ಬಂಟ್ವಾಳ: ತಾಲೂಕಿನ ಸಜೀಪಮುನ್ನೂರಿನ ಗಾಂಧಿನಗರ ಕ್ರಾಸ್ ನಲ್ಲಿ ನಡೆದ ಸ್ಕೂಟರ್ ಅಪಘಾತದ ಸಂದರ್ಭದಲ್ಲಿ ದ್ವಿಚಕ್ರವಾಹನವೊಂದರಲ್ಲಿ ಅಕ್ರಮ ಗೋಮಾಂಸ ಸಾಗಾಟ ಪತ್ತೆಯಾಗಿದ್ದು, ಸವಾರನ ವಿರುದ್ಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಜೀಪಮುನ್ನೂರು ದಾಸರಗುಡ್ಡೆ ನಿವಾಸಿ ಸ್ಕೂಟರ್ ಸವಾರೆ ಅನುರಾಧ ಕೆ. ಅವರು ಡಿ. ೨೪ರಂದು ಬೆಳಗ್ಗೆ ಕೆಲಸಕ್ಕೆ ಹೋಗುತ್ತಿರುವ ಸಂದರ್ಭದಲ್ಲಿ ಗಾಂಧಿನಗರ ಕ್ರಾಸ್ ಬಳಿ ಸಜೀಪ ಕಡೆಯಿಂದ ಆರೋಪಿ ಸವಾರ ಸ್ಕೂಟರನ್ನು ಅತಿ ವೇಗ, ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಅನುರಾಧ ಅವರು ಚಲಾಯಿಸುತ್ತಿದ್ದ ಸ್ಕೂಟರಿಗೆ ಢಿಕ್ಕಿ ಹೊಡೆದಿದ್ದಾನೆ.
ಈ ವೇಳೆ ಎರಡೂ ಸ್ಕೂಟರಿನ ಸವಾರರು ಕೂಡ ರಸ್ತೆಗೆ ಬಿದ್ದು ಗಾಯವಾಗಿದ್ದು, ಆರೋಪಿಯ ಸ್ಕೂಟರಿನಿಂದ ಪ್ಲಾಸ್ಟಿಕ್ ನಲ್ಲಿ ಕಟ್ಟಿದ ಮಾಂಸದ ಕಟ್ಟುಗಳು ಕೂಡ ರಸ್ತೆಗೆ ಬಿದ್ದಿದೆ. ತಕ್ಷಣವೇ ಆರೋಪಿ ಪರಾರಿಯಾಗಿದ್ದು, ಆರೋಪಿಯ ಹೆಸರು ತಿಳಿದುಬಂದಿಲ್ಲ.
ಆರೋಪಿ ಎಲ್ಲಿಯೋ ದನವನ್ನು ಹತ್ಯೆ ಮಾಡಿ ಮಾಂಸವನ್ನು ಮಾರಾಟ ಮಾಡುವುದಕ್ಕಾಗಿ ಸಜೀಪ ಕಡೆಯಿಂದ ಮೆಲ್ಕಾರ್ ಕಡೆಗೆ ಅಜಾಗರೂಕತೆಯಿಂದ ಚಲಾಯಿಸುತ್ತಿದ್ದನು ಎಂದು ದೂರಿನಲ್ಲಿ ವಿವರಿಸಲಾಗಿದೆ. ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

