ಮಂಗಳೂರು : ಫಲ್ಗುಣಿ ನದಿಯಲ್ಲಿ ನೆರೆ ಬಂದು ಮಂಗಳೂರಿನ ಅದ್ಯಪಾಡಿ ಗ್ರಾಮ ದ್ವೀಪದಂತಾಗಿದೆ. ಅದ್ಯಪಾಡಿಯ ಮೋಗೆರ್ ಕುದ್ರು ಮಳೆಗಾಲ ಬಂದಾಗ ಸಂಪೂರ್ಣ ಮುಳುಗಡೆಯಾಗುತ್ತದೆ.
ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅದ್ಯಪಾಡಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಮೊಗೇರ್ ಕುದ್ರುವಿನ ಜನ ಉಸ್ತುವಾರಿ ಸಚಿವರ ಮುಂದೆ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿ ಮಳೆಗಾಲದ ಸಂದರ್ಭ ಇದೇ ರೀತಿ ಸಮಸ್ಯೆ ಆಗುತ್ತದೆ. ನಮಗೆ ಇದಕ್ಕಿಂತ ಸ್ವಲ್ಪ ವಿಷ ಆದ್ರು ಕೊಡಿ, ಮರವೂರು ಕಿಂಡಿ ಅಣೆಕಟ್ಟಿಗೆ ಎಮರ್ಜೆನ್ಸಿ ಗೇಟ್ ಮಾಡಿದ್ರೆ ಸಮಸ್ಯೆ ಪರಿಹಾರವಾಗುತ್ತದೆ. 11 ವರ್ಷದಿಂದ ಈ ಬಗ್ಗೆ ಮನವಿ ಮಾಡಿದ್ರು ಯಾವುದೇ ಕ್ರಮ ಆಗಿಲ್ಲ. ಈ ಮಳೆಗಾಲದಲ್ಲಿ ಮೂರು ಸಾರಿ ನಮ್ಮ ಮನೆಗಳು ಮುಳುಗಡೆ ಆಯ್ತು, ಪ್ರತಿ ಸಾರಿ ನೀವು ಬಂದು ಹೋಗೊದು ಮಾತ್ರ ಆಗುತ್ತಿದೆ.
ನಮಗೆ ನೀವು ನೀಡುವ ಪರಿಹಾರದ ಹಣ ಬೇಡ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕೊಡಿ. ನಮ್ಮ ಕೃಷಿ ಭೂಮಿ ಹಾನಿ ಆಗಿದೆ. ಮನೆಯೆಲ್ಲಾ ಮುಳುಗಡೆ ಆಗಿದೆ ನೀವೆಲ್ಲಾ ಒಂದೆರಡು ದಿನ ಇಲ್ಲಿ ಬಂದು ನಿಲ್ಲಿ, ಆಗ ನಿಮಗೆ ಸಮಸ್ಯೆ ಅರ್ಥ ಆಗುತ್ತೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

