ಮಂಗಳೂರು: ನಿವೃತ್ತ ಡಿಜಿಪಿ ಓಂಪ್ರಕಾಶ್ ಕೊಲೆ ಪ್ರಕರಣದಲ್ಲಿ ಪಿಎಫ್ಐ ಕೈವಾಡ ಇರುವ ಸಾಧ್ಯತೆಯಿದೆ. ರಾಜ್ಯ ಪೊಲೀಸರು ಪತ್ನಿ ಮತ್ತು ಮಗಳನ್ನು ಹಿಂಸಿಸಿ ಅವರದೇ ತಲೆಗೆ ಕೊಲೆ ಕೃತ್ಯವನ್ನು ಕಟ್ಟಲು ನೋಡುತ್ತಿದ್ದಾರೆ. ಈ ಬಗ್ಗೆ ರಾಷ್ಟ್ರೀಯ ತನಿಖಾ ದಳದಿಂದ ತನಿಖೆಯಾದರೆ ಎಲ್ಲ ಸತ್ಯ ಹೊರಬರುತ್ತದೆ ಎಂದು ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ಹೇಳಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಓಂಪ್ರಕಾಶ್ ಅವರು ಪಿಎಫ್ಐ ಸಂಘಟನೆ ಜೊತೆಗೆ ನಂಟು ಹೊಂದಿದ್ದರು ಎಂಬುದಕ್ಕೆ ಸಾಕ್ಷಿಯಾಗಿ ಅವರ ಪತ್ನಿ ಪಲ್ಲವಿ ಮಾಡಿರುವ ವಾಟ್ಸಪ್ ಮೆಸೇಜ್ ಇದೆ. ಕಳೆದ ಬಾರಿ ಸಿದ್ದರಾಮಯ್ಯ ಸರಕಾರ ಇದ್ದಾಗ ಓಂಪ್ರಕಾಶ್ ಡಿಜಿಪಿಯಾಗಿದ್ದರು. ಪಿಎಫ್ಐ ಸಂಪರ್ಕದಲ್ಲಿದ್ದ ಓಂಪ್ರಕಾಶ್, ಆ ಸಂದರ್ಭದಲ್ಲಿ ಮತ್ತು ಆನಂತರ ಸಿದ್ದರಾಮಯ್ಯ ಸರಕಾರದಲ್ಲಿ ಎಷ್ಟು ಮಂದಿ ಪಿಎಫ್ಐ ಕೇಡರಿನವರಿಗೆ ಪೊಲೀಸ್ ಇಲಾಖೆಗೆ ಸೇರ್ಪಡೆ ಮಾಡಿದ್ದಾರೆ ಎಂಬ ಬಗ್ಗೆ ತನಿಖೆ ನಡೆಸಬೇಕು.
ಇದೀಗ ಅವರ ಕೊಲೆ ಪ್ರಕರಣದಲ್ಲಿ ಬೇರಾವುದೇ ಸಾಕ್ಷ್ಯ ಇಲ್ಲದಿದ್ದರೂ, ಪತ್ನಿಯ ಹೇಳಿಕೆಯನ್ನೇ ಆಧರಿಸಿ ಆಕೆಯನ್ನು ಆರೋಪಿ ಮಾಡಿದ್ದಾರೆ. ಆರೋಪಿಯ ಹೇಳಿಕೆ ಮಾತ್ರಕ್ಕೆ ನ್ಯಾಯಾಲಯಕ್ಕೆ ಸಾಕ್ಷ್ಯವಾಗುವುದಿಲ್ಲ. ಆಕೆಯ ಹೇಳಿಕೆ ಮತ್ತು ಮುಖ್ಯಮಂತ್ರಿ, ಗೃಹ ಸಚಿವರ ಸೂಚನೆಯಂತೆ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಕೊಲೆ ಕೃತ್ಯಕ್ಕೆ ಸಾಕ್ಷಿಯಾಗಿ ಸಿಸಿಟಿವಿಯಾಗಲೀ, ಇನ್ನಾವುದೇ ಪ್ರತ್ಯಕ್ಷ ಸಾಕ್ಷಿಯಾಗಲೀ ಇಲ್ಲ. ಇದರಿಂದ ಆಕೆಯೇ ಮಾಡಿದ್ದಾರೆ ಎಂಬುದಕ್ಕೆ ಏನು ಸಾಕ್ಷಿಯಿದೆ. ಪಿಎಫ್ಐನವರು ಬೆದರಿಸಿ ಆ ರೀತಿ ಹೇಳಿಕೆ ಕೊಟ್ಟಿದ್ದಾರೆಯೇ ಎಂದು ತನಿಖೆ ಮಾಡಬೇಕು ಎಂದು ಅನುಪಮಾ ಶೆಣೈ ಹೇಳಿದರು.
ಪಲ್ಲವಿ ತನ್ನ ಮಗಳ ಪಾತ್ರ ಇಲ್ಲವೆಂದು ಹೇಳುತ್ತಿದ್ದರೂ, ಪೊಲೀಸರು ಯಾಕೆ ಮಗಳನ್ನು ಫಿಕ್ಸ್ ಮಾಡುತ್ತಿದ್ದಾರೆ. ತನ್ನ ತಂದೆಯನ್ನು ಎರಡು ದಿನಗಳ ಹಿಂದೆ ಕರೆತಂದಿದ್ದಾಳೆ ಎಂಬ ಒಂದೇ ಕಾರಣಕ್ಕೆ ಕೊಲೆ ಮಾಡುವುದಕ್ಕಾಗಿಯೇ ಕರೆತಂದಿದ್ದಾಳೆಂದು ಒಪ್ಪುವಂತೆ ಹಿಂಸೆ ನೀಡುತ್ತಿದ್ದಾರೆ. ಇದರಿಂದಾಗಿ ಮಾನಸಿಕ ಹಿಂಸೆಗೀಡಾಗಿ ನಿಮ್ಹಾನ್ಸ್ ಆಸ್ಪತ್ರೆಗೆ ಸೇರಿದ್ದಾರೆ ಎಂದು ಹೇಳಿದ ಅನುಪಮಾ ಶೆಣೈ, ದೈತ್ಯನನ್ನು ಸಂಹರಿಸಿದ್ದೇನೆಂದು ಪತ್ನಿ ಪಲ್ಲವಿ ತನ್ನ ಬೇರೊಬ್ಬ ಪೊಲೀಸ್ ಅಧಿಕಾರಿಯ ಪತ್ನಿಗೆ ಹಾಕಿರುವ ಮೆಸೇಜನ್ನೇ ಆಧರಿಸಿ ಆರೋಪಿ ಮಾಡಿದ್ದಾರೆ.
ಇದರ ಹಿಂದೆ ಬೇರಾವುದೇ ಕಾರಣ ಇದ್ದಿರಬಹುದು, ಅವರಿಗಿದ್ದ ಒಡನಾಟ, ಇನ್ನಿತರ ಸಂಪರ್ಕದ ಬಗ್ಗೆ ಯಾಕೆ ತನಿಖೆ ನಡೆಸುತ್ತಿಲ್ಲ. ಓಂಪ್ರಕಾಶ್ ಪುತ್ರ ಕಾಂಗ್ರೆಸ್ ಸರಕಾರದ ಯಾವುದೇ ಬೆದರಿಕೆಗೆ ಬಗ್ಗದೆ ಸಮಗ್ರ ತನಿಖೆಗೆ ಒತ್ತಾಯಿಸಬೇಕು. ಎನ್ಐಎ ತನಿಖೆ ನಡೆಸಿದರೆ ಪಿಎಫ್ಐ ನಂಟು ಹೊರಬರುತ್ತದೆ. ಅದಕ್ಕೆ ಪೂರದ ದಾಖಲೆಗಳನ್ನು ಕೊಡಲಿದ್ದೇನೆ ಎಂದು ಹೇಳಿದರು.
ಈಗಾಗಲೇ ಸ್ಪೀಕರ್ ಯುಟಿ ಖಾದರ್ ಮತ್ತು ಹಾಲಿ ಡಿಜಿಪಿ ಅಲೋಕ್ ಮೋಹನ್ ಅವರಿಗೆ ಈ ಕುರಿತ ಸಾಕ್ಷ್ಯಗಳನ್ನು ಮತ್ತು ನನಗಿರುವ ಮಾಹಿತಿಗಳನ್ನು ಹಂಚಿಕೊಂಡಿದ್ದೇನೆ. ಡಿಜಿಪಿ ಕೊಲೆ ಪ್ರಕರಣ ಸಂಬಂಧಿಸಿ ಎನ್ಐಎ ತನಿಖಾ ತಂಡ, ಮುಖ್ಯಮಂತ್ರಿ ಸಿದ್ದರಾಮಯ್ಯ ಗೃಹ ಸಚಿವ ಪರಮೇಶ್ವರ್, ಸ್ಪೀಕರ್ ಯುಟಿ ಖಾದರ್ ಅವರನ್ನೂ ವಿಚಾರಣೆ ನಡೆಸಬೇಕು ಎಂದು ಹೇಳಿದರು.
ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ಉಪ ವಿಭಾಗದಲ್ಲಿ ಡಿವೈಎಸ್ಪಿ ಆಗಿದ್ದ ಅನುಪಮಾ ಶೆಣೈ ಅವರನ್ನು 2017ರಲ್ಲಿ ಆಗಿನ ಸಚಿವ ಪರಮೇಶ್ವರ್ ನಾಯ್ಕ ಒತ್ತಡದ ಮೇರೆಗೆ ವರ್ಗಾವಣೆ ಮಾಡಲಾಗಿತ್ತು. ವರ್ಗಾವಣೆಗೆ ಅನುಪಮಾ ವಿರೋಧ ವ್ಯಕ್ತಪಡಿಸಿದ್ದರಿಂದ ಮಾಧ್ಯಮದಲ್ಲಿ ಭಾರೀ ಸುದ್ದಿಗೆ ಗ್ರಾಸವಾಗಿತ್ತು. ಆನಂತರ, ಕೊಲೆ ಪ್ರಕರಣ ಒಂದಕ್ಕೆ ಸಂಬಂಧಿಸಿ ಅವರನ್ನು ವರ್ಗಾವಣೆ ಮಾಡಿದ್ದಾಗಿ ಪರಮೇಶ್ವರ್ ನಾಯ್ಕ ಹೇಳಿಕೆ ನೀಡಿದ್ದರು.
ಆಗ ಡಿಜಿಪಿಯಾಗಿದ್ದ ಓಂಪ್ರಕಾಶ್, ಅನುಪಮಾ ಶೆಣೈ ಅವರ ಮಾತನ್ನೂ ಕೇಳದೆ ರಾಜಿನಾಮೆ ಸ್ವೀಕರಿಸಿದ್ದರು. ಅದೇ ಸಂದರ್ಭ ಬಳ್ಳಾರಿ ಜಿಲ್ಲೆಯಲ್ಲಿ ಆಗಿದ್ದ ಕೊಲೆ ಪ್ರಕರಣದಲ್ಲೂ ಪಿಎಫ್ಐ ನಂಟಿದ್ದ ಆರೋಪ ಕೇಳಿಬಂದಿತ್ತು. ಅನುಪಮಾ ಶೆಣೈ ತನಿಖೆ ನಡೆಸುತ್ತಿದ್ದಾಗಲೇ ಪ್ರಕರಣವನ್ನು ಸಿಐಡಿ ತಂಡಕ್ಕೆ ಕೊಟ್ಟು ಹಳ್ಳ ಹಿಡಿಸಲಾಗಿತ್ತು. ಕೊನೆಗೆ, 2019ರಲ್ಲಿ ಆರೋಪಿ ಪತ್ತೆಯಾಗಿಲ್ಲ ಎಂದು ಸಿಐಡಿ ಪೊಲೀಸರು ವರದಿ ಕೊಟ್ಟು ಕೈತೊಳೆದುಕೊಂಡಿದ್ದರು.

