ಕೊಪ್ಪಳ: ತುಂಗಭದ್ರಾ ಡ್ಯಾಂ 19ನೇ ಕ್ರಸ್ಟ್ ಗೇಟ್ ಮುರಿದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಡ್ಯಾಮ್ ಸ್ಥಳಕ್ಕೆ ಇಂದು ಭೇಟಿ ನೀಡಿ ವಾಸ್ತವದ ಪರಿಸ್ಥಿತಿಯನ್ನ ಅವಲೋಕಿಸಿದರು.

ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ ಮುರಿದು ಅಪಾರ ಪ್ರಮಾಣದ ನೀರು, ನದಿಪಾತ್ರಕ್ಕೆ ಹರಿಯುತ್ತಿದ್ದು ಶನಿವಾರದಿಂದ ಮಂಗಳವಾರದವರೆಗೂ ಲಕ್ಷಾಂತರ ಕ್ಯೂಸೆಕ್ ನೀರು ನದಿ ಪಾಲಾಗಿದೆ.

ಡ್ಯಾಮಿನ ಭದ್ರತೆಯ ದೃಷ್ಟಿಯಿಂದ 29 ಕ್ರಸ್ಟ್ ಗೇಟ್ ಗಳ ಮೂಲಕ 1.10 ಲಕ್ಷ ಕ್ಯೂಸೆಕ್ ನೀರನ್ನು ನದಿ ಪಾತ್ರಕ್ಕೆ ಹರಿ ಬಿಡಲಾಗಿದೆ. ಅಪಾರ ಪ್ರಮಾಣದ ನೀರು ವ್ಯರ್ಥವಾಗಿ ನದಿ ಪಾಲು ಆಗುತ್ತಿರುವುದನ್ನು ಗಮನಿಸಿದ ಸಿಎಂ ಸಿದ್ದರಾಮಯ್ಯ ಅವರು ನೀರಾವರಿಯ ಅಧಿಕಾರಿಗಳಿಂದ ವಿವಿಧ ವಿವರಣೆಗಳನ್ನು ಪಡೆದರು. ತಜ್ಞರ ತಂಡವು ಡ್ಯಾಮಿನಲ್ಲಿ ಕಳೆದ ಮೂರು ದಿನಗಳಿಂದ ಆಗುತ್ತಿರುವ ಪ್ರತಿ ಹಂತದ ಮಾಹಿತಿಯನ್ನು ವಿವರಿಸಿದರು. ಈ ವೇಳೆ ಅನುಭವಿ ನೀರಾವರಿ ತಜ್ಞ ಕನ್ನಯ್ಯ ನಾಯ್ಡು ಅವರು ಸಿಎಂ ಅವರ ಜೊತೆ ಹತ್ತಕ್ಕೂ ಹೆಚ್ಚು ನಿಮಿಷಗಳ ಕಾಲ ಗೇಟಿನ ದುಃಸ್ಥಿತಿಯ ಕುರಿತಂತೆ, ಭದ್ರತೆಗಳ ಕುರಿತಂತೆ ಡ್ಯಾಮಿನಲ್ಲಿ ನೀರಿನ ಸಂರಕ್ಷಣೆ ಮಾಡುವ ವಿಧಾನಗಳ ಕುರಿತಂತೆ ಹಾಗೂ ಮುರಿದ ಗೇಟ್ ಸ್ಥಳದಲ್ಲಿ ಹೊಸ ಗೇಟ್ ಅಳವಡಿಕೆಗೆ ಕೈಗೊಂಡಿರುವ ಎರಡು ಹಂತದ ಯೋಜನೆಗಳ ಕುರಿತಂತೆ ಸಿಎಂ ಅವರಿಗೆ ವಿವರಣೆ ನೀಡಿದರು.

ಸಿಎಂ ಅವರ ಜೊತೆಗೆ ಆಂಧ್ರದ ನೀರಾವರಿ ಸಚಿವರೂ ಸೇರಿದಂತೆ ಹಲವು ಸಚಿವರು ವಿವಿಧ ಶಾಸಕರು ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ರೈತ ಮುಖಂಡರು ಜನಪ್ರತಿನಿಧಿಗಳು ಉಪಸ್ಥಿತರಿದ್ದರು.