ಮಂಗಳೂರು: ಮಾಜಿ ಜಿಜೆಪಿ ರಾಜ್ಯಾಧ್ಯಕ್ಷರಾದ ನಳೀನ್‌ ಕುಮಾರ್‌ ಕಟೀಲ್‌ ಅವರಿಗೆ ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ಅವರ ಅಭಿವೃದ್ಧಿ ಕಾರ್ಯಗಳನ್ನು ಗುರುತಿಸಿ ಸನ್ಮಾನಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಮಾಧ್ಯಮ ಸಂವಾದದಲ್ಲಿ ನಗರದಲ್ಲಿ ಮಾತನಾಡಿದ ಕಟೀಲ್‌ ಅವರು, ನಾನು ಪ್ರಚಾರದ ಹಿಂದೆ ಹೋದವ ಅಲ್ಲ, ನನ್ನ ಕಾರ್ಯವನ್ನ ಗುರುತಿಸಬೇಕು. ಸಾಮಾಜಿಕ ತಾಣಗಳಲ್ಲಿ ‌ನನ್ನ ಬಗ್ಗೆ ಬಹಳ ಚರ್ಚೆಯಾಯ್ತು. ಆದರೆ ನನ್ನ ಕಾರ್ಯಗಳ ಬಗ್ಗೆ ನನ್ನ ಬಳಿ ಅಧಿಕೃತ ಸರ್ಕಾರಿ ಅಂಕಿ ಅಂಶಗಳಿವೆ.

ಅಭಿವೃದ್ಧಿ ಆಗಿಲ್ಲ ಅನ್ನೋ ಚರ್ಚೆಗೆ ನಾನು ಉತ್ತರ ಕೊಡಲು ಹೋಗಿಲ್ಲ. ಪಂಪ್ ವೆಲ್, ನಂತೂರು ವಿಚಾರಗಳು ನ್ಯಾಯಾಲಯದಲ್ಲಿದ್ದ ಸಮಸ್ಯೆಗಳು. ಈ ವಿಚಾರದಲ್ಲಿ ನಾನು ಮಾತನಾಡಲು‌ ಆಗಲ್ಲ, ಹಾಗಾಗಿ ಸುಮ್ಮನಿದ್ದೆ. ಸಾಮಾನ್ಯ ಕಾರ್ಯಕರ್ತನಾದ ನಾನು ನನ್ನ ಇತಿಮಿತಿಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ.

ಆದರ್ಶ ಗ್ರಾಮದಲ್ಲಿ ನಮ್ಮ ಜಲ್ಲೆ ಇಡೀ ದೇಶಕ್ಕೆ ಮಾದರಿ ಆಗಿದೆ. ನಾನು ಮೊದಲ ಬಾರಿ ಎಂಪಿ ಆದಾಗ ಕರೆದು ಟಿಕೆಟ್ ಕೊಟ್ಟರು. ಬೇಡ ಅಂತ ನಾಲ್ಕು ದಿನ ಮೊಬೈಲ್ ಆಫ್ ಮಾಡಿ ಹೋಗಿದ್ದೆ. ಆದರೆ ಅ ಬಳಿಕ ನಾನು ಸಂಘದ ತೀರ್ಮಾನಕ್ಕೆ ಬದ್ದನಾಗಿ ಒಪ್ಪಿಕೊಂಡೆ. ಈಗ ಸಂಘ ಸಾಕು ಅಂದಾಗ ಒಪ್ಪಿಕೊಂಡಿದ್ದೇನೆ. ನಾನು ರಾಜಕೀಯವಾಗಿ ಇದ್ದವನಲ್ಲ, ಸಂಘದ ಪ್ರಚಾರಕ್ಕೆ ಮನೆ ಬಿಟ್ಟವ. ಇಂಥ ಜವಾಬ್ದಾರಿ ಕೂಡಿ ಅಂತ ನಾನು ಯಾವತ್ತೂ ಕೇಳಲೇ ಇಲ್ಲ.

ನಾನು ಪಕ್ಷದ ತೀರ್ಮಾನಕ್ಕೆ ಸಾಯುವವರೆಗೆ ಬದ್ದ. ರಾಜ್ಯಾಧ್ಯಕ್ಷ ಹುದ್ದೆಗೂ ನನಗೆ ರಾತ್ರಿ ಅಮಿತ್ ಶಾ ಕರೆ ಮಾಡಿ ಹೇಳಿದ್ರು. ಒಂದು ದಿನ ಬಂದು ಮಾತನಾಡ್ತೇನೆ ಅಂದಾಗಲೂ ಒಪ್ಪದೇ ಪಕ್ಷದ ತೀರ್ಮಾನ ಅಂದ್ರು. ಪಕ್ಷ ಬೆಳೆದಾಗ ನಾವು ಅವಕಾಶಕ್ಕಾಗಿ ಕಾಯಲೇ ಬೇಕು. ಸಾಮಾಜಿಕ ನ್ಯಾಯ, ಚರ್ಚೆಗಳು ಬಂದಾಗ ಒತ್ತಡಗಳು ಇರುತ್ತೆ. ನಾನು ರಾಜ್ಯಾಧ್ಯಕ್ಷನಾಗಿದ್ದಾಗಲೂ ನನಗೆ ಎಲ್ಲರಿಗೆ ಟಿಕೆಟ್ ಕೊಡಿಸಲು ಆಗಿಲ್ಲ.

ಅದರೆ ಸಿದ್ದಾಂತ, ತತ್ವ ಅನ್ನೋದು ನಮ್ಮ ಹೃದಯದಲ್ಲಿ ಇರಬೇಕು. ಮುಂದಿನ ಬಿಜೆಪಿ ಸಂಸದರಿಗೆ ನಾನು ಸಂಪೂರ್ಣ ಸಹಕಾರ ನೀಡ್ತೇನೆ. ಯಾವುದೇ ಸಂಧರ್ಬದಲ್ಲಿ ನಾನು ಯಾರೇ ಎಂಪಿ ಆದ್ರೂ ಸಹಕಾರ ಕೊಡ್ತೇನೆ. ನಾನು ಧಾರ್ಮಿಕ ಕ್ಷೇತ್ರದಿಂದ ಬಂದವ, ದಾಸರ ವಾಣಿಯಂತೆ ನಿಂದಕರಿರಬೇಕು. ಆದರೆ ನಿಂದನೆಯಲ್ಲಿ ವೈಯಕ್ತಿಕ ದ್ವೇಷ ಇರಬಾರದು.

ಒಬ್ಬ ಪರ್ಮನೆಂಟ್ ಆಗಿ ಬೈತಾ ಇದಾನೆ ಅಂದ್ರೆ ಅವನಿಗೆ ವೈಯಕ್ತಿಕ ದ್ವೇಷ ಇರಬೇಕು. ಅಂಥದ್ದನ್ನ ನಾನು ಆದಷ್ಟು ತಲೆಗೆ ತೆಗೆದುಕೊಂಡಿಲ್ಲ. ಪಂಪ್ ವೆಲ್ ವಿಚಾರದಲ್ಲಿ ಕೆಲವರು ‌ಒಳ್ಳೆಯ ನಿಂದನೆ ಮಾಡಿದ್ದಾರೆ, ಸ್ವೀಕರಿಸಿದ್ದೇನೆ. ಇನ್ನು ಕೆಲವರು ವೈಯಕ್ತಿಕವಾಗಿ ಮಾಡಿದ್ದಾರೆ, ಅಂಥವರನ್ನ ನಾನು‌ ತಿರಸ್ಕಾರ ಮಾಡಿದ್ದೇನೆ ಎಂದರು.