ಮಂಗಳೂರು : ತನ್ನದಲ್ಲದ ತಪ್ಪಿಗೆ ತನ್ನಿಡೀ ಬದುಕನ್ನೇ ಮಸುಕಾಗಿಸಿಕೊಂಡ ನತದೃಷ್ಟ ಮಹಿಳೆಯೀಕೆ. ಮಂಗಳೂರು ಹೊರವಲಯದ ಮಂಜನಾಡಿ ಗ್ರಾಮದ ಮೊಂಟೆಪದವಿನ ಅಶ್ವಿನಿ ತನಗೆ ಇಳಿವಯಸ್ಸಿನಲ್ಲಿ ಆಸೆರೆಯಾಗಬೇಕಿದ್ದ ಇಬ್ಬರು ಮಕ್ಕಳು, ಸ್ವಂತ ಬಲದಲ್ಲಿ ನಿಲ್ಲಲು ಬೇಕಾದ ತನ್ನೆರಡು ಕಾಲುಗಳನ್ನೂ ಕಳಕೊಂಡಿದ್ದಾರೆ. ಆದರೆ ಈಕೆಗೆ ಬೆಳಕು ನೀಡಬೇಕಾಗಿದ್ದ ಸರ್ಕಾರ ನಡೆಸುವ ಅಧಿಕಾರಿಗಳು, ಜನಪ್ರತಿನಿಧಿಗಳು ನಿರ್ಲಕ್ಷ್ಯದ ನೋಟ ಹರಿಸಿದ್ದಾರೆ.

ಕಳೆದ ಮೇ 30ರಂದು ಸುರಿದ ಭಾರೀ ಮಳೆಯಿಂದಾಗಿ ಮಂಜನಾಡಿ ಬಳಿಯ ಮೊಂಟೆಪದವಿನಲ್ಲಿ ದುರಂತವೇ ನಡೆದುಹೋಗಿತ್ತು. ನಸುಕಿನ ಜಾವ ಮರಗಳ ಸಹಿತ ಗುಡ್ಡ ಕುಸಿದು ಬಿದ್ದು ಅಶ್ವಿನಿಯ ಮನೆಯೇ ನೆಲಸಮವಾಗಿತ್ತು. ಮನೆಯ ಅಡಿಯಲ್ಲಿ ಸಿಲುಕಿದ್ದ ಅಶ್ವಿನಿ ಅವರ ಇಬ್ಬರು ಸಣ್ಣ ಮಕ್ಕಳು ಮತ್ತು ಅತ್ತೆ ಸಾವು ಕಂಡಿದ್ದರೆ, ಮಾವ ಕಾಂತಪ್ಪ ಪೂಜಾರಿ ಒಂದು ಕಾಲು ಕಳಕೊಂಡು ಬದುಕುಳಿದಿದ್ದರು.

ತೀವ್ರ ಗಾಯಗೊಂಡಿದ್ದ ಅಶ್ವಿನಿ ಎರಡು ತಿಂಗಳ ಕಾಲ ಆಸ್ಪತ್ರೆಯಲ್ಲಿದ್ದು ಎರಡೂ ಕಾಲುಗಳನ್ನು ಕಳಕೊಂಡಿದ್ದರು. ಸ್ಥಳಕ್ಕೆ ಬಂದಿದ್ದ ಅಧಿಕಾರಿಗಳು, ಜನಪ್ರತಿನಿಧಿಗಳು ಸರ್ಕಾರದಿಂದ ಪರಿಹಾರ ಮತ್ತು ಮನೆ ಕಟ್ಟಿಸಿಕೊಡುವ ಭರವಸೆ ನೀಡಿದ್ದರೂ ಅದಿನ್ನೂ ಈಡೇರಿಲ್ಲ. ಆಸ್ಪತ್ರೆ ಬಿಲ್ 17 ಲಕ್ಷ ಆಗಿದ್ದು, ಸಂಘ- ಸಂಸ್ಥೆಗಳು ನೆರವಾಗಿದ್ದು ಬಿಟ್ಟರೆ ಸರ್ಕಾರ ನೀಡಿದ್ದು ಎರಡೂವರೆ ಲಕ್ಷ ಮಾತ್ರ.

ಮಳೆಗೆ ಗುಡ್ಡ ಕುಸಿದು ಬಿದ್ದಿರುವುದಕ್ಕೆ ಮಂಜನಾಡಿ ಪಂಚಾಯತ್ ವತಿಯಿಂದ ಗುಡ್ಡದ ಮೇಲ್ಭಾಗದಲ್ಲಿ ಮಾಡಿದ್ದ ಅವೈಜ್ಞಾನಿಕ ರಸ್ತೆ ಕಾಮಗಾರಿಯೇ ಕಾರಣ ಎಂಬ ಆರೋಪ ಕೇಳಿಬಂದಿತ್ತು. ಈ ಬಗ್ಗೆ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗೆ ಸಾಮಾಜಿಕ ಕಾರ್ಯಕರ್ತರು ಲಿಖಿತ ದೂರು ನೀಡಿದ್ದರಿಂದ ಉಳ್ಳಾಲ ತಾಪಂ ಕಾರ್ಯ ನಿರ್ವಹಣಾಧಿಕಾರಿ ಮತ್ತು ಜಿಪಂ ಕಾರ್ಯಪಾಲಕ ಇಂಜಿನಿಯರ್ ಅವರಿಗೆ ವರದಿ ನೀಡಲು ಸೂಚಿಸಲಾಗಿತ್ತು. ಆದರೆ ಇವರು ತಮ್ಮ ವರದಿಯನ್ನೇ ತಿರುಚಿದ್ದು ಸ್ಥಳೀಯ ಅಧಿಕಾರಿಗಳನ್ನು ಪಾರು ಮಾಡಿಸುವ ಯತ್ನ ಮಾಡಿದ್ದಾರೆ.

ಗುಡ್ಡ ಕುಸಿದಿರುವುದಕ್ಕೆ ರಸ್ತೆ ಕಾಮಗಾರಿ ಕಾರಣವಲ್ಲ. ಅಲ್ಲಿ ಜೆಸಿಬಿ ಬಳಸಿ ಗುಡ್ಡ ಅಗೆದಿರುವುದಿಲ್ಲ, ಬದಲಾಗಿ, ಕೇವಲ ಕಾರ್ಮಿಕರನ್ನು ಬಳಸಿ ಕಾಮಗಾರಿ ಮಾಡಲಾಗಿತ್ತು. ಅಲ್ಲದೆ, ಈ ರಸ್ತೆಯನ್ನು 2009ರಲ್ಲಿ ಮಾಡಲಾಗಿದ್ದು 2021ರ ಬಳಿಕ ಕಾಂಕ್ರೀಟ್ ಕಾಮಗಾರಿಯಷ್ಟೇ ಮಾಡಲಾಗಿತ್ತು. ಈ ರಸ್ತೆಗೂ, ಕುಸಿದು ಬಿದ್ದಿರುವ ಮನೆಗೂ 30 ಮೀಟರ್ ಅಂತರವಿದ್ದು, ರಸ್ತೆಗೆ ಯಾವುದೇ ತೊಂದರೆ ಆಗಿಲ್ಲ. ರಸ್ತೆ ಕಾರಣಕ್ಕೆ ಗುಡ್ಡ ಅಗೆದಿದ್ದರಿಂದ ಮನೆಯ ಮೇಲೆ ಗುಡ್ಡ ಕುಸಿದು ಬಿದ್ದಿದೆ ಎನ್ನುವುದು ಕಂಡುಬರುವುದಿಲ್ಲ ಎಂದು ಜಿಪಂ ಇಂಜಿನಿಯರ್ ಮತ್ತು ಉಳ್ಳಾಲ ತಾಪಂ ಇಓ ವರದಿ ತಯಾರಿಸಿ, ಸರ್ಕಾರಕ್ಕೆ ಸಲ್ಲಿಸಿದ್ದಾರೆ.

ಆದರೆ, ಸಾಮಾಜಿಕ ಕಾರ್ಯಕರ್ತರು ಮತ್ತು ಸ್ಥಳೀಯರು ಅಧಿಕಾರಿಗಳ ವರದಿಯನ್ನು ನಿರಾಕರಿಸಿದ್ದು ಮೇಲಿನ ಅಧಿಕಾರಿಗಳಿಗೆ ಆಕ್ಷೇಪ ಸಲ್ಲಿಸಿದ್ದರು. ಇದರಂತೆ, ಅಪರ ಜಿಲ್ಲಾಧಿಕಾರಿಯವರು ಖುದ್ದು ಅಶ್ವಿನಿಯವರೇ ಬಂದು ಆರೋಪ ಸಾಬೀತುಪಡಿಸುವ ದಾಖಲೆಗಳನ್ನು ಸಲ್ಲಿಸುವಂತೆ ಸೂಚನೆ ನೀಡಿದ್ದರು. ಇದು ಸಾರ್ವಜನಿಕರ ಆಕ್ರೋಶಕ್ಕೂ ಕಾರಣವಾಗಿದ್ದು ಸ್ಥಳೀಯರು ಮತ್ತು ಸಂಬಂಧಿಕರು ಸೇರಿ ಎರಡೂ ಕಾಲು ಕಳಕೊಂಡ ಅಶ್ವಿನಿಯವರನ್ನು ವೀಲ್ ಚೇರ್ ನಲ್ಲಿ ಹಾಕಿ, ಆಂಬುಲೆನ್ಸ್ ನಲ್ಲಿ ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಗೆ ಕರೆತಂದಿದ್ದಾರೆ. ಅಶ್ವಿನಿಯವರನ್ನು ಭೇಟಿಯಾದ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ ಅವರನ್ನು ಜೊತೆಗಿದ್ದವರು ವರದಿಯನ್ನು ತಿರುಚಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರಲ್ಲದೆ, ಅವರಿಗೆ ತಹಸೀಲ್ದಾರ್ ನೀಡಿದ ಭರವಸೆಯಂತೆ ಮನೆಯನ್ನು ಕಟ್ಟಿಸಿಕೊಡಬೇಕು.

ಆಕೆಯ ಆಸ್ಪತ್ರೆ ವೆಚ್ಚ 17 ಲಕ್ಷವನ್ನು ಜಿಲ್ಲಾಡಳಿತದಿಂದ ನೀಡಬೇಕು. ಅಲ್ಲದೆ, ದುರಂತದಲ್ಲಿ ಎಲ್ಲವನ್ನೂ ಕಳಕೊಂಡ ಮಹಿಳೆಯ ಜೀವನಕ್ಕಾಗಿ ಸೂಕ್ತ ಪರಿಹಾರ ಮೊತ್ತ ನೀಡಬೇಕೆಂದು ಒತ್ತಾಯಿಸಿದ್ದಾರೆ. ಇದೇ ವೇಳೆ, ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ, ಎರಡೂ ಕಾಲುಗಳನ್ನು ಕಳಕೊಂಡ ಅಶ್ವಿನಿಯವರು ಮಂಗಳೂರಿನ ವರೆಗೆ ಅಧಿಕಾರಿಗಳ ಭೇಟಿಗಾಗಿ ಬರುವ ಅವಶ್ಯಕತೆಯಿಲ್ಲ, ಅವರ ನೆರವಿಗಾಗಿ ಅಧಿಕಾರಿಗಳನ್ನೇ ಅವರಿದ್ದಲ್ಲಿಗೆ ಕಳಿಸುತ್ತೇನೆ, ಸರ್ಕಾರದ ಪರಿಹಾರ ಮತ್ತು ಮನೆ ಕಟ್ಟಿಸಿಕೊಡುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ.