ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮಳೆಯಬ್ಬರ ಮುಂದುವರಿದಿದ್ದು, ಜಿಲ್ಲೆಯ ಜೀವನದಿಗಳಾದ ಕುಮಾರಧಾರಾ ಮತ್ತು ನೇತ್ರಾವತಿ ಮೈದುಂಬಿ ಹರಿಯುತ್ತಿವೆ. ಜಿಲ್ಲೆಯ ಕೆಲವು ಭಾಗಗಳಲ್ಲಿ ಮಳೆಯು ಜೋರಾಗಿರುವುದರಿಂದ ನದಿಗಳಲ್ಲಿ ನೀರಿನ ಮಟ್ಟವು ಅಪಾಯದ ಘಟ್ಟವನ್ನು ತಲುಪಿದೆ.
ಕಳೆದ ಎರಡು ದಿನಗಳಿಂದ ನೀರಿನ ಮಟ್ಟದಲ್ಲಿ ಏರುಗತಿ ದಾಖಲಾಗಿದೆ. ನಿನ್ನೆ ಸಂಜೆಗೆ ಜೀವನದಿಗಳ ಸಂಗಮ ಸ್ಥಾನವಾದ ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಳದ ಬಳಿ ನದಿ ನೀರಿನ ಮಟ್ಟ ಅಪಾಯದ ಮಟ್ಟ ದಾಟಿದೆ. ಇಂದು ನೀರು ದೇವಳದ ಅಂಗಣ ಪ್ರವೇಶಕ್ಕೆ ಎರಡು ಮೆಟ್ಟಿಲುಗಳಷ್ಟೇ ಉಳಿದಿದೆ.
ನೀರಿನ ಮಟ್ಟ 31.5 ಮೀಟರ್ಗೆ ಏರಿದರೆ ಎರಡೂ ನದಿಗಳ ನೀರು ದೇವಳದ ಎರಡೂ ಭಾಗಗಳಿಂದ ಆವರಿಸಿ ಬಂದು ಸಂಗಮವಾಗುತ್ತದೆ. ಸದ್ಯ ಯಾರನ್ನು ನದಿಯ ಭಾಗಕ್ಕೆ ಹೋಗದಂತೆ ಎಚ್ಚರಿಕೆ ಫಲಕಗಳನ್ನು ಹಾಕಲಾಗಿದೆ.
ಜೊತೆಗೆ ಎನ್ ಡಿ ಆರ್ ಎಫ್, ಹೋಂಗಾರ್ಡ್, ಅಗ್ನಿಶಾಮಕ ದಳದವರು ಸ್ಥಳದಲ್ಲೇ ಬೀಡು ಬಿಟ್ಟಿದ್ದಾರೆ. ಸದ್ಯ ದೇವಳದ ಮುಂಭಾಗ ನೂರಾರು ಮಂದಿ ಜೀವನದಿಗಳು ಸಂಗಮವಾಗುವುದನ್ನ ನೋಡಲು ಕಾತರರಾಗಿದ್ದಾರೆ. ದೇವಸ್ಥಾನದ ಮುಂಭಾಗ ನೂರಾರು ಮಂದಿ ನೆರೆದಿದ್ದಾರೆ.

