ಬಂಟ್ವಾಳ : ಬೆಂಗಳೂರು ಮೂಲದ ಮಧ್ಯ ವಯಸ್ಕ ವ್ಯಕ್ತಿಯೋರ್ವ ಪಾಣೆಮಂಗಳೂರು ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಂಗಳವಾರ ಬೆಳಿಗ್ಗೆ ಗೂಡಿನಬಳಿಯಲ್ಲಿ ನಡೆದಿದ್ದು, ಆತನನ್ನು ಸ್ಥಳೀಯ ಉಪವಾಸಿಗ ಮುಸ್ಲಿಂ ಯುವಕ ರಕ್ಷಿಸಿ ದಡ ಮುಟ್ಟಿಸಿದ್ದಾರೆ.

ಬೆಂಗಳೂರು ಮೂಲದ ಶಂಕರಯ್ಯ (50) ಎಂಬಾತನೇ ಆತ್ಮಹತ್ಯೆಗೆಂದು ನದಿಗೆ ಹಾರಿದ ವ್ಯಕ್ತಿ. ವೈಯುಕ್ತಿಕ ಹಾಗೂ ಕೌಟುಂಬಿಕ ಸಮಸ್ಯೆಯಿಂದಾಗಿ ಮನನೊಂದಿದ್ದ ಶಂಕರಯ್ಯ ಅವರು ಬೆಂಗಳೂರಿನಿಂದ ನೇರವಾಗಿ ಪಾಣೆಮಂಗಳೂರು ನೇತ್ರಾವತಿ ಹೊಸ ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ವ್ಯಕ್ತಿ ನೀರಿಗೆ ಹಾರಿದ್ದನ್ನು ನೋಡಿದ ಗೂಡಿನಬಳಿ ಎಂ ಕೆ ರೋಡ್ ನಿವಾಸಿ ಸಿದ್ದೀಕ್ ಅವರು ತಾನು ಉಪವಾಸಿಗ ಎಂಬುದನ್ನೂ ಲೆಕ್ಕಿಸದೆ ನೀರಿಗೆ ಧುಮುಕಿ ನೀರಿನಲ್ಲಿ ಮುಳುಗುತ್ತಿದ್ದ ವ್ಯಕ್ತಿಯನ್ನು ಟ್ಯೂಬ್ ಮೂಲಕ ದಡಕ್ಕೆ ಸೇರಿಸಿ ಜೀವ ರಕ್ಷಿಸಿದ್ದಾರೆ. ಬಳಿಕ ಶಂಕರಯ್ಯ ಅವರನ್ನು ಬಂಟ್ವಾಳ ನಗರ ಠಾಣಾ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ ಎಂದು ತಿಳಿದು ಬಂದಿದೆ.

