ಬಂಟ್ವಾಳ: ಸುಮಾರು 600 ವರ್ಷಗಳ ಇತಿಹಾಸವಿರುವ ವಿಟ್ಲಸಮೀಪದ ಮೇಗಿನಪೇಟೆಯ ವಿಟ್ಲ ಕೇಂದ್ರ ಜುಮಾ ಮಸೀದಿಯ ಮುಂಭಾಗದಲ್ಲಿ ಅಂತ್ಯ ವಿಶ್ರಾಂತಿ ಪಡೆಯುತ್ತಿರುವ ವಲಿಯುಲ್ಲಾಹಿ ಮಶ್ಹೂರ್ ರವರ ಹೆಸರಿನಲ್ಲಿ ಫೆಬ್ರವರಿ 19 ರಿಂದ 22 ರವರೆಗೆ ಉರೂಸ್ ನಡೆಯಲಿದೆ ಎಂದು ಉರೂಸ್ ಕಮಿಟಿ ಅಧ್ಯಕ್ಷ ವಿಕೆಎಂ ಅಶ್ರಫ್ ತಿಳಿಸಿದರು.
ಅವರು ವಿಟ್ಲದಲ್ಲಿ ಕರೆದ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿ ಈ ಸಂದರ್ಭ ಕೇರಳದ ಪ್ರಖ್ಯಾತ ವಿದ್ವಾಂಸರಾದ ಉಸ್ತಾದ್ ಆಶಿಕ್ ದಾರಿಮಿ ಆಲಫುಝ,ಹಾಫಿಝ್ ಅನ್ವರ್ ಮಣ್ಣಾನಿ ತೋಝಪುರ,ಶಫೀಕ್ ಅಲ್ ಬದ್ರಿಅಲ್ ಬಾಖವಿ ಕಡಕ್ಕಲ್ ಹಾಗೂ ಹನೀಫ್ ನಿಝಾಮಿ ಅಲ್ ಮುರ್ಷಿದ್ ಮೊಗ್ರಾಲ್ ಇವರಿಂದ ನಾಲ್ಕು ದಿನಗಳ ಮತಪ್ರವಚನ ನಡೆಯಲಿದೆ.
ಫೆ. 19ರಂದು ಕರ್ನಾಟಕ ರಾಜ್ಯ ಮುಶಾವರ ಅಧ್ಯಕ್ಷ ಎನ್.ಪಿ.ಎಂ.ಸೈಯದ್ ಝೈನುಲ್ ಆಬಿದೀನ್ ತಂಙಳ್ ದುಗ್ಗಲಡ್ಕ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ಫೆ. 20ರಂದು ನಡೆಯುವ ಮತ ಪ್ರವಚನ ಕಾರ್ಯಕ್ರಮದಲ್ಲಿ ಶೈಖುನಾ ವಾಲೆಮುಂಡೋವ್ ಉಸ್ತಾದ್ ಅವರು ದುವಾಃ ನೇತೃತ್ವ ನೀಡಲಿದ್ದಾರೆ. ಅಬ್ದುಲ್ ಖಾದರ್ ಬಂಬ್ರಾಣ ಉಸ್ತಾದ್ ಉದ್ಘಾಟಿಸಲಿದ್ದಾರೆ.
21 ರಂದು ಅಸೈಯದ್ ಇಬ್ರಾಹಿಂ ಬಾತಿಷ್ ತಂಙಳ್ ಅಲ್ಬುಖಾರಿ ಆನೆಕಲ್ಲು ಇವರ ನೇತೃತ್ವದಲ್ಲಿ ಮಜ್ಲಿಸುನ್ನೂರ್ ವಾರ್ಷಿಕ ನಡೆಯಲಿದೆ. ಅಂದು ತಬೂರುಕ್ ವಿತರಣೆ ಇರುತ್ತದೆ.
ಫೆಬ್ರವರಿ 22 ರಂದು ವಿಟ್ಲ ಮಖಾಂ ಉರೂಸ್ ಸಮಾರೋಪ ಸಮಾರಂಭ ನಡೆಯಲಿದ್ದು, ಸಮಸ್ತ ಕೇರಳ ಜಂ ಇಯ್ಯತುಲ್ ಉಲಮಾ ಅಧ್ಯಕ್ಷರಾದ ಸೈಯದುಲ್ ಉಲಮಾ ಅಸಯ್ಯದ್ ಮಹಮ್ಮದ್ ಜಿಫ್ರಿ ಮುತ್ತುಕೋಯ ತಂಙಳ್ ಮತ್ತು ಸೈಯ್ಯದ್ ಅಲಿ ತಂಙಳ್ ಕುಂಬೋಳ್ ನೇತೃತ್ವದಲ್ಲಿ ದುವಾಃ ನಡೆಯಲಿದೆ. ದ.ಕ.ಜಿಲ್ಲಾ ಖಾಝಿ ಹಾಗೂ ಸಮಸ್ತ ಮುಶಾವರ ಕೇಂದ್ರ ಸದಸ್ಯರಾದ ತ್ವಾಖಾ ಅಹಮದ್ ಮುಸ್ಲಿಯಾರ್ ಉದ್ಘಾಟಿಸಲಿದ್ದಾರೆ.
ಕೂಟು ಝಿಯಾರತ್ ನೇತೃತ್ವವನ್ನು ಅಸಯ್ಯದ್ ಎಸ್.ಎಂ.ಮೊಹಮ್ಮದ್ ತಂಙಳ್ ಸಾಲ್ಮರ ವಹಿಸಲಿದ್ದಾರೆ. ಸಮಾರೋಪದ ದಿನ ಅನ್ನದಾನ ನಡೆಯಲಿದೆ ಎಂದು ತಿಳಿಸಿದರು.
ವಿಟ್ಲ ಕೇಂದ್ರ ಜುಮಾ ಮಸೀದಿ ಅಧ್ಯಕ್ಷ ಅಶ್ರಫ್ ಮಹಮ್ಮದ್ ಪೊನ್ನೋಟು ಮಾತನಾಡಿ ,ವಿಟ್ಲ ಮಸೀದಿಯಲ್ಲಿ ಕಳೆದ ಹನ್ನೆರಡು ವರ್ಷಗಳ ಹಿಂದೆ ವೈಭವದ ಉರೂಸ್ ನಡೆದಿದ್ದು ಆ ಬಳಿಕ ಕಾರಣಾಂತರಗಳಿಂದ ಸ್ಥಗಿತವಾಗಿತ್ತು.ಇದೀಗ ಯುವಕರು ಉತ್ಸಾಹದಿಂದ ಮುಂದೆ ಬಂದಿದ್ದು ಈಗ ಮಸೀದಿಯ ನಿರ್ದೇಶನ ಪ್ರಕಾರ ಅವರ ನೇತೃತ್ವದಲ್ಲಿ ಉರೂಸ್ ನಡೆಯುತ್ತಿದೆ ಎಂದು ಹೇಳಿದರು.
ಪತ್ರಿಕಾ ಗೋಷ್ಠಿಯಲ್ಲಿ ಹೊರೈಝನ್ ಪಬ್ಲಿಕ್ ಸ್ಕೂಲ್ ಅಧ್ಯಕ್ಷ ಅಝೀಝ್ ಸನ, ಮದರಸ ಅಧ್ಯಕ್ಷ ಶಮೀರ್ ಪಳಿಕೆ, ಯೂತ್ ವಿಂಗ್ ಅಧ್ಯಕ್ಷ ರಫೀಕ್ ಪೊನ್ನೋಟು, ಮಸೀದಿಯ ಕೋಶಾಧಿಕಾರಿ ಶರೀಫ್ ಪೊನ್ನೋಟು, ಜೊತೆ ಕಾರ್ಯದರ್ಶಿ ಅಬೂಬಕರ್ ಅನಿಲಕಟ್ಟೆ ಉಪಸ್ಥಿತರಿದ್ದರು.

