ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಾಗುತಿದ್ದು, ಹವಾಮಾನ ವೈಪರಿತ್ಯ ಹಿನ್ನೆಲೆಯಲ್ಲಂದು ಮೀನುಗಾರರು ಮೀನುಗಾರಿಕೆಗೆ ಸಮುದ್ರಕ್ಕೆ ಇಳಿಯದಂತೆ ದ.ಕ. ಜಿಲ್ಲಾಡಳಿತ ಸೂಚಿಸಿದೆ.
ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಈ ಆದೇಶ ಹೊರಡಿಸಿದ್ದಾರೆ. ಆಳ ಸಮುದ್ರ ಮೀನುಗಾರಿಕೆಗೆ ವಿಧಿಸಲಾಗಿದ್ದ 60 ದಿನಗಳ ನಿಷೇಧದ ಅವಧಿ ಬುಧವಾರ ಜು.31ಕ್ಕೆ ಕೊನೆಗೊಂಡಿತ್ತು. ಆದರೆ ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ಮೀನುಗಾರರು ಕಡಲಿಗೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ.
ಎರಡು ತಿಂಗಳ ನಿಷೇಧ ಕೊನೆಗೊಂಡು, ವಾಡಿಕೆಯಂತೆ ಇಂದು ಆಗಸ್ಟ್ 1ರಂದು ಆಳ ಮೀನುಗಾರಿಕೆ ಆರಂಭವಾಗಬೇಕಿತ್ತು. ಆದರೆ ರೆಡ್ ಆಲರ್ಟ್ ಇರುವ ಹಿನ್ನೆಲೆಯಲ್ಲಿ ಮೀನುಗಾರರು ಕಾಯುವಂತಾಗಿದೆ. ಹವಾಮಾನ ವೈಪರೀತದಿಂದ ಕಡಲು ಪ್ರಕ್ಷುಬ್ಧಗೊಂಡಿದೆ. ಇಂತಹ ಸಂದರ್ಭ ಮೀನುಗಾರಿಕಾ ಇಲಾಖೆಯು ನೀಡಿರುವ ಸೂಚನೆಯ ಮೇರೆಗೆ ಮೀನುಗಾರಿಕಾ ಸಂಘಟನೆಗಳು ಮೀನುಗಾರರಿಗೆ ಆಗಸ್ಟ್ 3ರರವರೆಗೆ ಕಡಲಿಗೆ ಇಳಿಯದಂತೆ ಎಚ್ಚರಿಕೆ ನೀಡಿವೆ.

