ಮಂಗಳೂರು : ಧರ್ಮಸ್ಥಳದಲ್ಲಿ ಅನಧಿಕೃತ ಶವ ಹೂತ ಪ್ರಕರಣದ ಎಸ್ಐಟಿ ತನಿಖೆಗೆ ಹೈಕೋರ್ಟ್ ನೀಡಿದ್ದ ತಡೆಯಾಜ್ಞೆ ಇಂದು ತೆರವಾಗಿದೆ. ಮಹೇಶ್ ಶೆಟ್ಟಿ ತಿಮರೋಡಿ ಗ್ಯಾಂಗ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ಪುರಸ್ಕರಿಸಿತ್ತು. ಈಗ ಎಸ್ಐಟಿ ತನಿಖೆ ಮತ್ತೆ ಆರಂಭವಾಗಲಿದೆ. ಚಿನ್ನಯ್ಯನ ಹೇಳಿಕೆ ಆಧಾರದ ಮೇಲೆ ನಾಲ್ವರ ವಿರುದ್ಧ ಎಫ್ಐಆರ್ ದಾಖಲಾಗಿತ್ತು, ತನಿಖೆ ಮುಕ್ತಾಯಗೊಂಡರೆ ಶೀಘ್ರವೇ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಲಿದೆ.
ಅನಧಿಕೃತ ಶವ ಹೂತ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ರದ್ದು ಮಾಡಬೇಕೆಂದು ಮಹೇಶ್ ಶೆಟ್ಟಿ ತಿಮರೋಡಿ ಗ್ಯಾಂಗ್ ಅರ್ಜಿ ಸಲ್ಲಿಕೆ ಮಾಡಿದ್ದರು. ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್, ಜಯಂತ್ ಟಿ ಹಾಗೂ ವಿಠಲ ಗೌಡ ಅರ್ಜಿ ಸಲ್ಲಿಕೆ ಮಾಡಿದ್ದರು. ಇದನ್ನು ಪುರಸ್ಕರಿಸಿದ್ದ ಹೈಕೋರ್ಟ್ ವಿಚಾರಣೆಗೆ ತಾತ್ಕಾಲಿಕ ತಡೆ ನೀಡಿತ್ತು. ಆದ್ರೆ ಈಗ ಹೈಕೋರ್ಟ್ ತಡೆ ತೆರವಾಗಿದೆ.
ಈ ಹಿಂದೆ ಎಸ್ ಐಟಿ ತನಿಖೆ ಚೆನ್ನಾಗಿ ನಡೆಯುತ್ತಿದೆ ಎಂದಿದ್ದರು. ಆದರೆ ಈಗ ತನಿಖೆ ಸರಿಯಾಗಿ ನಡೆಯುತ್ತಿಲ್ಲ, ಎಂದು ದೂರು ನೀಡುತ್ತಿದ್ದಾರೆ. ಹೀಗಾಗಿ ಎಸ್ ಐಟಿ ತನಿಖೆ ಮುಂದುವರಿಯುವುದು ಎಷ್ಟು ಮುಖ್ಯ ಎಂಬುದನ್ನು ಸರ್ಕಾರದ ಪರ ವಕೀಲ ಬಿ.ಎನ್ .ಜಗದೀಶ್ ಹೈಕೋರ್ಟ್ ನಲ್ಲಿ ವಾದ ಮಂಡಿಸಿದರು. ನ್ಯಾಯಪೀಠ ಅರ್ಜಿದಾರರಿಗೆ ಕಿರುಕುಳ ಕೊಡಬಾರದು ಎಂದು ಸೂಚನೆ ಕೊಟ್ಟಿದೆ. ಆದರೆ ತನಿಖೆ ಪ್ರಕಾರ ಎಸ್ ಐಟಿ ತನಿಖಾಧಿಕಾರಿಗಳಿಗೆ ಬಂಧನ ಮಾಡುವಂತಹ ಅಧಿಕಾರವೂ ಇದೆ.
ಚಿನ್ನಯ್ಯನ ಹೇಳಿಕೆ ಆಧಾರದ ಮೇಲೆ ನಾಲ್ವರ ಮೇಲೆ ಎಫ್ ಐಆರ್ ಧಾಖಲಾಗಿತ್ತು. ಈ ಎಫ್ ಐಆರ್ ಆಧಾರದಲ್ಲಿ ತನಿಖೆಗೆ ನೋಟಿಸ್ ನೀಡಲಾಗಿತ್ತು. ಆದರೆ ತನಿಖೆಗೆ ಹಾಜರಾಗದೆ ಮಹೇಶ್ ಶೆಟ್ಟಿ ತಲೆ ಮರೆಸಿಕೊಂಡಿದ್ದರು. ಬಾರಿ ಬಾರಿ ನೋಟಿಸ್ ಕೊಡಲಾಗಿತ್ತು. ಹೀಗಾಗಿ ಬಂಧನದ ಭೀತಿ ಎದುರಾಗಿದ್ದರಿಂದ ಹೈಕೋರ್ಟ್ ಕದ ತಟ್ಟಿದ್ದರು. ಪ್ರಕರಣದಲ್ಲಿ ಅನಗತ್ಯವಾಗಿ ತನಿಖೆ ನಡೆಸಲಾಗುತ್ತಿದೆ. ಹಲವಾರು ಬಾರಿ ತನಿಖೆಗೆ ಕರೆಯಲಾಗಿದೆ. ವಿಚಾರಣೆ ಹಾದಿ ತಪ್ಪುತ್ತಿದೆ ಎಂದು ತಿಮರೋಡಿ ಗ್ಯಾಂಗ್ ಹೈಕೋರ್ಟ್ ಗೆ ಸಲ್ಲಿಸಿದ್ದ ಅರ್ಜಿಯಲ್ಲಿ ತಿಳಿಸಿದ್ದರು.
ಹೀಗಾಗಿ ಮತ್ತೆ ಎಸ್ ಐಟಿ ತನಿಖೆಯ ಬಿಸಿ ಮುಟ್ಟಲಿದೆ. ಈಗಾಗಲೇ ಎಸ್ ಐಟಿ ತನಿಖಾ ವರದಿ ಸಲ್ಲಿಕೆ ಅಕ್ಟೋಬರ್ 31 ಕ್ಕೆ ಸಲ್ಲಿಕೆಯಾಗಬೇಕಿತ್ತು, ಆದರೆ ಕೆಲವೊಂದು ಕಾರಣದಿಂದ ವಿಳಂಬವಾಗಿದೆ ಎಂದು ಗೃಹಸಚಿವ ಪರಮೇಶ್ವರ್ ಹೇಳೊದ್ದರು. ಹೀಗಾಗಿ ಸದ್ಯದಲ್ಲೇ ಪ್ರಕರಣಕ್ಕೆ ತಾರ್ಕಿಕ ಅಂತ್ಯ ಕಂಡುಬರುವ ಸಾಧ್ಯತೆ ಇದೆ.

