ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಮನೆ, ಅಪಾರ್ಟ್ಮೆಂಟ್, ವ್ಯಾಪಾರಸ್ಥರು, ಕೈಗಾರಿಕೆಗಳಿಂದ ಒಳಚರಂಡಿ ಜಾಲಕ್ಕೆ ಮಳೆ ನೀರನ್ನು ಹರಿಯಬಿಟ್ಟರೆ ಕಾನೂನು ಕ್ರಮದ ಜತೆಗೆ ದಂಡ ವಿಧಿಸುವುದಾಗಿ ಪಾಲಿಕೆ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.
ಕೆಲವೆಡೆ ಒಳಚರಂಡಿ ಜಾಲಕ್ಕೆ ಮಳೆ ನೀರು ಹರಿದು ಬಿಡುತ್ತಿರುವುದು ಗಮನಕ್ಕೆ ಬಂದಿದೆ. ಇದರಿಂದಾಗಿ ಒಳಚರಂಡಿ ಜಾಲದಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚಿನ ಮಳೆ ನೀರು ಹರಿದು ಮೆಶಿನ್ ಹೋಲ್ಗಳಿಂದ ಒಳಚರಂಡಿ ನೀರು ಹೊರ ಬಂದು ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ಮಂಗಳೂರು ಪಾಲಿಕೆ ಆಯುಕ್ತ ರವಿಚಂದ್ರ ನಾಯಕ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಒಳಚರಂಡಿ ಜಾಲಕ್ಕೆ ಮಳೆ ನೀರು ಹರಿಯ ಬಿಡುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.
ಹಾಗಾಗಿ ಅನಧಿಕೃತವಾಗಿ ಒಳಚರಂಡಿ ಜಾಲಕ್ಕೆ ಅಥವಾ ಮೆಶಿನ್ ಹೋಲ್ಗಳಿಗೆ ನೀಡಿರುವ ಕಟ್ಟಡದ ಮಳೆ ನೀರು ಸಂಪರ್ಕವನ್ನು ಕಡ್ಡಾಯವಾಗಿ ತೆರವುಗೊಳಿಸಬೇಕು. ಪಾಲಿಕೆಯ ಅಧಿಕಾರಿ ಅಥವಾ ಸಿಬ್ಬಂದಿ ಅನಧಿಕೃತ ಜೋಡಣೆ ಬಗ್ಗೆ ಸ್ಥಳ ಪರಿಶೀಲನೆ ನಡೆಸುತ್ತಾರೆ.
ನಿಯಮ ಉಲ್ಲಂಘಿಸಿದವರ ವಿರುದ್ಧ ಸಂಬಂಧಿತ ಕಾಯಿದೆ ಅನ್ವಯ ಕ್ರಮ ಕೈಗೊಳ್ಳಲಾಗುತ್ತದೆ. ಈ ಬಗ್ಗೆ ಸಾರ್ವಜನಿಕರು ಸಹಕರಿಸಬೇಕು ಎಂದರು. ಪರಿಸರ, ಮಾಲಿನ್ಯ ನಿಯಂತ್ರಣ ಎರಡೂ ಕಾಯಿದೆಯಲ್ಲೂ ಶಿಕ್ಷೆ!ಒಳಚರಂಡಿ ನೀರನ್ನು ಮಳೆ ನೀರು ಚರಂಡಿಗೆ ನೀಡಿರುವುದು ಕಂಡು ಬಂದಲ್ಲಿ ಮಾಲಿನ್ಯ ನಿಯಂತ್ರಣ ತಡೆ ಕಾಯಿದೆಯಡಿ ಕಟ್ಟಡ ಮಾಲೀಕರಿಗೆ ಒಂದು ಲಕ್ಷ ರೂ. ದಂಡ ಹಾಗೂ ಆರು ವರ್ಷವರೆಗೆ ಜೈಲು ಶಿಕ್ಷೆಗೆ ಒಳಪಡಿಸಬಹುದಾಗಿದೆ.
ಪರಿಸರ ಸಂರಕ್ಷಣೆ ಕಾಯಿದೆಯಡಿ ಒಂದು ಲಕ್ಷ ರೂ. ದಂಡ ಹಾಗೂ 5 ವರ್ಷ ಜೈಲು ಶಿಕ್ಷೆಗೆ ಒಳಪಡಿಸಬಹುದು ಎಂದು ಪಾಲಿಕೆ ಆಯುಕ್ತ ರವಿಚಂದ್ರ ನಾಯಕ್ ಎಚ್ಚರಿಕೆ ನೀಡಿದ್ದಾರೆ. ದಂಡ, ನೀರಿನ ಸಂಪರ್ಕ ಕಡಿತ ಎಚ್ಚರಿಕೆಮೊದಲ ಬಾರಿಗೆ 5000 ರೂ. ದಂಡ ವಿಧಿಸಲಾಗುವುದು. ನೋಟಿಸ್ ನೀಡಿದ ಬಳಿಕವೂ ತೆರವುಗೊಳಿಸದಿದ್ದರೆ ಪ್ರತಿದಿನ 1000 ರೂ.ನಂತೆ ಹೆಚ್ಚುವರಿ ದಂಡ ವಿಧಿಸಲಾಗುವುದು. ನೀರಿನ ಸಂಪರ್ಕ ಕಡಿತಗೊಳಿಸಲಾಗುವುದು.
ಅನಧಿಕೃತ ಜೋಡಣೆಯನ್ನು ಪಾಲಿಕೆ ವತಿಯಿಂದ ತೆರವುಗೊಳಿಸಿ ಕಾರ್ಯಾಚರಣೆಗೆ ತಗಲುವ ಮೊತ್ತವನ್ನು ಕಟ್ಟಡದ ಮಾಲೀಕರಿಂದ ದಂಡ ವಿಧಿಸಿ ಹೆಚ್ಚುವರಿ 25 ಸಾವಿರ ರೂ. ದಂಡ ವಿಧಿಸಲಾಗುವುದು ಎಂದು ಕಮಿಷನರ್ ಎಚ್ಚರಿಸಿದ್ದಾರೆ. ಅನಧಿಕೃತ ಜೋಡಣೆ ಕಂಡು ಬಂದರೆ ಕರೆ ಮಾಡಿ..ಅನಧಿಕೃತ ಜೋಡಣೆ ಕಂಡು ಬಂದಲ್ಲಿ ಸಾರ್ವಜನಿಕರು ಕೂಡಾ 0824- 2220306 , ವಾಟ್ಸಾಪ್ ಸಂ. 9449007722ಗೆ ಮಾಹಿತಿ ನೀಡಿ ಮಂಗಳೂರು ನಗರ ಸ್ವಚ್ಛ ನಗರವನ್ನಾಗಿಸಲು ಪಾಲಿಕೆಯೊಂದಿಗೆ ಕೈಜೋಡಿಸಬೇಕು ಎಂದು ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.
ನಿಯಮ ಉಲ್ಲಂಘಿಸಿದರೆ ಕ್ರಮಕೆಲವು ಮನೆ, ಅಪಾರ್ಟ್ಮೆಂಟ್, ವ್ಯಾಪಾರಸ್ಥರು, ಕೈಗಾರಿಕೆಯವರು ಮಳೆಯ ನೀರಿನ ಚರಂಡಿಗೆ ಒಳಚರಂಡಿ ನೀರು ಹರಿಸುತ್ತಿರುವುದು ಕೂಡ ಪಾಲಿಕೆಯ ಗಮನಕ್ಕೆ ಬಂದಿದೆ. ಇದರಿಂದ ನೀರಿನ ಮೂಲಕ ಕಲುಷಿತಗೊಂಡು ಸಾರ್ವಜನಿಕರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಈ ಅಕ್ರಮ ಕಡ್ಡಾಯವಾಗಿ ನಿಷೇಧಿಸಿದ್ದು, ಅಧಿಕಾರಿ ಅಥವಾ ಸಿಬ್ಬಂದಿ ಪರಿಶೀಲನೆ ವೇಳೆ ನಿಯಮ ಉಲ್ಲಂಘನೆ ಕಂಡು ಬಂದರೆ ಕ್ರಮ ವಹಿಸಲಾಗುತ್ತದೆ ಎಂದು ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.

