ಮಂಗಳೂರು : ಮನೆಯೊಂದರಲ್ಲಿ ಅಕ್ರಮ ಮದ್ಯ ತಯಾರಿ ನಡೆಸುತ್ತಿರುವ ಮಾಹಿತಿ ಮೇರೆಗೆ ಎಸಿಪಿ ವಿಜಯಕ್ರಾಂತಿ ನೇತೃತ್ವದಲ್ಲಿ ಕೊಣಾಜೆ ಪೊಲೀಸರು ಪಜೀರು ಗ್ರಾಮದ ಕಂಬಳಪದವು ಎಂಬಲ್ಲಿಗೆ ದಾಳಿ ನಡೆಸಿದ್ದು ಒಂದು ಲಕ್ಷ ಮೌಲ್ಯದ ಮದ್ಯವನ್ನು ವಶಕ್ಕೆ ಪಡೆದಿದ್ದಾರೆ.

ಆ.31ರ ಮಧ್ಯಾಹ್ನ 12 ಗಂಟೆಗೆ ಉಳ್ಳಾಲ ತಾಲೂಕು ಪಜೀರು ಗ್ರಾಮದ ಕಂಬಳಪದವು ಶ್ರೀ ದುರ್ಗಾ ಕಾಳಿ ದೇವಸ್ಥಾನದ ರಸ್ತೆಯ ಮನೆಯೊಂದರಲ್ಲಿ ಆಕ್ರಮವಾಗಿ ಮದ್ಯ ತಯಾರಿಕೆ ನಡೆಸುತ್ತಿರುವುದಾಗಿ ಬಂದ ಮಾಹಿತಿಯಂತೆ ಪಂಚರನ್ನು ಕರೆಸಿ ಪೊಲೀಸರು ದಾಳಿ ನಡೆಸಿದ್ದಾರೆ. ಪ್ರಣವ್ ಶೆಣೈ ಮತ್ತು ಅನೂಷ್ ಎಂಬವರು ಮನೆಯಲ್ಲಿದ್ದು ಅವರನ್ನು ಬಂಧಿಸಲಾಗಿದೆ. ಇವರು ವಿಸಿ ತೋಮಸ್ ಮತ್ತು ಮಣಿಕುಟ್ಟನ್ ಎಂಬವರೊಂದಿಗೆ ಸೇರಿಕೊಂಡು ಆಕ್ರಮ ಮದ್ಯ ತಯಾರಿಸುತ್ತಿದ್ದರು.

ಮನೆಯನ್ನು ಪರಿಶೀಲಿಸಿದ ಸಂದರ್ಭದಲ್ಲಿ ಸುಮಾರು 1,15,110 ರೂ. ಬೆಲೆಯ ಆಕ್ರಮ ಮದ್ಯ ತಯಾರಿಕೆಗೆ ಬಳಸುತ್ತಿದ್ದ ಮೂರು ಮೆಶಿನ್ ಗಳು, ಮಿಕ್ಸ‌ರ್ ಮೆಶಿನ್, ಅಕ್ರಮ ಮದ್ಯದ ಬಾಟ್ಲಿಗಳು, ಗೋವಾ ರಾಜ್ಯದಲ್ಲಿ ಮಾತ್ರ ಮಾರಾಟ ಮಾಡುವ ಪರವಾನಿಗೆ ಇರುವ 8 MANSION HOUSE ಹೆಸರಿನ ಮದ್ಯದ ಬಾಟ್ಲಿಗಳು, ಮದ್ಯ ತಯಾರಿಕೆಗೆ ಬೇಕಾದ ಇತರ ಸೊತ್ತುಗಳು ಪತ್ತೆಯಾಗಿವೆ. ಈ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಅ.ಕ್ರ. 104/2025 ಕಲಂ 123 ಜೊತೆಗೆ 3(5) BNS 2023, ಮತ್ತು ಕಲಂ 13, 32, 34 KE ACT ಕಾಯ್ದೆಯಂತೆ ಪ್ರಕರಣ ದಾಖಲು ಮಾಡಲಾಗಿದೆ.

ಆರೋಪಿಗಳಾದ ಪ್ರಣವ್ ಪಿ. ಶೆಣೈ(24) ಕಾಸರಗೋಡು ಬೀಚ್ ರೋಡ್ ನಿವಾಸಿಯಾಗಿದ್ದು ಅನೂಷ್ ಆರ್ (24) ಕಾಸರಗೋಡು ತಾಳಿಪಡ್ಡು ಅಡ್ಡದಬೈಲ್ ನಿವಾಸಿ. ತೋಮಸ್ ಮತ್ತು ಮಣಿಕುಟ್ಟನ್ ಅವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಮಂಗಳೂರು ದಕ್ಷಿಣ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ವಿಜಯಕ್ರಾಂತಿ ನೇತೃತ್ವದಲ್ಲಿ ಕೊಣಾಜೆ ಪೊಲೀಸ್ ಠಾಣೆಯ ಪ್ರಭಾರ ನಿರೀಕ್ಷಕರಾದ ವಿರೂಪಾಕ್ಷ, ಪಿಎಸ್‌ಐ ನಾಗರಾಜ್, ಸಿಬ್ಬಂದಿಗಳಾದ ಶೈಲೇಂದ್ರ, ರಮೇಶ್, ಬಸವನ ಗೌಡ ಮತ್ತು ರಮೇಶ್ ಕಾರ್ಯಚರಣೆಯಲ್ಲಿ ಭಾಗವಹಿಸಿರುತ್ತಾರೆ.