ಬೆಳ್ತಂಗಡಿ: ‘ವಸಂತ ಬಂಗೇರ ಅವರು ಸದಾ ಬಡವರ ಪರ, ಸತ್ಯದ ಪರ ಇದ್ದರು. ಬಡವರ ಕೆಲಸ ಮಾಡಿಕೊಡಲು ಯಾವ ಹಂತಕ್ಕೆ ಬೇಕಾದರೂ ಹೋಗುತ್ತಿದ್ದರು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಅಗಲಿದ ಮಾಜಿ ಶಾಸಕ ದಿ.‌ವಸಂತ ಬಂಗೇರಗೆ ನುಡಿನಮನ ಸಲ್ಲಿಸಲು ತಾಲ್ಲೂಕಿನ ಕುವೆಟ್ಟುವಿನಲ್ಲಿ ಮಂಗಳವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇನ್ನು ವಸಂತ ಬಂಗೇರ ಅವರು ಮರೆಯಾದರೂ ಅವರು ತಮ್ಮ ಕೆಲಸ ಕಾರ್ಯಗಳ ಮೂಲಕ ಜನಮಾನಸದಲ್ಲಿದ್ದಾರೆ. ಸದಾಕಾಲ ಬೆಳ್ತಂಗಡಿ ಕ್ಷೇತ್ರದ ಅಭಿವೃದ್ಧಿ, ಜನರ ಹಿತದ ಬಗ್ಗೆಯೇ ಯೋಚಿಸುತ್ತಿದ್ದ ಬಂಗೇರ ಅವರದು ಅಪರೂಪದ ವ್ಯಕ್ತಿತ್ವ.

ನಿಸ್ವಾರ್ಥ ನಾಯಕ ಬಂಗೇರ ಅವರ ನೆನಪಿಗಾಗಿ ಬೆಳ್ತಂಗಡಿ ಬಸ್ಟಾಂಡ್ ಗೆ ಅವರ ಹೆಸರಿಡಲು ಸರ್ಕಾರ ಸಿದ್ಧವಿದೆ. ಜೊತೆಗೆ ಸರ್ಕಲ್‌ನಲ್ಲಿ ಅವರ ಪ್ರತಿಮೆ ಸ್ಥಾಪಿಸಬೇಕು ಎನ್ನುವ ಬೇಡಿಕೆಗೂ ನಾನು ಮುಕ್ತವಾಗಿದ್ದೇನೆ. ಇದು ಬಂಗೇರ ಅವರ ಜೀವನ ಸಾಧನೆಯನ್ನು ಗೌರವಿಸಲು ನನಗೆ ದೊರೆತ ಅವಕಾಶ ಎಂದು ಭಾವಿಸಿದ್ದೇನೆ.

‘ಕ್ಷೇತ್ರದ ಅಭಿವೃದ್ಧಿ ವಿಚಾರಗಳಲದಲಿ ಬಂಗೇರ ಅವರಿಗೆ ತಾನು ಯಾರ ಜೊತೆ ಮಾತನಾಡುತ್ತಿದ್ದೇನೆ ಎನ್ನುವುದು ಮುಖ್ಯ ಆಗುತ್ತಿರಲಿಲ್ಲ. ಬಡವರ ಸಮಸ್ಯೆ ಪರಿಹರಿಸುವುದೇ ಅವರಿಗೆ ಮುಖ್ಯವಾಗಿತ್ತು.ಮಾನವಿಯತೆ ಇದ್ದ ಮನುಷ್ಯ. ಬದುಕನ್ನು ಸಾರ್ಥಕ ಮಾಡಿಕೊಂಡ ವ್ಯಕ್ತಿ’ ಎಂದು ಕೊಂಡಾಡಿದರು.

‘ನನಗೆ ಬಹಳ ಹತ್ತಿರವಾಗಿದ್ದ ವ್ಯಕ್ತಿ ಆತ.‌ ನನ್ನೊಂದಿಗೆ ಎಷ್ಟೇ ಸ್ನೇಹ ಇದ್ದರೂ, ನಾನು ಮುಖ್ಯಮಂತ್ರಿ ಆಗಿದ್ದಾಗ ವೈಯಕ್ತಿಕ ಕೆಲಸಕ್ಕೆ ಯಾವತ್ತೂ ಬಂದವರಲ್ಲ.‌ ಕ್ಷೇತ್ರದ ಅಭಿವೃದ್ಧಿ ಹಾಗೂ ಬಡವರ ಕೆಲಕ್ಕೆ ಮಾತ್ರ ಬರುತ್ತಿದ್ದರು’ ಎಂದರು.

‘ಈಗ ಕೆಲವರು ಮೊದಲ ಸಲ‌ ಗೆದ್ದಾಗಲೇ ಮಂತ್ರಿ ಆಗಕು ಲಾಬಿ ಶುರು ಮಾಡುತ್ತಾರೆ. ಆದರೆ ಬಂಗೇರ ಬಿಜೆಪಿ, ಜನತಾದಳವೂ ಸೇರಿದಂತೆ ಮೂರು ಪಕ್ಷಗಳಲ್ಲಿ ಐದು ಸಲ ಶಾಸಕರಾದರೂ ಯಾವತ್ತೂ ಮಂತ್ರಿ ಆಗಬೇಕು ಎಂದು ಲಾಬಿ ಮಾಡಿದವರಲ್ಲ. 2023ರ ಚುನಾವಣೆಯಲ್ಲಿ ರಂಜನ್ ಗೌಡ ಅವರಿಗೆ ಟಿಕೆಟ್ ಕೊಡುವಂತೆ ಕೇಳಿದ್ದರು. ಬಂಗೇರ ಅವರನ್ನೇ ಚುನಾವಣೆಗೆ ನಿಲ್ಲುವಂತೆ ಕೋರಿದ್ದೆ. ಅದಕ್ಕೆ ಒಪ್ಪಲೇ ಇಲ್ಲ. ಯಾವ ಕಾರಣಕ್ಕೂ ಚುನಾವಣೆಗೆ ನಿಲ್ಲುವುದಿಲ್ಲ ಎಂದು ತೀರ್ಮಾನ ಮಾಡಿದ್ದೇನೆ ಎಂದಿದ್ದರು. ಈ ಸಲ ಚುನಾವಣೆಗೆ ನಿಂತು ಗೆದ್ದಿದ್ಧರೆ ಅವರು ನೂರಕ್ಕೆ ನೂರರಷ್ಟು ಮಂತ್ರಿ ಆಗುತ್ತಿದ್ದರು’ ಎಂದರು

‘ವಸಂತ ಬಂಗೇರ ಅವರು ನಿಧನರಾದ ದಿನ ನಾನು ಕರ್ನಾಟಕದಲ್ಲಿ ಇರಲಿಲ್ಲ. ಹಾಗಾಗಿ ಅವತ್ತು ಅಂತ್ಯಕ್ರಿಯೆಯ ಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ ಎಂದರು. ಬಂಗೇರ ಅವರ ಆತ್ಮಕ್ಕೆ ಶಾಂತಿ ಕೋರಿದ ಮುಖ್ಯಮಂತ್ರಿ ಅವರ ಕುಟುಂಬ ವರ್ಗಕ್ಕೆ ಸಾಂತ್ವನ ಹೇಳಿದರು.