ಪುತ್ತೂರು: ಸಂಕಷ್ಟದಲ್ಲಿ ಅಡಕೆ ಬೆಳೆಗಾರರ ಕೈ ಹಿಡಿಯುತ್ತಾ ಬಂದಿರುವ ಹವಾಮಾನ ಆಧರಿತ ಬೆಳೆ ವಿಮೆ ಯೋಜನೆಯಲ್ಲಿ ಈ ಬಾರಿ ಈಗಾಗಲೇ ದಕ್ಷಿಣ ಕನ್ನಡ ಜಿಲ್ಲೆಯ ಅಡಕೆ ಮತ್ತು ಕಾಳುಮೆಣಸು ಬೆಳೆಗಾರರಿಗೆ 69,44,10,840 ರೂ. ಖಾತೆಗೆ ಜಮೆಯಾಗಿದೆ. ಇಡೀ ರಾಜ್ಯದಲ್ಲೇ ದ.ಕ. ಜಿಲ್ಲೆಗೆ ಹೆಚ್ಚಿನ ವಿಮಾ ಮೊತ್ತ ಪಾವತಿಯಾಗಿದೆ ಎಂದು ಶಾಸಕ ಅಶೋಕ್ ರೈ ಹೇಳಿದರು.

ಮಂಗಳವಾರ ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಈ ಬಾರಿ ಹಮಾಮಾನ ಆಧರಿತ ಬೆಳೆ ವಿಮೆ ಯೋಜನೆಯಲ್ಲಿ ಒಟ್ಟು 157 ಕೋಟಿ 36 ಸಾವಿರ, 316 ರೂಪಾಯಿ ಕ್ಲೇಮ್ ಇದೆ ಎಂದರು. ಪುತ್ತೂರು ತಾಲೂಕಿನಲ್ಲಿ 28,85,77,806 ರೂ. ಕ್ಲೇಮ್ ಇದ್ದು, ಅದರಲ್ಲಿ 15,77,18,339 ರೂ. ರೈತರ ಖಾತೆಗೆ ಜಮೆಯಾಗಿದೆ.

ಕಡಬ ತಾಲೂಕಿನಲ್ಲಿ 19,89,48,130 ರೂ. ಕ್ಲೇಮ್ ಇದ್ದು, 16,75,55,150 ರೂ. ಜಮೆಯಾಗಿದೆ. ಸುಳ್ಯ ತಾಲೂಕಿನಲ್ಲಿ 30,70,81,228 ರೂ. ಕ್ಲೇಮ್ ಇದ್ದು, 18,54,73,871 ರೂ. ಜಮೆಯಾಗಿದೆ. ಬೆಳ್ತಂಗಡಿ ತಾಲೂಕಿನಲ್ಲಿ ಒಟ್ಟು 41,00,17,767 ರೂ. ಕ್ಲೇಮ್ ಇದ್ದು, 12,68,30,370 ರೂ. ಪಾವತಿಯಾಗಿದೆ ಎಂದರು.

ಕಳೆದ ವರ್ಷ ಸರಕಾರ ರಾಜ್ಯದ ಬೆಳೆ ವಿಮೆಯ ಪಟ್ಟಿಯಿಂದ ಅಡಕೆಯನ್ನು ಹೊರಗಿಡಲು ಮುಂದಾಗಿತ್ತು. ಅಡಕೆ ವಾಣಿಜ್ಯ ಬೆಳೆಯೆಂಬ ಕಾರಣಕ್ಕೆ ಈ ನಿರ್ಧಾರಕ್ಕೆ ಬರಲಾಗಿತ್ತು. ಅಡಕೆ ಬೆಳೆಗಾರರ ಪರವಾಗಿ ನಾನು ಮುಖ್ಯಮಂತ್ರಿಗಳಲ್ಲಿ ವಿನಂತಿ ಮಾಡಿಕೊಂಡ ಕಾರಣ ಕೊನೆ ಕ್ಷಣದಲ್ಲಿ ಅಡಕೆ ಸೇರಿಸಲಾಗಿತ್ತು. ಅಡಕೆಗೆ ಕೊಳೆ ರೋಗ, ಹಳದಿ ರೋಗ, ಎಲೆಚುಕ್ಕಿ ರೋಗದಂಥ ಸಮಸ್ಯೆ ಇರುವ ಕಾಲಘಟ್ಟದಲ್ಲಿ ಬೆಳೆ ವಿಮೆಯ ದೊಡ್ಡ ಮೊತ್ತ ಸಿಕ್ಕಿರುವುದು ರೈತರ ಪಾಲಿಗೆ ತುಂಬಾ ಅನುಕೂಲವಾಗಿದೆ. ಅಡಕೆ ತೋಟವನ್ನು ಲೀಸ್‍ಗೆ ಕೊಟ್ಟರೂ ಸಿಗದಷ್ಟು ಮೊತ್ತ ಅನೇಕರಿಗೆ ಬೆಳೆ ವಿಮೆಯ ಮೂಲಕ ಸಿಕ್ಕಿದೆ ಎಂದರು.

ಪ್ರತೀ ವರ್ಷ ರಾಜ್ಯ ಸರಕಾರ ಹವಾಮಾನ ಆಧರಿತ ಬೆಳೆ ವಿಮೆ ಯೋಜನೆಯನ್ನು ಪರಿಶೀಲಿಸಿ, ಪರಿಷ್ಕರಿಸುವ ಕೆಲಸ ಮಾಡುತ್ತದೆ. ಬಜೆಟ್‍ನಲ್ಲಿ ಸೇರಿಸಿದರೆ ಮಾತ್ರ ಅದು ವಿಮಾ ವ್ಯಾಪ್ತಿಗೆ ಬರುತ್ತದೆ. ಇದುವರೆಗೆ ಅಡಕೆಯನ್ನು ಸೇರಿಸುವ ಕಾರ್ಯ ನಡೆದಿದೆ. ಪ್ರದೇಶದಿಂದ ಪ್ರದೇಶಕ್ಕೆ ಹವಾಮಾನದಲ್ಲಿ ಆಗುವ ವ್ಯತ್ಯಾಸಗಳನ್ನು ಆಯಾ ಪ್ರದೇಶದಲ್ಲೇ ಅಧ್ಯಯನ ಮಾಡಿ ಸಲ್ಲಿಸಿದ ವರದಿ ಆಧಾರದಲ್ಲಿ ವಿಮಾ ಕಂಪನಿ ಪರಿಹಾರ ಮೊತ್ತ ನಿರ್ಧರಿಸಿ ರೈತರಿಗೆ ನೀಡುತ್ತದೆ ಎಂದು ಹೇಳಿದರು.

ಹವಾಮಾನ ಆಧರಿತ ಬೆಳೆ ವಿಮೆ ಯೋಜನೆಯನ್ನು ಕೇಂದ್ರ ಸರಕಾರ ಜಾರಿಗೆ ತಂದಿದ್ದರೂ, ಇದಕ್ಕೆ ಕಟ್ಟುವ ಪ್ರೀಮಿಯಂ ಮೊತ್ತದಲ್ಲಿ ರಾಜ್ಯ ಸರಕಾರದ ಸಿಂಹಪಾಲು ಅಡಗಿದೆ. ಇದನ್ನು ಯಾರೂ ಪ್ರಚಾರ ಮಾಡುವುದಿಲ್ಲ. ಬರೀ ಕೇಂದ್ರದ ಯೋಜನೆ ಎಂಬಂತೆ ಬಿಂಬಿಸುತ್ತಾರೆ. ರೈತರು ಒಂದು ಪಾಲು ಪ್ರೀಮಿಯಂ ಮಾತ್ರ ಕಟ್ಟುತ್ತಾರೆ. ಮಿಕ್ಕಿದ್ದರಲ್ಲಿ ಶೇ. 70 ರಾಜ್ಯ, ಶೇ.30 ಕೇಂದ್ರ ಕಟ್ಟುತ್ತದೆ. ಅದರಂತೆ ವಿಮಾ ಕಂಪನಿ ಪರಿಹಾರ ನೀಡುತ್ತದೆ. ಕೇರಳ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಈ ಯೋಜನೆ ಜಾರಿಯಲ್ಲಿಲ್ಲ. ರಾಜ್ಯ ಸರಕಾರದ ನಿರ್ಣಯದ ಮೇಲೆ ಇದು ಅವಲಂಬಿತವಾಗಿದೆ ಎಂದು ಶಾಸಕರು ಹೇಳಿದರು.