ಮಂಗಳೂರು : ನನ್ನ ಮೇಲಿನ ಕಳ್ಳತನದ ಆರೋಪ ಸಾಬೀತು ಮಾಡಿ ಎಂದು ರವಿ ಪ್ರಸನ್ನರಿಗೆ ತಮ್ಮಣ್ಣ ಶೆಟ್ಟಿ ಓಪನ್ ಚಾಲೆಂಜ್ ಹಾಕಿದ ಘಟನೆ ನಡೆದಿದೆ. ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ನನ್ನ ಮೇಲಿನ ಆರೋಪಗಳನ್ನು ಸಾಬೀತು ಪಡಿಸಲಿ ಎಂದು ಹೇಳಿದರು.

ನನ್ನ ಮೇಲಿನ ಆರೋಪ ಶುದ್ಧ ಸುಳ್ಳು ನಾನು ಕೊಂಡಾಣ, ಷಣ್ಮುಖ ದೇವಾಲಯದ ಭಂಡಾರ ಕದ್ದಿಲ್ಲ. ಒಂದು ವೇಳೆ ರವಿ ಪ್ರಸನ್ನರ ಆರೋಪ ಸತ್ಯ ಆಗಿದ್ದರೆ ನಾನು ಕೊಂಡಾಣದ ಮಣ್ಣಿನಲ್ಲಿ ಇನ್ನು ಮುಂದೆ ದೈವದ ಬಗ್ಗೆ ಮಾತನಾಡುವುದಿಲ್ಲ ಎಂದು ಶಪಥ ಮಾಡುತ್ತೇನೆ. ಒಂದು ವೇಳೆ ಪ್ರಸನ್ನ ರವಿ ಹೇಳಿರುವುದು ಸುಳ್ಳು ಎಂದು ಸಾಬೀತಾದರೆ ಆತನನ್ನು ತಂತ್ರಿ ಕಂತ್ರಿ ಕುತಂತ್ರಿ ಎಂದು ಕರೆಯುತ್ತೇನೆ ಎಂಬುದಾಗಿ ತಮ್ಮಣ್ಣ ಶೆಟ್ಟಿ ಹೇಳಿದರು.

ಜಾರಂದಾಯ ಬಂಟ ದೈವಸ್ಥಾನ ಬಾರೆಬೈಲ್‌ ನಲ್ಲಿನ ದೇವಾಲಯದ ಬಗ್ಗೆ ಆಗಲಿ, ಗುತ್ತಿನ ಬಗ್ಗೆಯಾಗಲಿ, ಆಡಳಿತದ ಬಗ್ಗೆಯಾಗಲಿ ಯಾವುದೇ ಆಕ್ಷೇಪವನ್ನು ತಕರಾರನ್ನು ನಾನು ಎತ್ತಿಲ್ಲ. ಆದರೆ ಆ ದೈವಸ್ಥಾನದಲ್ಲಿ ಮೊನ್ನೆ ನಡೆದ ಕೆಲವು ಬೆಳವಣಿಗೆಯ ಬಗ್ಗೆ ನಾನು ಮಾತನಾಡಿದ್ದೇನೆ ಎಂದರು.

ಒಬ್ಬ ಸಿನಿಮಾ ಕಲಾವಿದನನ್ನು ಮೆಚ್ಚಿಸುವ ರವಿ ಪ್ರಸನ್ನರ ನಡೆಯನ್ನು ನಾನು ವಿರೋಧಿಸುತ್ತೇನೆ. ದೈವದ ಪ್ರಾರ್ಥನೆ ತುಳು ಭಾಷೆಯಲ್ಲಿ ಆಗುವುದು ವಾಡಿಕೆ. ಆದರೆ ಇಲ್ಲಿ ದೈವದ ಪ್ರಾರ್ಥನೆಯು ಮಾತೃ ಭಾಷೆ ಬಿಟ್ಟು ಕನ್ನಡ ಭಾಷೆಯಲ್ಲಿ ಆಗಿದೆ. ಅದು ಸೇವಾಕರ್ತನನ್ನು ಮೆಚ್ಚಿಸುವ ಪ್ರಯತ್ನವಾಗಿದೆ. ಮೊನ್ನೆ ನಡೆದ ಕೋಲದಲ್ಲಿ ಕೋಲಧಾರಿಯು ಕೆಲವು ಸನ್ನೆಗಳನ್ನು ಮಾಡಿದ್ದಾರೆ.   ಕ್ಯಾಮರಾವನ್ನು ಒಡ್ಡಿದ್ದಾರೆ ಇದು ಸರಿಯಾದ ಕ್ರಮವಲ್ಲ. ಈ ಕ್ರಮದ ಬಗ್ಗೆ ಅಲ್ಲಿನ ಆಡಳಿತ ಮಂಡಳಿಯವರು ಮಾತನಾಡಲೇ ಇಲ್ಲ ಎಂದರು.

ಕದ್ರಿಯಲ್ಲಿ ಕೊಡಿ ಏರಿದ ಬಳಿಕ ಈ ದೇವಾಲಯದಲ್ಲಿ ಜಾರಂದಾಯ ದೈವದ ನೇಮ ನಡೆಯುವ ವಾಡಿಕೆ ಹಿಂದಿನಿಂದಲೇ ನಡೆದುಕೊಂಡು ಬಂದಿರುವುದು. ಆದರೆ ಯಾರೋ ಒಬ್ಬ ಮ್ಯಾನೇಜರ್ ಹೇಳಿದ ಕೂಡಲೇ ಇಲ್ಲಿ ಕೋಲ ಬುಕ್ ಆಗುತ್ತದೆ. ಕೋಲ ನಡೆಯುತ್ತದೆ ಇದರಲ್ಲಿ ಅರ್ಥ ಇದೆಯೇ .. !. ಇದು ಸಂಪ್ರದಾಯದ ಉಲ್ಲಂಘನೆ ಅಲ್ಲವೇ … ?. ಹಣ ಮಾಡುವ ಉದ್ದೇಶದಿಂದ ದೈವಸ್ಥಾನವು ಇಂದು ವ್ಯಾಪಾರ ಕೇಂದ್ರವಾಗಿ ಮಾರ್ಪಟ್ಟಿದೆ ಎಂದು ಆರೋಪಿಸಿದ್ದಾರೆ.

ಇಂದು ಕಾಂತಾರ ಸಿನಿಮಾ ಮೂಲಕ ದೈವವು ಬೀದಿಗಳಲ್ಲಿ ಕುಣಿಯುತ್ತದೆ. ರಾಜ ಕಾರಣಿಗಳನ್ನು ಸ್ವಾಗತಿಸುತ್ತದೆ. ಗುತ್ತು ಗಡಿಯನ್ನು ಮೀರಿ ಹೋಗಿದೆ ಇದು ಸರಿಯೇ ಎಂದು ಪ್ರಶ್ನೆ ಮಾಡಿದರು. ರವಿ ಪ್ರಸನ್ನ ದೊಡ್ಡ ಬಕೆಟ್ ಕಾಂತರಾ ಚಿತ್ರದ ಪ್ರಮೋಷನ್ಗಾಗಿ ಅವರು ಪ್ರಯತ್ನ ಮಾಡಿದ್ದಾರೆ. ರವಿಯರ ಸ್ವಾರ್ಥವು ದೈವಾರಾಧನೆಗೆ ತೊಡಕಾಗಿದೆ. ಪ್ರಚಾರ ವ್ಯಾಪಾರದ ಉದ್ದೇಶದಿಂದ ಅವರು ಹೀಗೆ ಮಾಡಿದ್ದಾರೆ. ದೈವಕ್ಕಿರುವ ನಿಯಮ ಎಲ್ಲಾ ದೈವಸ್ಥಾನದಲ್ಲೂ ಒಂದೇ ಆದರೆ ಈ ದೇವಾಲಯಕ್ಕೆ ಮಾತ್ರ ಯಾಕೆ ಪ್ರತ್ಯೇಕ ಎಂದು ಪ್ರಶ್ನೆ ಮಾಡಿದರು.