರ್ಡ್‌, ಮತದಾರ ಗುರುತಿನ ಚೀಟಿ ಇರುವ, ಖಾಯಂ ವಾಸಸ್ಥಳ ಹೊಂದಿರುವವರ ದಾಖಲೆ ಪಡೆದು ವಿಎಯಿಂದ ದೃಢೀಕರಣಗೊಂಡು ಆರ್‌ಐಯಿಂದ ತಹಶೀಲ್ದಾರ್‌ ನೀಡುವಂತದ್ದು. ಜನಸಾಮಾನ್ಯರು ಈ ಪಿಆರ್‌ಸಿಗಾಗಿ ಅಲೆದಾಟ ತಪ್ಪಿಸಲು ಪಿಡಿಒ ಮೂಲಕ ನೀಡಲು ಅವಕಾಶ ನೀಡಿ ಸರಳೀಕರಣಗೊಳಿಸಲಾಗಿದೆ.

ಯಾವುದೇ ಒಬ್ಬ ಮತದಾರನ ಹೆಸರು 2002ರ ಪಟ್ಟಿಯಲ್ಲಿ ಇಲ್ಲದಾಗ ಆತ ಆಯೋಗಕ್ಕೆ ಒದಗಿಸಬಹುದಾದ 11 ದಾಖಲೆಗಳಲ್ಲಿ ಈ ಪಿಆರ್‌ಸಿಯೂ ಸೇರಿದೆ. ಅಂತಹದರಲ್ಲಿ ಬಾಂಗ್ಲಾದೇಶಿಯರನ್ನು ಪಟ್ಟಿಗೆ ಸೇರಿಸಲು ಈ ಪಿಆರ್‌ಸಿ ನೀಡಲಾಗುತ್ತಿದೆ ಎಂಬ ಆರೋಪ ಮಾಡುವವರು ಅದನ್ನು ಸಾಬೀತುಪಡಿಸಿ. ವಿನಾ ಕಾರಣ ಆರೋಪ ಮಾಡುವುದನ್ನು ಕಾಂಗ್ರೆಸ್‌ ಖಂಡಿಸುತ್ತದೆ ಎಂದವರು ಹೇಳಿದರು.

ಬಿಎಲ್‌ಒಗಳಿಗೆ ಎಸ್‌ಐಆರ್‌ ಎನ್ಯುಮರೇಶನ್‌ ಫಾರಂ ಭರ್ತಿ ಮಾಡಲು ಸಾಕಷ್ಟು ಗೊಂದಲವಿದೆ. ಕಷ್ಟವಿದೆ. ಹಾಗಾಗಿ ಅಲ್ಲಲ್ಲಿ ಜನರನ್ನು ಸೇರಿಸಿ ಫಾರಂ ಭರ್ತಿ ಮಾಡಲು ಸಹಕಾರ ನೀಡುವ ಕೆಲಸವನ್ನು ಬಿಎಲ್‌ಎ2ಗಳ ಮೂಲಕ ಮಾಡಲಾಗುತ್ತಿದೆ. ಈಗಾಗಲೇ ಜಿಲ್ಲೆಯಲ್ಲಿ ಎಸ್‌ಐಆರ್‌ ಪ್ರಕ್ರಿಯೆಯಡಿ ಶೇ. 11ರಷ್ಟು ಮಾತ್ರವೇ ಎನ್ಯುಮರೇಶನ್‌ ಫಾರಂ ಹಿಂದಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಕೆಲವರು ವ್ಯಾಪಾರಕ್ಕಾಗಿ ಇಲ್ಲಿಗೆ ಬಂದವರು ಎರಡು ಮೂರು ಕಡೆ ಮತದಾರರ ಗುರುತಿನ ಚೀಟಿ ಹೊಂದಿರುವುದು, ಅಂತಹವರಿಗೆ ಸಹಕಾರ ನೀಡುವುದು. ಕೆಲವರು ಬಾಡಿಗೆ ಮನೆ ಬಿಟ್ಟು ಹೋಗಿದ್ದು, ಅಲ್ಲಿ ಬೇರೆಯವರು ಬಂದಿದ್ದರೂ ಹಿಂದಿನವರ ಫಾರಂ ಪಡೆದು ಅದನ್ನು ಭರ್ತಿ ಮಾಡಿ ನೀಡಬೇಕೆಂಬ ಒತ್ತಡವನ್ನೂ ಅಧಿಕಾರಿಗಳ ಮೇಲೆ ಹಾಕುತ್ತಿರುವುದು ನನ್ನ ಗಮನದಲ್ಲಿದ್ದು, ಈಗ ಆ ಬಗ್ಗೆ ಯಾರ ಮೇಲೆಯೂ ಆರೋಪ ಮಾಡುವುದಿಲ್ಲ. ಆದರೆ ಕರಡು ಮತದಾರರ ಪಟ್ಟಿ ಹೊರಬಂದಾಗ ಅದನ್ನು ಬಹಿರಂಗಪಡಿಸಲಾಗುವುದು ಎಂದು ಅವರು ಹೇಳಿದರು.

ಗೋಷ್ಟಿಯಲ್ಲಿ ಕಾಂಗ್ರೆಸ್‌ ಮುಖಂಡರಾದ ಅಪ್ಪಿ, ಶಶಿಧರ ಹೆಗ್ಡೆ, ಭಾಸ್ಕರ ಮೊಯ್ಲಿ, ನಾಗೇಂದ್ರ ಕುಮಾರ್‌, ಭಾಸ್ಕರ ರಾವ್‌, ಸತೀಶ್‌ ಪೆಂಗಲ್‌, ಜೇಮ್ಸ್‌ ಪ್ರವೀಣ್‌, ಆಲ್ಟನ್‌ ಡಿಕುನ್ನಾ, ಇಮ್ರಾನ್‌, ಮನೀಶ್‌ ಬೋಳಾರ್‌, ಮನೋಜ್‌ ಎಂ.ಪಿ. ಉಪಸ್ಥಿತರಿದ್ದರು.