ಮಂಗಳೂರು: ಲವ್ ಜಿಹಾದ್‌ ಪ್ರಕರಣಗಳಿಂದ ಹಿಂದೂ ಯುವತಿಯರು, ಮಹಿಳೆಯರನ್ನು ರಕ್ಷಿಸಲು ಶ್ರೀರಾಮ ಸೇನೆ ವತಿಯಿಂದ ಸಹಾಯವಾಣಿ ಆರಂಭಿಸಲಾಗಿದೆ. ರಾಜ್ಯಾದ್ಯಂತ ಆರು ಜಿಲ್ಲೆಗಳಲ್ಲಿ ಏಕಕಾಲದಲ್ಲಿ ಈ ಸಹಾಯವಾಣಿ ಉದ್ಘಾಟನೆಯಾಗಿದೆ. ಇಂದಿನಿಂದಲೇ ಕಾರ್ಯಾಚರಣೆ ಆರಂಭಿಸಲಿದೆ.

ಈ ಕುರಿತು ಮಂಗಳೂರಿನಲ್ಲಿ ಮಾತನಾಡಿದ ಶ್ರೀರಾಮ ಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಆನಂದ ಶೆಟ್ಟಿ ಅಡ್ಯಾರ್, ಲವ್ ಜಿಹಾದ್ ಗೆ ಒಳಪಡುವ ಯುವತಿಯರು, ಮನೆಯವರು ಹಿತೈಷಿಗಳು ಈ ಸಹಾಯವಾಣಿಗೆ ಕರೆ ಮಾಡಿದರೆ ಶ್ರೀರಾಮ ಸೇನೆಯ ತಂಡ ಕಾನೂನಿನ ಮಿತಿಯಲ್ಲಿ ಸೂಕ್ತ ಕಾರ್ಯಾಚರಣೆ ನಡೆಸಲಿದೆ. ಸಹಾಯವಾಣಿ ಮೊಬೈಲ್ ಸಂಖ್ಯೆ 9090443444 ಇದಾಗಿದ್ದು, ಸಹಾಯವಾಣಿ ತಂಡದಲ್ಲಿ ಮಾಜಿ ಪೊಲೀಸ್ ಅಧಿಕಾರಿಗಳು ವಕೀಲರ ತಂಡ ಇರಲಿದೆ.

ಘಟನೆ ಯಾವ ಹಂತದಲ್ಲಿದೆ ಎಂಬುದನ್ನು ನೋಡಿಕೊಂಡು ಸೂಕ್ತ ಕ್ರಮವನ್ನು ಶ್ರೀರಾಮ ಸೇನೆ ಕೈಗೊಂಡು ಯುವತಿಯರನ್ನು ಮಾತೃ ಧರ್ಮದಲ್ಲಿ ಉಳಿಸಲು ಪ್ರಯತ್ನಿಸಲಾಗುವುದು ಎಂದರು. ಯಾವುದೇ ಕಾರಣಕ್ಕೂ ಕಾನೂನನ್ನು ಮೀರಿ ಹೋಗಲ್ಲ ಹಾಗೂ ಅನೈತಿಕ ಪೊಲೀಸ್ ಗಿರಿ ಮಾಡಲ್ಲ ಎಂದು ಆನಂದ ಶೆಟ್ಟಿ ತಿಳಿಸಿದರು.