ಮಂಗಳೂರು : ಮಹಾಕಾಳಿಪಡ್ಡುವಿನಲ್ಲಿ ನಿರ್ಮಾಣ ಆಗುತ್ತಿರುವ ಬಹುನಿರೀಕ್ಷಿತ ರೈಲ್ವೇ ಕೆಳ ಸೇತುವೆ (ಆರ್‌ಯುಬಿ) ಕಾಮಗಾರಿಗೆ ಬಾಕ್ಸ್ ಪುಡ್ಡಿಂಗ್ ತಂತ್ರಜ್ಞಾನ ಸವಾಲಾಗಿ ಪರಿಣಮಿಸಿದೆ. ಕಾಮಗಾರಿ ನಿರೀಕ್ಷಿತ ವೇಗದಲ್ಲಿ ಸಾಗುತ್ತಿಲ್ಲ.

ಮಂಗಳೂರು ಜಂಕ್ಷನ್ ಲೈನ್‌ನ ಅಡಿ ಭಾಗದಲ್ಲಿ ಬಾಕ್ಸ್ ಪುಕ್ಕಿಂಗ್ ತಂತ್ರಜ್ಞಾನ ಕಾಮಗಾರಿ ನಡೆಯುತ್ತಿದೆ. ಸದ್ಯ ಮೂರು ಬಾಕ್ಸ್ ಅಳವಡಿಕೆ ಮಾಡಲಾಗಿದ್ದು, ಇನ್ನು ಒಂದು ಅಳವಡಿಸಲು ಬಾಕಿ ಇದೆ. ಇದನ್ನು ಹೈಡ್ರಾಲಿಕ್ ತಂತ್ರಜ್ಞಾನದ ಮೂಲಕ ರೈಲ್ವೇ ಲೈನ್‌ನ ಕೆಳ ಭಾಗದಲ್ಲಿ ಅಳವಡಿಸಲಾಗುತ್ತದೆ. ಸುತ್ತಮುತ್ತಲು ಅಂಗಡಿ, ಮನೆಗಳು ಇರುವ ಕಾರಣ ಕಾಮಗಾರಿ ನಾಜೂಕಾಗಿ ಮಾಡ ಬೇಕಾಗಿದ್ದು, ಮೈಕ್ರೋ ಫೈಲಿಂಗ್ ವಿಧಾನ ಅನುಸರಿಸಲಾಗುತ್ತಿದೆ. ರೈಲುಗಳು ಸಂಚರಿಸುವಾಗ ಆದರೆ ವೇಗದ ಮಿತಿಯನ್ನು ಕಡಿಮೆ ಮಾಡಿ ಕಾಮಗಾರಿ ನಡೆಸಲು ಉದ್ದೇಶಿಸಲಾಗಿದೆ.

2022ರ ಡಿಸೆಂಬರ್‌ನಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ರೈಲ್ವೆ ಕೆಳ ಸೇತುವೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸ್ಮಾರ್ಟ್‌ ವತಿಯಿಂದ 30.7 ಕೋಟಿ ರೂ. ಮೊತ್ತವನ್ನು ರೈಲ್ವೇ ಇಲಾಖೆಗೆ ಪಾವತಿ ಮಾಡಲಾಗಿದೆ. ರೈಲ್ವೇ ಇಲಾಖೆಯಿಂದಲೇ ಟೆಂಡರ್ ಕರೆದು ಕಾಮಗಾರಿ ನಡೆಸಲಾಗುತ್ತಿದೆ. ಮುಂಬಯಿ ಮೂಲದ ಎಂ/ಎಸ್ ವಿಜಯ್ ಇನ್‌ಫ್ರಾ ಪ್ರಾಜೆಕ್ಟ್ ಸಂಸ್ಥೆ ನಿರ್ಮಾಣ ಉಸ್ತುವಾರಿ ವಹಿಸಿ ಕೊಂಡಿದ್ದು ಸುಮಾರು 20 ಕೋಟಿ ರೂ. ವೆಚ್ಚದಲ್ಲಿ ಸೇತುವೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ.

ಸೇತುವೆಯ ಎರಡೂ ಭಾಗದಲ್ಲಿ ಚತುಷ್ಪಥ ರಸ್ತೆ ಕಾಮಗಾರಿ ಮಂಗಳೂರು ಸ್ಮಾರ್ಟ್ ಸಿಟಿಯಿಂದ ಈಗಾಗಲೇ ಬಹುತೇಕ ಪೂರ್ಣ ಗೊಂಡಿದೆ. ಆರ್‌ಯುಬಿ ನಿರ್ಮಾಣ ಕೆಲಸ ದಕ್ಷಿಣ ರೈಲ್ವೇಯ ಪಾಲಕ್ಕಾಡ್ ವಿಭಾಗದಿಂದ ಕೈಗೊಳ್ಳಲಾಗುತ್ತಿದೆ. ಹಳಿಯಲ್ಲಿ ರೈಲು ಸಾಗುತ್ತಿದ್ದರೆ ಕೆಳಭಾಗದಲ್ಲಿ ಕಾಮಗಾರಿ ನಿರ್ವಹಿಸಲಾಗುತ್ತಿದೆ. ಸೆಂಟ್ರಲ್ ಮಾರ್ಗದ ಕೆಲಸಗಳು ಈಗಾಗಲೇ ಆರಂಭವಾಗಿ ರೈಲ್ವೇ ಲೈನ್‌ನ ಕೆಳಗೆ ಒಂದು ಭಾಗದಲ್ಲಿ ಕಾಂಕ್ರೀಟ್ ಸೇತುವೆ ನಿರ್ಮಿಸಲಾಗಿದೆ. ಜಂಕ್ಷನ್ ಮಾರ್ಗಕ್ಕೆ ಸಂಬಂಧಿಸಿದ ಕಾಮಗಾರಿ ಪ್ರಗತಿಯಲ್ಲಿದ್ದು, ಜಪ್ಪಿನಮೊಗರು ಭಾಗದಲ್ಲಿ ಎರಡು ಸಮಾ ನಾಂತರ ಕಾಂಕ್ರೀಟ್ ಬಾಕ್ಸ್ ಗಳನ್ನು ಅಳವಡಿಸಿ ಕಾಮಗಾರಿ ನಡೆಸಲಾಗುತ್ತಿದೆ.

ರೈಲ್ವೇ ಕೆಳ ಸೇತುವೆ ಕಾಮಗಾರಿ ವಿಳಂಬವಾಗುತ್ತಿದ್ದು, ಸಾರ್ವಜನಿಕರಿಗೆ ಸಮಸ್ಯೆಯಾಗಿ ಪರಿಣಮಿಸಿದೆ. ಈ ಭಾಗದಲ್ಲಿ ಪರ್ಯಾಯ ರಸ್ತೆ ನಿರ್ಮಾಣ ಮಾಡಲಾಗಿದ್ದು, ದ್ವಿಚಕ್ರ ವಾಹನ ಸಂಚಾರಕ್ಕೆ ಅನುವು ಮಾಡಲಾಗಿದೆ. ಕಿರಿದಾದ ಹಾಗೂ ಇಕ್ಕಟ್ಟಿನ ಓಣಿ ರಸ್ತೆಯಾಗಿರುವುದರಿಂದ ಬೆಳಗ್ಗೆ ಸಂಜೆ ಹೊತ್ತು ಅತೀ ಹೆಚ್ಚು ಸಂಖ್ಯೆಯಲ್ಲಿ ದ್ವಿಚಕ್ರ ವಾಹನಗಳು ಸಾಗುವುದರಿಂದ ದಟ್ಟನೆ ಉಂಟಾಗುತ್ತಿದೆ. ಸೇತುವೆ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ ಎಲ್ಲ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು ಎಂದು ವಾಹನ ಸವಾರರು ಆಗ್ರಹಿಸಿದ್ದಾರೆ.