ಮಂಗಳೂರು : ಧಾರ್ಮಿಕ-ಲೌಖಿಕ ಸಮನ್ವಯ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆಗಳೊಂದಿಗೆ ಮುನ್ನುಗ್ಗುತ್ತಿರುವ ಪುತ್ತೂರು ತಾಲೂಕಿನ ಮಾಡನ್ನೂರು ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿಯ ದಶಮಾನೋತ್ಸವದ ಅಂಗವಾಗಿ ಪ್ರದಾನಿಸಲಿರುವ “ಶುಹದಾ’’ ಎಕ್ಸಲೆನ್ಸ್ ಅವಾರ್ಡ್ ಗೆ ಕರ್ನಾಟಕದ ಜನಪ್ರಿಯ ವಿಧಾನಸಭಾಧ್ಯಕ್ಷರಾದ ಯು.ಟಿ. ಖಾದರ್ ಫರೀದ್ ಅವರು ಆಯ್ಕೆಯಾಗಿದ್ದಾರೆ.
ಮುಸ್ಲಿಂ ಸಮುದಾಯದ ಸಬಲೀಕರಣಕ್ಕಾಗಿ ಸಾಮಾಜಿಕ ಮತ್ತು ಶೈಕ್ಷಣಿಕ ಸೇವೆ, ಅಲ್ಪಸಂಖ್ಯಾತ ಸಮುದಾಯದ ಪ್ರತಿನಿಧಿಯಾಗಿ ಸರ್ವರಿಗೂ ಸರ್ವಸಮ್ಮತ ವ್ಯಕ್ತಿ, ಇತರ ಸಮುದಾಯದವರೂ ಗೌರವಿಸುವ ಹಾಗೂ ಒಪ್ಪಿಕೊಳ್ಳುವ ವ್ಯಕ್ತಿತ್ವ, ಮುಸ್ಲಿಂ ಸಮುದಾಯದೊಳಗೆ ಪ್ರಭಾವ ಬೀರಬಲ್ಲ ಹಾಗೂ ಇತರರಿಗೆ ಮಾದರೀಯೋಗ್ಯ, ಧಾರ್ಮಿಕ ಪ್ರಜ್ಞೆ – ಸೌಹಾರ್ದ ಮನೋಭಾವ, ರಾಷ್ಟ್ರೀಯ ಪ್ರಜ್ಞೆ, ಸಮಾಜ ಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಆಗಸ್ಟ್ 19 ರಂದು ಸೋಮವಾರ ಮಧ್ಯಾಹ್ನ 2 ಗಂಟೆಗೆ ಮಾಡನ್ನೂರಿನಲ್ಲಿ ನಡೆಯುವ ನೂರುಲ್ ಹುದಾ ಸಂಸ್ಥೆಯ ದಶಮಾನೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಧಾರ್ಮಿಕ ವಿದ್ವಾಂಸರ ಹಾಗೂ ಸಚಿವರುಗಳ ಸಮ್ಮುಖದಲ್ಲಿ ಸನ್ಮಾನ್ಯ ಯು.ಟಿ. ಖಾದರ್ ಅವರಿಗೆ “ಶುಹದಾ” ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು.
ಪ್ರಸ್ತುತ ಕಾರ್ಯಕ್ರಮದಲ್ಲಿ ಸಮಸ್ತ ಉಲಮಾ ಒಕ್ಕೂಟದ ಅಗ್ರಗಣ್ಯ ಉಲಮಾಗಳಾದ ಸೈಯ್ಯದ್ ಸಾದಿಖಲಿ ಶಿಹಾಬ್ ತಂಙಳ್, ಶೈಖುನಾ ಆಲಿಕುಟ್ಟಿ ಉಸ್ತಾದ್, ಯು.ಎಂ. ಅಬ್ದುಲ್ ರಹ್ಮಾನ್ ಮುಸ್ಲಿಯಾರ್, ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್, ಕೆ.ಎಸ್. ಅಲಿ ತಂಙಳ್ ಕುಂಬೋಳ್ ಸಹಿತ ಕರ್ನಾಟಕ ಸರಕಾರದ ಘನವೆತ್ತ ಸಚಿವರುಗಳಾದ ಬಿ.ಝಡ್. ಝಮೀರ್ ಅಹ್ಮದ್ ಖಾನ್, ರಹೀಂ ಖಾನ್, ದಿನೇಶ್ ಗುಂಡೂರಾವ್, ಅಶೋಕ್ ಕುಮಾರ್ ರೈ ಸೇರಿದಂತೆ ಸಂಸದರು, ಶಾಸಕರು ಹಾಗೂ ಹಲವಾರು ಉಲಮಾ, ಉಮರಾ, ಸಾದಾತು ನೇತಾರರು ಪಾಲ್ಗೊಳ್ಳಲಿದ್ದಾರೆ.

