ಮಂಗಳೂರು : ಕರಾವಳಿಯ ಜನರ ನಿದ್ದೆಗೆಡಿಸಿದ್ದ ಈ ಹಾರರ್ ಸಿನೆಮಾ ಮಾದರಿಯ ಘಟನೆಯ ಹಿಂದೆ ಇದ್ದದ್ದು ಯಾವುದೇ ಪ್ರೇತಾತ್ಮವಲ್ಲ, ಬದಲಾಗಿ ಒಬ್ಬ ‘ಅತೀ ಬುದ್ದಿವಂತ’ ಗೆಳೆಯ ಹೂಡಿದ ಸ್ಕೆಚ್ ಆಗಿದೆ.
ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದ್ದ ಒಂದು ತುಳು ಆಡಿಯೋ ಕ್ಲಿಪ್ ಇಡೀ ಮಂಗಳೂರನ್ನೇ ಬೆಚ್ಚಿಬೀಳಿಸಿತ್ತು. “ರಾತ್ರಿ 12 ಗಂಟೆಗೆ ಪಾಂಡೇಶ್ವರದ ಫಾರಂಮಾಲ್ನಿಂದ ಬರುತ್ತಿದ್ದ ಯುವಕನಿಗೆ ಮಂಜಲ್ಪಾದೆ ರಸ್ತೆಯಲ್ಲಿ ಬಿಳಿ ಬಟ್ಟೆ ಧರಿಸಿದ, ಉದ್ದನೆಯ ಬೆರಳುಗಳ ವಿಚಿತ್ರ ಆಕೃತಿ ಕಾಣಿಸಿಕೊಂಡಿದೆ. ಭಯದಿಂದ ಆತ ಸ್ಕೂಟರ್ನಿಂದ ಬಿದ್ದಿದ್ದಾನೆ, ಆತನ ಆತನ ಬೆನ್ನಿನ ಮೇಲೆ ದೆವ್ವ ಹೊಡೆದ ಗುರುತುಗಳಿವೆ” ಎಂಬ ಸುದ್ದಿ ಕಾಳಿಚ್ಚಿನಂತೆ ಹರಡಿತ್ತು. ಜೊತೆಗೆ ವೈರಲ್ ಆದ ಅಸ್ಪಷ್ಟ ಫೋಟೋಗಳು ಜನರ ಎದೆಯಲ್ಲಿ ನಡುಕ ಹುಟ್ಟಿಸಿದ್ದವು.
ಈ ನಿಗೂಢತೆಯ ಬೆನ್ನತ್ತಿದಾಗ ತಿಳಿದುಬಂದ ಸತ್ಯ ಯಾವುದೇ ಸಿನೆಮಾ ಕಥೆಗಿಂತ ಕಮ್ಮಿಯಿಲ್ಲ. ಈ ಇಡೀ ರಾದ್ಧಾಂತದ ಸೂತ್ರಧಾರ ಒಬ್ಬ ಯುವಕ. ಆತನ ಗೆಳೆಯನಿಗೆ ಒಂದು ಕೆಟ್ಟ ಅಭ್ಯಾಸವಿತ್ತು-ಅದೆಷ್ಟೇ ಬುದ್ದಿ ಹೇಳಿದರೂ ಪ್ರತಿದಿನ ತಡರಾತ್ರಿ ಮನೆಗೆ ಬರುವುದು.
ತನ್ನ ಗೆಳೆಯನ ಈ ಅಭ್ಯಾನ ಬಿಡಿಸಲು ಆ ‘ಕಿಲಾಡಿ’ ಗೆಳೆಯ ಒಂದು ಪ್ಲಾನ್ ಮಾಡಿದ. ತನ್ನ ಫೋನಿನಲ್ಲಿ ಗಂಭೀರವಾಗಿ ಧ್ವನಿ ಬದಲಿಸಿ, “ಲೇಯ್, ಆ ಕಡೆ ಬರಬೇಡ. ಬಿಳಿ ಆಕೃತಿ ಓಡಾಡ್ತಿದೆ, ಯಾರಿಗೋ ಹೊಡೆತ ಬಿದ್ದಿದೆ” ಎಂದು ತುಳುವಿನಲ್ಲಿ ರೆಕಾರ್ಡ್ ಮಾಡಿ ಗೆಳೆಯನಿಗೆ ಕಳುಹಿಸಿದ. ಗೆಳೆಯನನ್ನು ಹೆದರಿಸಿ ಬೇಗ ಮನೆಗೆ ಬರುವಂತೆ ಮಾಡುವುದು ಆತನ ಉದ್ದೇಶವಾಗಿತ್ತು.

