ಬಂಟ್ವಾಳ: ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮ ರಕ್ಷಣಾ ವೇದಿಕೆ ಬಂಟ್ವಾಳ ತಾಲೂಕು ವತಿಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಧರ್ಮಾಧಿಕಾರಿಗಳ ಮೇಲಿನ ಅವಹೇಳನ ಖಂಡನೆ ಹಾಗೂ ಜನಾಗ್ರಹ ಸಭೆಯು  ಕಣಿಯೂರು ಕ್ಷೇತ್ರದ ಶ್ರೀ ಮಹಾಬಲ ಸ್ವಾಮೀಜಿ ಉಪಸ್ಥಿತಿಯಲ್ಲಿ ಬುಧವಾರ ಬಿಸಿರೋಡಿನ ಸ್ಪರ್ಶಾ ಕಲಾ ಮಂದಿರದಲ್ಲಿ ನಡೆಯಿತು.

ಜನಾಗ್ರಹ ಸಭೆಯಲ್ಲಿ ಮಾಜಿ ಶಾಸಕ ಎ.ರುಕ್ಮಯ ಪೂಜಾರಿ ಮಾತನಾಡಿ, ಸೌಜನ್ಯ ಸಾವಿಗೆ ನ್ಯಾಯ ಸಿಗಬೇಕು,ತಪ್ಪಿತಸ್ಥರಿಗೆ ಕಾನೂನಡಿಯಲ್ಲಿ ಶಿಕ್ಷೆಯಾಗಬೇಕು. ಆದರೆ ಸೌಜನ್ಯನ ಹೆಸರಿನಲ್ಲಿ ಧರ್ಮಸ್ಥಳ ಕ್ಷೇತ್ರದ ವಿರುಧ್ದ ನಡೆಯುವ ಷಡ್ಯಂತ್ರದ ಆರೋಪಿಗಳಿಗೆ ಕೂಡ ಶಿಕ್ಷೆಯಾಗಬೇಕು, ಧರ್ಮಸ್ಥಳ ಕ್ಷೇತ್ರದ ಯೋಜನೆಗಳಿಂದ ಇಂದು ರಾಜ್ಯದಲ್ಲಿ ಸ್ವಾವಲಂಬಿ ಬದುಕಿಗೆ ಪೂರಕವಾದ ಅವಕಾಶಗಳನ್ನು ‌ನೀಡಿದೆ ಎಂದರು.

ಮಾಜಿ ಸಚಿವ ಬಿ. ನಾಗರಾಜ ಶೆಟ್ಟಿ ಮಾತನಾಡಿ  ಎಸ್.ಐ.ಟಿ.ದಾರಿ ತಪ್ಪದೆ ಕ್ಷೇತ್ರಕ್ಕೆ ಕಳಂಕ ಬರದ ರೀತಿಯಲ್ಲಿ ತನಿಖೆ ನಡೆಸಲಿ ಎಂದು ಅವರು ಹೇಳಿದರು.ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರಿಗೆ ಮಾನಸಿಕವಾಗಿ ನೆಮ್ಮದಿ ನೀಡಿ ಸನಾತನ ಧರ್ಮದ ‌ಅಭಿವೃದ್ದಿಗೆ ಸಹಕಾರ ನೀಡುವ ಶಕ್ತಿ ನೀಡಲಿ ಎಂದು ಹೇಳಿದರು.

ಸರಪಾಡಿ ಅಶೋಕ್ ಶೆಟ್ಟಿ ಮಾತನಾಡಿ, ಹಿಂದೂ ಧರ್ಮ ಎಚ್ಚೆತ್ತುಕೊಳ್ಳದಿದ್ದರೆ ಪ್ರತಿ ದೇವಸ್ಥಾನದ ಮೇಲೆ ನಿರಂತರವಾಗಿ ದಾಳಿ ನಡೆಯುತ್ತದೆ ಎಂದರು. ಪ್ರಮುಖರಾದ ಎಂ.ತುಂಗಪ್ಪ ಬಂಗೇರ, ಹರಿಕೃಷ್ಣ ಬಂಟ್ವಾಳ, ಸಂತೋಷ್ ಕುಮಾರ ಶೆಟ್ಟಿ ಬೋಳಿಯಾರ್,  ಸುದರ್ಶನ ಜೈನ್, ಪದ್ಮಶೇಖರ್ ಜೈನ್, ಪ್ರಕಾಶ್ ಕಾರಂತ, ದಿನೇಶ್ ಅಮ್ಟೂರು, ಸುಲೋಚನ ಜಿ.ಕೆ.ಭಟ್ , ಸದಾನಂದ ನಾವೂರು, ಪ್ರಭಾಕರ ಪ್ರಭು , ಕೆ.ಕೆ.ಪೂಂಜಾ ಸಹಿತ ಹಲವು ಗಣ್ಯರು ಉಪಸ್ಥಿತರಿದ್ದರು.

ಸಭೆಯ ಬಳಿಕ  ಬಿಸಿರೋಡಿನ ರಕ್ತೇಶ್ವರಿ ದೇವಿ ದೇವಸ್ಥಾನದ ಬಳಿ ಸೇರಿದ್ದ ಜನಸ್ತೋಮವನ್ಬು ಉದ್ದೇಶಿಸಿ  ಉಜಿರೆ ಅಶೋಕ್ ‌ಭಟ್ ಮಾತನಾಡಿದರು. ಅ ಬಳಿಕ ತಹಶಿಲ್ದಾರ್ ಕಚೇರಿಗೆ ಬೇಟಿ ನೀಡಿ ಮನವಿ ಸಲ್ಲಿಸಲಾಯಿತು.